ರಾಜಕೀಯ ಪತನದ ಹಾದಿಯಲ್ಲಿ ಮೋದಿ, ರಾಹುಲ್ ಭವಿಷ್ಯ
ಮಥುರಾ, ಸೆ 22 (ಪಿಟಿಐ): ಬಿಹಾರ ಚುನಾವಣೆಯ ಹೊಸ್ತಿಲಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಾಂಗ್ರೆಸ್ ಮತ್ತು ಬಿಹಾರ ಮಹಾಮೈತ್ರಿಕೂಟದ ವಾಗ್ದಾಳಿ ತೀವ್ರ ಸ್ವರೂಪ ಪಡೆಯುತ್ತಿದೆ.
ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿರುವ ಪ್ರಧಾನಿ ಮೋದಿ, ತನ್ನ ರಾಜಕೀಯ ಪತನಕ್ಕೆ ತಾನೇ ಮುನ್ನುಡಿ ಬರೆಯುತ್ತಿದ್ದಾರೆಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಉತ್ತರಪ್ರದೇಶದ ಮಥುರಾದಲ್ಲಿ ಸೋಮವಾರ (ಸೆ 21) ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ತಮ್ಮ ತಪ್ಪು ನಿರ್ಧಾರಗಳಿಂದ ಮೋದಿ ಮತ್ತು RSS ಕಾಂಗ್ರೆಸ್ಸಿಗೆ ಹೊಸ ಚೈತನ್ಯ ನೀಡುತ್ತಿವೆ ಎಂದು ಹೇಳಿದ್ದಾರೆ. (ಬಿಹಾರ ಸಮೀಕ್ಷೆ: ಭರ್ಜರಿ ಜಯದತ್ತ ಬಿಜೆಪಿ ಮೈತ್ರಿಕೂಟ)
ಮೋದೀಜಿ ಕಾಂಗ್ರೆಸ್ ಪಕ್ಷದ ಕಟ್ಟಾ ವಿರೋಧಿ, ಪ್ರತಿದಿನ ಕಾಂಗ್ರೆಸ್ ವಿರುದ್ದ ಇವರು ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತಿದೆ ಎಂದು ರಾಹುಲ್ ಗಾಂಧಿ ಗಂಭೀರ ಹೇಳಿಕೆ ನೀಡಿದ್ದಾರೆ.
ನಾವು ಆರ್ ಎಸ್ ಎಸ್ ಸಿದ್ದಾಂತದವರಲ್ಲ. ನಮ್ಮ ಪಕ್ಷಕ್ಕೆ ವಿಶ್ವದ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆ ಸ್ಟೀವ್ ಜಾಬ್ಸ್ರ ಆಪಲ್ ಮಾದರಿಯಾಗಬೇಕು. ಆ ಸಂಸ್ಥೆ ಕಾರ್ಯ ನಿರ್ವಹಿಸುವಂತೆ ನಾವೆಲ್ಲಾ ಕೆಲಸ ಮಾಡಬೇಕೆಂದು ರಾಹುಲ್ ಗಾಂಧಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ದೇಶದ ರೈತರು ಮೋದಿ ವಿರುದ್ದ ಆಕ್ರೋಶಗೊಂಡಿದ್ದಾರೆ. ಎಲ್ಲೆಲ್ಲಿ ಹೋದರೂ, ಪ್ರಧಾನಿ ವಿರುದ್ದ ರೈತರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಬೆಂಬಲ ಬೆಲೆ ನೀಡುತ್ತೇವೆಂದು ಹೇಳಿದ್ದ ಮೋದಿ ಈಗ ಎಲ್ಲಿಗೆ ಹೋದರು ಎಂದು ರಾಹುಲ್ ಟೀಕಿಸಿದ್ದಾರೆ.
(ಸಿದ್ದು ಸರಕಾರದಲ್ಲಿ ಏನಾಗುತ್ತಿದೆ ಒಮ್ಮೆ ಬಂದು ನೋಡಿ ಸ್ವಾಮಿ ಎಂದು ಸಭೆಯಲ್ಲಿ ರಾಹುಲ್ ಗೆ ಯಾರಾದ್ರೂ ಕಿವಿಮಾತು ಹೇಳಿದ್ರಾ ಎನ್ನುವುದು ತಿಳಿದು ಬಂದಿಲ್ಲ) ಮುಂದೆ ಓದಿ..
ಕಾಂಗ್ರೆಸ್ ಒಂದು ಕುಟುಂಬವಿದ್ದಂತೆ
ನಾನು ಚಿಕ್ಕವನಿದ್ದಾಗ ನನ್ನ ತಂದೆ ನಾನು ಹೇಳುವ ಮಾತನ್ನು ಕೇಳುತ್ತಿದ್ದರು, ತಂದೆ ಹೇಳುವ ಮಾತನ್ನೂ ನಾವು ಕೇಳುತ್ತಿದ್ದೆವು. ಇದರ ಅರ್ಥ ಕಾಂಗ್ರೆಸ್ಸಿನಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ವ್ಯಕ್ತ ಪಡಿಸುವ ಮುಕ್ತ.. ಮುಕ್ತ.. ಸ್ವಾಂತತ್ರ್ಯವಿದೆ - ರಾಹುಲ್ ಗಾಂಧಿ
ಕಾಂಗ್ರೆಸ್ ಐಡಿಯಾಲಜಿ
ದೇಶವನ್ನು ಕಟ್ಟಿಬೆಳೆಸಲು ಕಾಂಗ್ರೆಸ್ ಪಕ್ಷದ ಐಡಿಯಾಲಜಿ ಪ್ರಮುಖ ಪಾತ್ರವಹಿಸಿತ್ತು. ಆದರೆ ಭಾರತದ ಹೃದಯ ಭಾಗವಾಗಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿದೆ. ಇಲ್ಲಿ ಕಾಂಗ್ರೆಸ್ ಪಕ್ಷದ ಬೇರನ್ನು ಸುದೃಢಗೊಳಿಸ ಬೇಕಾಗಿದೆ - ರಾಹುಲ್ ಗಾಂಧಿ.
ಮನಸ್ಸಿನಿಂದ ದೂರವಾಗುತ್ತಿರುವ ಮೋದಿ
ಲೋಕಸಭಾ ಚುನಾವಣೆಯ ವೇಳೆ ಮೋದಿ ತನ್ನ ಭಾಷಣದಿಂದ ಜನತೆಗೆ ಹತ್ತಿರವಾಗಿದ್ದರು. ಈಗ ನಿಧಾನವಾಗಿ ಜನತೆಯ ಮನದಿಂದ ದೂರವಾಗುತ್ತಿದ್ದಾರೆ. ಕಾಂಗ್ರೆಸ್ ಅದನ್ನು ತುಂಬುವ ಪ್ರಯತ್ನ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ
ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಉತ್ತರಪ್ರದೇಶದಲ್ಲಿ, ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹೊರತು ಪಡಿಸಿ ಪಕ್ಷದ ಯಾವ ಅಭ್ಯರ್ಥಿಯೂ ಜಯಗಳಿಸಲಿಲ್ಲ. ಇದಲ್ಲದೇ ಉತ್ತರಪ್ರದೇಶ ಅಸೆಂಬ್ಲಿಯ ಒಟ್ಟು 403 ಸ್ಥಾನದಲ್ಲಿ ಕಾಂಗ್ರೆಸ್ ಕೇವಲ 28 ಸ್ಥಾನವನ್ನಷ್ಟೇ ಗೆದ್ದಿತ್ತು.
ಮೋದಿ ಹೇಳುತ್ತಿರುವುದು ಹಸಿಸುಳ್ಳು
ಯುವಕರಿಗೆ ಉದ್ಯೋಗ ದೊರೆಯುತ್ತದೆ, ಎಲ್ಲರ ಅಕೌಂಟಿಗೆ ಕಪ್ಪುಹಣದಿಂದ ಬರುವ ಹದಿನೈದು ಲಕ್ಷ ಜಮಾ ಆಗುತ್ತದೆ ಎಂದು ಮೋದಿ ಚುನಾವಣೆಯ ಸಮಯದಲ್ಲಿ ಹೇಳಿದ್ದು ಹಸಿಸುಳ್ಳು. ಮೋದಿ ಬಗ್ಗೆ ಯುವಕರು, ರೈತರು, ಸೈನಿಕರು ಬೇಸರಗೊಂಡಿದ್ದಾರೆಂದು ರಾಹುಲ್ ಗಾಂಧಿ ವಾಕ್ ಪ್ರಹಾರ ನಡೆಸಿದ್ದಾರೆ.