ಪ್ರತಿದಿನ ಎರಡ್ಮೂರು ಕೆಜಿಯಷ್ಟು ಬೈಗುಳ ತಿನ್ನುತ್ತೇನೆ: ಪ್ರಧಾನಿ ಮೋದಿ
ಹೈದರಾಬಾದ್: ದಕ್ಷಿಣ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತೆಲಂಗಾಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹಾಗೂ ಅವರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತೆಲಂಗಾಣ ಜನರ ಪ್ರತಿಷ್ಠೆ ಹಾಗೂ ಗೌರವವನ್ನು ಎತ್ತಿ ಹಿಡಿಯುವುದಾಗಿ ಮೋದಿ ಭರವಸೆ ನೀಡಿದರು.
ಹೈದರಾಬಾದ್ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಯಾವುದೇ ರೀತಿಯ ಅನ್ಯಾಯ ಹಾಗೂ ಅವಮಾನವನ್ನು ಬಿಜೆಪಿ ಸಹಿಸುವುದಿಲ್ಲ' ಎಂದು ಹೇಳಿದರು.
'ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ಎಸ್ ಪಕ್ಷವು ಜನರಿಗೆ ದ್ರೋಹ ಬಗೆದಿದೆ. ರಾಜ್ಯದಲ್ಲಿ ಕಮಲ ಅರಳಲಿದೆ' ಎಂದು ತಿಳಿಸಿದರು.
'ನಾನು ಬೈಗುಳಗಳಿಗೆ ಒಗ್ಗಿಕೊಂಡಿದ್ದೇನೆ. ಅವುಗಳನ್ನು ಪ್ರತಿದಿನ 2ರಿಂದ 3ಕೆಜಿಯಷ್ಟು ಸೇವಿಸುತ್ತೇನೆ. ಪ್ರತಿದಿನ ವಿವಿಧ ರೀತಿಯ ನಿಂದನೆಗಳನ್ನು ಕೇಳುತ್ತಲೇ ಇರುತ್ತೇನೆ. ಅವರು ನನ್ನನ್ನು ನಿಂದಿಸಲಿ. ಆದರೆ, ತೆಲಂಗಾಣದ ಜನರನ್ನು ಅವಮಾನಿಸಲು ನಾನು ಬಿಡುವುದಿಲ್ಲ. ಅದನ್ನು ಸಹಿಸಲು ಸಾಧ್ಯವಿಲ್ಲ' ಎಂದರು.
'ಕತ್ತಲು ಹೆಚ್ಚಾದಂತೆ, ಕಮಲ ಅರಳಲು ಆರಂಭಿಸುತ್ತದೆ' ಎಂದು ಅವರು ಹೇಳಿದರು. ರಾಜ್ಯದಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮೋದಿ ಮನವಿ ಮಾಡಿದರು.
'ತೆಲಂಗಾಣದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು. ಬೆಳವಣಿಗೆ ಹೊಂದಿದವರು. ರಾಜ್ಯವನ್ನು ಹಿಂದಕ್ಕೆ ತಳ್ಳಿರುವುದು ಬೇಸರದ ಸಂಗತಿ. ತೆಲಂಗಾಣ ಸರ್ಕಾರ ಹಾಗೂ ಅದರ ನಾಯಕರು ಜನರ ಪ್ರತಿಭೆಗೆ ಅನ್ಯಾಯ ಮಾಡುತ್ತಾರೆ' ಎಂದು ವಾಗ್ದಾಳಿ ನಡೆಸಿದರು.
ತೆಲಂಗಾಣ ಜನತೆ ನಂಬಿರುವ ರಾಜಕೀಯ ಪಕ್ಷವು ತೆಲಂಗಾಣಕ್ಕೆ ಬಹುದೊಡ್ಡ ದ್ರೋಹ ಬಗೆದಿದೆ. ಕತ್ತಲು ಕವಿದಾಗ ಕಮಲ ಅರಳಲು ಆರಂಭಿಸುತ್ತದೆ. ತೆಲಂಗಾಣದಲ್ಲಿ ಕಮಲ ಅರಳುವುದನ್ನು ನೀವು ನೋಡುತ್ತೀರಿ ಎಂದು ಅವರು ತಿಳಿಸಿದರು.
ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತೆರಳಿರಲಿಲ್ಲ. ಕೆಸಿಆರ್ ಮೋದಿಯವರ ಕಟುಟೀಕಾಕಾರರು. ಕೇಂದ್ರ ಸರ್ಕಾರ ಹಾಗೂ ಮೋದಿ ಧರ್ಮಗಳ ಆಧಾರದ ಮೇಲೆ ದೇಶವನ್ನು ಒಡೆಯುತ್ತಿದ್ದಾರೆ ಎಂದು ಕೆಸಿಆರ್ ಟೀಕೆ ಮಾಡಿದ್ದಾರೆ. ಇದೇ ವೇಳೆ, ತೆಲಂಗಾಣದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ.
{document1}