ರಜನಿಕಾಂತ್ಗೆ ದಾದಾ ಸಾಹೇಬ್ ಫಾಲ್ಕೆ ಗೌರವ: ಮೋದಿ ಸೇರಿದಂತೆ ಗಣ್ಯರ ಶುಭಾಶಯ
ಚೆನ್ನೈ, ಏಪ್ರಿಲ್ 1: ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ಅವರನ್ನು 51ನೇ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರದ ಗೌರವಕ್ಕೆ ಆಯ್ಕೆ ಮಾಡಲಾಗಿದೆ. 1975ರಲ್ಲಿ ಚಿತ್ರರಂಗ ಪ್ರವೇಶಿಸಿ 45 ವರ್ಷಗಳನ್ನು ಪೂರೈಸಿರುವ ರಜನಿಕಾಂತ್ ಅವರು, ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಅವರಿಗೆ ಚಿತ್ರೋದ್ಯಮಕ್ಕೆ ಸರ್ಕಾರ ನೀಡುವ ಮಹೋನ್ನತ ಗೌರವ ನೀಡಲಾಗಿದೆ.
ಡಾ. ರಾಜ್ಕುಮಾರ್, ಅಕ್ಕಿನೇನಿ ನಾಗೇಶ್ವರರಾವ್, ಕೆ. ಬಾಲಚಂದರ್ ಮುಂತಾದ ಗಣ್ಯರ ಬಳಿಕ ಈ ಪುರಸ್ಕಾರ ಪಡೆದ ದಕ್ಷಿಣ ಭಾರತದ 12ನೇ ಕಲಾವಿದ ಎಂಬ ಖ್ಯಾತಿಗೆ ರಜನಿಕಾಂತ್ ಪಾತ್ರರಾಗಿದ್ದಾರೆ. ಆದರೆ, ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ರಜನಿಕಾಂತ್ಗೆ ಈ ಪ್ರಶಸ್ತಿ ಘೋಷಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾದ ರಜನಿಕಾಂತ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅಭಿನಂದಿಸಿದ್ದಾರೆ.

ತಲೈವಾಗೆ ಅಭಿನಂದಿಸಿದ ಮೋದಿ
'ತಲೆಮಾರುಗಳಿಂದ ಜನಪ್ರಿಯರಾಗಿರುವ, ಹೆಮ್ಮೆ ಪಡುವಂತಹ ಕೆಲಸಗಳನ್ನು ಮಾಡಿರುವ, ವೈವಿಧ್ಯಮಯ ಪಾತ್ರಗಳನ್ನು ಮಾಡಿರುವ ಮತ್ತು ಪ್ರೀತಿ ಪಾತ್ರ ವ್ಯಕ್ತಿತ್ವದ ರಜನಿಕಾಂತ್' ಎಂದು ಶ್ಲಾಘಿಸಿರುವ ಮೋದಿ, 'ತಲೈವಾ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿರುವುದು ಬಹಳ ಸಂತಸದ ವಿಚಾರ. ಅವರಿಗೆ ಅಭಿನಂದನೆಗಳು' ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡಿಗರ ಪರವಾಗಿ ಶುಭಾಶಯ
'ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಜಾಗತಿಕ ಖ್ಯಾತಿ ಪಡೆದ ಕಲಾವಿದ, ಅಭಿಮಾನಿಗಳ ಪಾಲಿನ ನೆಚ್ಚಿನ ತಲೈವಾ, ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ರಾಜ್ಯದಲ್ಲಿ ಕೂಡ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಶುಭಾಶಯಗಳನ್ನು ತಿಳಿಸುತ್ತೇನೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಸಿಟಿ ರವಿ ಅಭಿನಂದನೆ
'ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗುತ್ತಿರುವ ತಲೈವಾ ರಜನಿಕಾಂತ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ತಮ್ಮ ಪೀಳಿಗೆಯ ಮಹಾನ್ ನಟರಲ್ಲಿ ಒಬ್ಬರಾದ ತಿರು ರಜನಿಕಾಂತ್ ಅವರು ಭಾರತೀಯ ಸಿನಿಮಾಕ್ಕೆ ನೀಡಿದ ಕೊಡುಗೆ ಅನನ್ಯ. ನಾನು ಈ ಸಂತಸವನ್ನು ಅವರ ಕೋಟ್ಯಂತರ ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದೇನೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ರಜನಿ ಕೊಡುಗೆ ಅದರ್ಶಪ್ರಾಯ
'ಭಾರತೀಯ ಚಿತ್ರರಂಗದ ಇತಿಹಾಸದಲ್ಲಿನ ಮಹಾನ್ ನಟರಲ್ಲಿ ಒಬ್ಬರಾದ ರಜನಿಕಾಂತ್ ಅವರಿಗೆ 2019ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಕಟಿಸಲು ಸಂತಸವಾಗುತ್ತಿದೆ. ನಟ, ನಿರ್ಮಾಪಕ ಮತ್ತು ಚಿತ್ರಕಥೆ ಬರಹಗಾರನಾಗಿ ಅವರ ಕೊಡುಗೆ ಆದರ್ಶಪ್ರಾಯ. ತೀರ್ಪುಗಾರರಾದ ಆಶಾ ಭೋಸ್ಲೆ, ಸುಭಾಷ್ ಘಾಯ್, ಮೋಹನ್ ಲಾಲ್, ಶಂಕರ್ ಮಹದೇವನ್ ಮತ್ತು ಬಿಸ್ವಜೀತ್ ಚಟರ್ಜಿ ಅವರಿಗೆ ಧನ್ಯವಾದಗಳು' ಎಂದು ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ












Click it and Unblock the Notifications