ಸನ್ಯಾಸಿಯಾಗ ಬೇಕಿದ್ದ ಮೋದಿಯನ್ನು ಅಂದು ತಡೆದವರಾರು?
ಕೆಲವೊಂದು ಘಟನೆಗಳು, ಕೆಲವೊಂದು ವ್ಯಕ್ತಿಗಳ ಆದರ್ಶಗಳು ಮನುಷ್ಯನ ಬದುಕಿನ ದಿಕ್ಕನ್ನು ಮತ್ತು ಚಿಂತನಾ ಶೈಲಿಯನ್ನೇ ಬದಲಾಯಿಸಿ ಬಿಡುತ್ತದೆ. ಅದಕ್ಕೆ ಕೊಡಬಹುದಾದ ಉದಾಹರಣೆ ಪ್ರಧಾನಿ ನರೇಂದ್ರ ಮೋದಿ.
ತನ್ನ ಹದಿನಾರರ ವಯಸ್ಸಿನಲ್ಲಿ ಸನ್ಯಾಸ ಜೀವನದತ್ತ ಆಕರ್ಷಿತರಾಗಿದ್ದ ಪ್ರಧಾನಿ ನರೇಂದ್ರ ಮೋದಿಗೆ ಅಂದು ದೀಕ್ಷೆ ನೀಡಲು ನಿರಾಕರಿಸಿದ ಸ್ವಾಮೀಜಿಯವರನ್ನು ಭೇಟಿ ಮಾಡಲು ಮೋದಿ ಇದೇ ಮೇ ಒಂಬತ್ತರಂದು ಕೋಲ್ಕತ್ತಾಗೆ ಭೇಟಿ ನೀಡಲಿದ್ದಾರೆ.
ಸನ್ಯಾಸತ್ವ ಬೇಡ ಎಂದು ರಾಜಕೀಯದತ್ತ ಒಲವು ತೋರಿಸಿದ್ದ 97 ವರ್ಷದ ಸ್ವಾಮಿ ಆತ್ಮಸ್ಥಾನಂದ ಮಹಾರಾಜ್, ರಾಮಕೃಷ್ಣ ಆಶ್ರಮದ ಪ್ರಮುಖರು. ತನ್ನ ಎರಡು ದಿನದ 'ದೀದಿ ನಾಡಿ'ನ ಭೇಟಿಯಲ್ಲಿ ಮೋದಿ, ಕೆಲವು ತಿಂಗಳಿನಿಂದ ಆಸ್ಪತ್ರೆಯಲ್ಲಿರುವ ಸ್ವಾಮೀಜಿವರನ್ನು ಭೇಟಿಯಾಗಲಿದ್ದಾರೆ. (ಮೋದಿ ಕೋಲ್ಕತ್ತಾ ಭೇಟಿ: ಭಾರೀ ಭದ್ರತೆ)
ಪ್ರಧಾನಿ ಮೋದಿ ಇಂದಿಗೂ ಸ್ವಾಮಿ ಆತ್ಮಸ್ಥಾನಂದ ಮಹಾರಾಜ್ ಅವರನ್ನು ಗುರುವೆಂದು ಪೂಜಿಸುತ್ತಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಹಲವು ಬಾರಿ ಆಶ್ರಮಕ್ಕೆ ಭೇಟಿ ನೀಡಿ ಮಹಾರಾಜ್ ಅವರ ಮಾರ್ಗದರ್ಶನವನ್ನು ಮೋದಿ ಪಡೆದಿದ್ದಾರೆ ಎಂದು ಆಶ್ರಮದ ಸಹಾಯಕ ಕಾರ್ಯದರ್ಶಿ ಸುಬಿರಾನಂದ ಮಹಾರಾಜ್, ಮೋದಿ ಕೋಲ್ಕತ್ತ ಭೇಟಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.
ಮೋದಿ ಪ್ರಧಾನಿಯಾಗಿ ಆಯ್ಕೆಯಾದ ನಂತರ ಬೇಲೂರು ಮಠಕ್ಕೆ (ಕೋಲ್ಕತ್ತಾದ ಸಮೀಪವಿರುವ ರಾಮಕೃಷ್ಣ ಮಠದ ಅಂತರಾಷ್ಟ್ರೀಯ ಪ್ರಧಾನ ಕಚೇರಿ) ಭೇಟಿ ನೀಡುವಂತೆ ಸ್ವಾಮಿ ಆತ್ಮಸ್ಥಾನಂದ ಮಹಾರಾಜ್ ಆಮಂತ್ರಣ ಕಳುಹಿಸಿದ್ದರು. ಪ್ರಧಾನಿಯಾಗಿ ಆಯ್ಕೆಯಾದ ಒಂದು ವರ್ಷದ ನಂತರ ಮೋದಿ ಆಶ್ರಮಕ್ಕೆ ಮತ್ತು ಸ್ವಾಮೀಜಿಯರನ್ನು ಭೇಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಅಂದು ಮೋದಿ ಸನ್ಯಾಸಿಯಾಗಲು ಬಯಸಿದ್ದ ಕುತೂಹಲ ಘಟನೆ, ಮೋದಿ ಪ್ರಮಾಣವಚನ ಸ್ವೀಕರಿಸಿದಾಗ ಸ್ವಾಮೀಜಿ ನೀಡಿದ್ದ ಪ್ರಸಾದವನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದರೇ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.. (ಪಿಟಿಐ)
ಸುಮಾರು ಐವತ್ತು ವರ್ಷದ ಹಿಂದಿನ ಘಟನೆ
ಇಸವಿ 1966, ಆಗಿನ್ನೂ ನರೇಂದ್ರ ದಾಮೋದರ್ ದಾಸ್ ಮೋದಿಗೆ ಇನ್ನೂ 16ರ ವರ್ಷ. ಗುಜರಾತಿನ ರಾಜಕೋಟ್ ನಲ್ಲಿ ರಾಮಕೃಷ್ಣ ಆಶ್ರಮದ ನೇತೃತ್ವವನ್ನು ವಹಿಸಿಕೊಳ್ಳಲು ಸ್ವಾಮಿ ಆತ್ಮಸ್ಥಾನಂದ ಮಹಾರಾಜ್ ಎನ್ನುವ ಸ್ವಾಮೀಜಿ ನಗರಕ್ಕೆ ಆಗಮಿಸುತ್ತಾರೆ.
ವಿವೇಕಾನಂದರ ಆದರ್ಶದ ಸ್ಪೂರ್ತಿ
ಬಾಲ್ಯದಿಂದಲೇ ಸ್ವಾಮಿ ವಿವೇಕಾನಂದರ ಆದರ್ಶದಿಂದ ಸ್ಪೂರ್ತಿ ಪಡೆದಿದ್ದ ಮೋದಿ, ಆತ್ಮಸ್ಥಾನಂದ ಮಹಾರಾಜ್ ಅವರನ್ನು ಭೇಟಿ ಮಾಡುತ್ತಾರೆ. ಅಲ್ಲದೇ ರಾಜಕೋಟ್ ಆಶ್ರಮದಲ್ಲೇ ನಿರಾಶ್ರಿತರಾಗಿ ಸೇರಿ ಕೊಳ್ಳುತ್ತಾರೆ.
ಆಧ್ಯಾತ್ಮಿಕ ಜೀವನದತ್ತ ಮೋದಿ ಒಲವು
ಆಶ್ರಮದಲ್ಲಿ ಹಲವು ವರ್ಷಗಳನ್ನು ಕಳೆದ ನಂತರ ಮೋದಿಯವರ ಚಿತ್ತ ಆಧ್ಯಾತ್ಮಿಕ ಜೀವನದತ್ತ ಸಾಗುತ್ತದೆ. ಆಶ್ರಮದಲ್ಲಿ ಆತ್ಮಸ್ಥಾನಂದ ಸ್ವಾಮೀಜಿಯವರ ಪ್ರವಚನದಿಂದ ಉತ್ತೇಜಿತರಾಗುವ ಮೋದಿ ಸನ್ಯಾಸಿಯಾಗಲು ಬಯಸುತ್ತಾರೆ.
ದೀಕ್ಷೆ ನೀಡಲು ನಿರಾಕರಣೆ
ತನ್ನ ಮನಸ್ಸಿನ ಅಭಿಲಾಷೆಯನ್ನು ಮೋದಿ, ಸ್ವಾಮಿ ಆತ್ಮಸ್ಥಾನಂದರ ಬಳಿ ತೋಡಿಕೊಳ್ಳುತ್ತಾರೆ. ಆದರೆ, ಸ್ವಾಮೀಜಿ ಮೋದಿಗೆ ಸನ್ಯಾಸತ್ವದ ದೀಕ್ಷೆ ನೀಡಲು ನಿರಾಕರಿಸಿ ಬೇಲೂರು ಮಠವನ್ನು ಸಂಪರ್ಕಿಸುವಂತೆ ಸೂಚಿಸುತ್ತಾರೆ. ಬೇಲೂರು ಮಠದಿಂದಲೂ ಮೋದಿ ಕೋರಿಕೆಗೆ ಮನ್ನಣೆ ಸಿಗುವುದಿಲ್ಲ. ಬದಲಿಗೆ ರಾಜಕೀಯದತ್ತ ಒಲವು ತೋರಲು ಆತ್ಮಸ್ಥಾನಂದ ಮಹಾರಾಜ್ ಸಲಹೆ ನೀಡುತ್ತಾರೆ. ನಂತರ ಮೋದಿ ಆಶ್ರಮವನ್ನು ತೊರೆದು RSS ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ರಾಜಕೀಯದತ್ತ ತನ್ನ ಚಿತ್ತವನ್ನು ನೆಡುತ್ತಾರೆ.
ಸಿಎಂ, ಪಿಎಂ ಆಗುತ್ತಿರಲಿಲ್ಲ
ಒಟ್ಟಿನಲ್ಲಿ, ಒಂದು ವೇಳೆ ಅಂದು ಸ್ವಾಮೀಜಿ ಮೋದಿಗೆ ಸನ್ಯಾಸತ್ವದ ದೀಕ್ಷೆ ನೀಡಿದ್ದರೆ ಮೋದಿ ಗುಜರಾತಿನ ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ ನಂತರ ದೇಶದ ಪ್ರಧಾನಿಯೂ ಆಗುತ್ತಿರಲಿಲ್ಲ. ಈ ವಿಚಾರವನ್ನು ಮೋದಿ ಹಲವು ಬಾರಿ ಸಾರ್ವಜನಿಕ ಸಭೆಯಲ್ಲಿ ಸ್ಮರಿಸಿದ್ದುಂಟು.
ಸ್ವಾಮೀಜಿ ಪ್ರಸಾದ
ಹಲವು ಬಾರಿ ಸ್ವಾಮೀಜಿಯ ಮಾರ್ಗದರ್ಶನ ಪಡೆದಿದ್ದ ಮೋದಿ, ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಸ್ವಾಮೀಜಿ ಕೋಲ್ಕತ್ತಾದಿಂದ ಹರಸಿ ಕಳುಹಿಸಿದ್ದ ಪುಷ್ಪವನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದರು ಎನ್ನುವ ಮಾತೂ ಕೇಳಿ ಬರುತ್ತಿದೆ.
ಮೋದಿ ಮತ್ತು ಮಮತಾ
ಮೋದಿಯವರ ವಿರೋಧಿ ಬಣದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಪ್ರಧಾನಿಯಾಗಿ ಇದೇ ಮೊದಲ ಬಾರಿಗೆ ಆಗಮಿಸುತ್ತಿರುವ ಮೋದಿಯವನ್ನು ಯಾವ ರೀತಿಯಲ್ಲಿ ಸ್ವಾಗತಿಸುತ್ತಾರೆ. ಶಿಷ್ಟಾಚಾರ ತೋರುತ್ತಾರಾ, ಇಲ್ಲವೋ? ಎನ್ನುವುದು ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ.
ಕೊಲ್ಕತ್ತಾದಲ್ಲಿ ಪ್ರಮುಖ ಕಾರ್ಯಕ್ರಮ
ಬೇಲೂರು ಮಠ, ಸ್ವಾಮೀಜಿಗಳ ಭೇಟಿಯ ಜೊತೆ ಪ್ರಧಾನಿ ಮೋದಿ, ಸಾಮಾಜಿಕ ಭದ್ರತಾ ಸ್ಕೀಂಗಳಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಮತ್ತು ಅಟಲ್ ಪೆನ್ಸನ್ ಯೋಜನೆಗೆ ಚಾಲನೆ ನೀಡಲಿದ್ದಾರೆ.