ದಕ್ಷಿಣದಲ್ಲಿ ಕಮಲ ಅರಳಿಸಲು ಬಿಜೆಪಿ ಪ್ಲ್ಯಾನ್: ತಮಿಳುನಾಡಿನ ಈ ಪುಣ್ಯ ಕ್ಷೇತ್ರದಿಂದ ಮೋದಿ ಸ್ಪರ್ಧೆ? ಏನಿದರ ಮಹತ್ವ?
ನವದೆಹಲಿ, ಜುಲೈ 12: ದೇಶದಲ್ಲಿ ಮುಂದಿನ ವರ್ಷ ಲೋಕಸಭಾ ಚುನಾವಣೆ ( Lok Sabha Elections 2024 ) ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸಿವೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಬೇಕೆಂದು ವಿರೋಧ ಪಕ್ಷಗಳು ಒಂದಾಗುತ್ತಿವೆ. ಹ್ಯಾಟ್ರಿಕ್ ವಿಜಯ ಸಾಧಿಸಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಆಸೆ ಹೊತ್ತಿರುವ ಬಿಜೆಪಿ ಹಲವು ಪ್ರಯತ್ನಗಳಲ್ಲಿ ತೊಡಗಿದೆ.
ಹಿಂದಿ ಭಾಷಿಗ ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ, ಗುಜರಾತ್ಗಳಲ್ಲಿ ಬಿಜೆಪಿ ಗಟ್ಟಿ ನೆಲೆಯನ್ನು ಕಂಡುಕೊಂಡಿದೆ. ಆ ರಾಜ್ಯಗಳಲ್ಲಿ ಹಿಂದುತ್ವ ಹಾಗೂ ಹಿಂದಿ ಭಾಷಾ ಅಸ್ಮಿತೆಯನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಕಳೆದ ಎರಡು ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದೆ.

ಉತ್ತರದಲ್ಲಿ ಮೋದಿ ವರ್ಚಸ್ಸು
ಉತ್ತರ ಭಾರತದಲ್ಲಿ ಪ್ರಧಾನಿ ಮೋದಿ ವರ್ಚಸ್ಸು ಸಹ ದೊಡ್ಡ ಮಟ್ಟದಲ್ಲಿಯೇ ಕೆಲಸ ಮಾಡಿದೆ. ಕಳೆದ ಚುನಾವಣೆಗಳಲ್ಲಿ ಮೋದಿ ಹೆಸರನ್ನು ಮುಂದು ಮಾಡಿ ಬಿಜೆಪಿ ಪ್ರಚಾರವನ್ನು ನಡೆಸಿದೆ. ಗುಜರಾತ್ನ ಮೋದಿ ಅವರು ವಾರಣಾಸಿಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದು ಬಿಜೆಪಿ ಹಾಗೂ ಆರ್ಎಸ್ಎಸ್ನ ಮಹತ್ವದ ರಾಜಕೀಯ ತಂತ್ರವಾಗಿದ್ದು, ಯಶಸ್ಸನ್ನು ಪಡೆಯುವಲ್ಲಿ ಸಫಲವಾಗಿವೆ.
ಹಿಂದೂ ಅಸ್ಮಿತೆ ಬಿಂಬಿಸುವ ವಾರಣಾಸಿ
ಉತ್ತರ ಪ್ರದೇಶದಲ್ಲಿರುವ ವಾರಣಾಸಿ ಅಥವಾ ಕಾಶಿ ಹಿಂದುಗಳ ಪುಣ್ಯಭೂಮಿಯಾಗಿದೆ. ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿಯು ವಾರಣಾಸಿಯನ್ನೇ ಅಸ್ತ್ರವನ್ನಾಗಿಸಿಕೊಂಡು ಚುನಾವಣೆಯಲ್ಲಿ ಯಶಸ್ಸನ್ನು ಕಂಡಿರುವುದು ಈಗ ಇತಿಹಾಸ. ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಿಂದ ಕಣಕ್ಕಿಳಿದಿದ್ದರಿಂದ ಸುತ್ತಲಿನ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿಗೆ ಲಾಭವಾಗಿದೆ ಎಂದು ನಂಬಲಾಗಿದೆ.

ದಕ್ಷಿಣದಲ್ಲಿ ಬಿಜೆಪಿಗಿಲ್ಲ ಮಣೆ
ದಕ್ಷಿಣ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲವೆಂಬುದು ಕೇಸರಿ ಪಾಳಯದ ಕೊರಗಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವವನ್ನು ಕಂಡುಕೊಂಡರೂ ಪೂರ್ಣ ಪ್ರಮಾಣದ ಬಹುಮತ ಗಳಿಸುವಲ್ಲಿ ಸಫಲವಾಗಿಲ್ಲ. ಈ ಬಾರಿಯ ವಿಧಾನಸಭಾ ಚುಣಾವಣೆಯಲ್ಲಿ ಬಿಜೆಪಿಯು ಹೀನಾಯವಾಗಿ ಸೋತಿರುವುದು ಕೇಸರಿ ನಾಯಕರನ್ನು ಚಿಂತೆಗೀಡು ಮಾಡಿದೆ.
ದಕ್ಷಿಣ ರಾಜ್ಯಗಳಲ್ಲಿ ಕಮಲ ಅರಳಿಸಲು ತಂತ್ರ
ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಶತಾಯಗತಾಯ ತಂತ್ರಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆ ತಂದುಕೊಟ್ಟರೆ, ಭವಿಷ್ಯದಲ್ಲಿ ಎಲ್ಲವೂ ಸಲೀಸಲಾಗಲಿದೆ ಎಂಬುದು ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇರಿ ಬಿಜೆಪಿಯ ಉನ್ನತ ನಾಯಕರು ತಮಿಳು ಭಾಷೆ ಹಾಗೂ ಸಂಸ್ಕೃತಿಯ ಉಲ್ಲೇಖವನ್ನು ಪದೇಪದೇ ಮಾಡುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ, ಹೊಸ ಪಾರ್ಲಿಮೆಂಟ್ ಉದ್ಘಾಟನೆಗೂ ತಮಿಳು ಸಂತರನ್ನು ಕರೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ತಮಿಳುನಾಡಿನಿಂದ ಮೋದಿ ಸ್ಪರ್ಧೆ: ದಟ್ಟಗೊಂಡ ಊಹಾಪೋಹ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಿಂದ ಪ್ರಧಾನಿ ಮೋದಿ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬಂದಿವೆ. ಈ ವಿಚಾರ ಬಿಜೆಪಿಯ ಉನ್ನತ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ತಮಿಳುನಾಡಿನಿಂದ ಮೋದಿ ಸ್ಪರ್ಧಿಸಿದರೆ, ಹಿಂದೂ ಮತಗಳು ಕ್ರೋಡಿಕರಣವಾಗುತ್ತವೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

ಕೇಳಿಬಂದಿದೆ ಪುಣ್ಯಕ್ಷೇತ್ರದ ಹೆಸರು
ತಮಿಳುನಾಡಿನ ರಾಮೇಶ್ವರ ಪುಣ್ಯಕ್ಷೇತ್ರವನ್ನು ಒಳಗೊಂಡಿರುವ ರಾಮನಾಥಪುರ ಲೋಕಸಭೆ ಕ್ಷೇತ್ರದಿಂದ ಪ್ರಧಾನಿ ಮೋದಿ ಸ್ಪರ್ಧೆಸಬಹುದು ಎಂಬ ಮಾತುಗಳು ಕೇಳಿಬಂದಿವೆ. ಒಂದು ವೇಳೆ, ಈ ಕ್ಷೇತ್ರದಿಂದ ಮೋದಿ ಸ್ಪರ್ಧಿಸಿದರೆ, ಉತ್ತರ ಪ್ರದೇಶದಲ್ಲಿ ಮಾಡಿದ ಮ್ಯಾಜಿಕ್ ಅನ್ನೇ ತಮಿಳುನಾಡಿನಲ್ಲೂ ಮಾಡಬಹುದು ಎಂಬುದು ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಅಭಿಪ್ರಾಯವಾಗಿದೆ.












Click it and Unblock the Notifications