ಪೊಲೀಸರಿಗೆ ಒಂದು ರಾಷ್ಟ್ರ ಒಂದು ಸಮವಸ್ತ್ರ: ಪ್ರಧಾನಿ ಮೋದಿ ಪ್ರಸ್ತಾಪ
ನವದೆಹಲಿ, ಅ.28: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪೊಲೀಸರಿಗಾಗಿ ಹೊಸ ಕಲ್ಪನೆಯೊಂದನ್ನು ಪ್ರಸ್ತಾಪಿಸಿದ್ದಾರೆ. "ಒಂದು ರಾಷ್ಟ್ರ, ಒಂದು ಸಮವಸ್ತ್ರ" ಎಂಬ ಕಲ್ಪನೆಯನ್ನು ಪ್ರಸ್ತಾಪಿಸಿದ್ದು, ಇದು ಹೇರಿಕೆಯಲ್ಲ ಕೇವಲ ಸಲಹೆ ಎಂದೂ ಹೇಳಿದ್ದಾರೆ.
ಪೊಲೀಸ್ ಇಲಾಖೆಯ ವಿವಿಧ ಪಡೆಗಳ ನಡುವೆ ಏಕರೂಪತೆಯನ್ನು ಹೊಂದಲು "ಒಂದು ರಾಷ್ಟ್ರ, ಒಂದು ಸಮವಸ್ತ್ರ" ಎಂಬ ಕಲ್ಪನೆ ಪ್ರಸ್ತಾಪಿಸಿದ್ದಾರೆ. ಇದು ಕೇವಲ ಸಲಹೆಯಾಗಿದೆ. ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
"ಪೊಲೀಸರಿಗೆ 'ಒಂದು ರಾಷ್ಟ್ರ, ಒಂದು ಸಮವಸ್ತ್ರ' ಕೇವಲ ಒಂದು ಕಲ್ಪನೆ. ನಾನು ಅದನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ. ಸ್ವಲ್ಪ ಯೋಚಿಸಿ. ಇಂದು ಆಗದೇ ಇರಬಹುದು, 5, 50 ಅಥವಾ 100 ವರ್ಷಗಳು ತೆಗೆದುಕೊಳ್ಳಬಹುದು, ಆದರೆ ನಾವು ಈ ಬಗ್ಗೆ ಯೋಚಿಸೋಣ" ಎಂದು ಪ್ರಧಾನಿ ಹೇಳಿದ್ದಾರೆ.

ರಾಜ್ಯ ಗೃಹ ಸಚಿವರ "ಚಿಂತನ್ ಶಿವರ್" ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶಾದ್ಯಂತ ಪೊಲೀಸರ ಗುರುತು ಒಂದೇ ಆಗಬಹುದು ಎಂದು ಹೇಳಿದ್ದಾರೆ. ಇದಲ್ಲದೆ, ಅಪರಾಧಗಳು ಮತ್ತು ಅಪರಾಧಿಗಳನ್ನು ನಿಭಾಯಿಸಲು ರಾಜ್ಯಗಳ ನಡುವೆ ಸಹಕಾರ ಅಗತ್ಯ ಎಂದು ಪ್ರಧಾನಿ ಅಭಿಪ್ರಾಯ ಪಟ್ಟಿದ್ದಾರೆ.
ಸಹಕಾರಿ ಒಕ್ಕೂಟವು ಸಂವಿಧಾನದ ಭಾವನೆ ಮಾತ್ರವಲ್ಲದೆ ರಾಜ್ಯಗಳು ಮತ್ತು ಕೇಂದ್ರದ ಜವಾಬ್ದಾರಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಭದ್ರತೆಯ ಸವಾಲುಗಳನ್ನು ಎದುರಿಸಲು ಎಲ್ಲಾ ಸಂಸ್ಥೆಗಳ ಸಂಘಟಿತ ಕ್ರಮಕ್ಕಾಗಿ ಹಳೆಯ ಕಾನೂನುಗಳನ್ನು ಪರಿಶೀಲಿಸಲು ಮತ್ತು ಪ್ರಸ್ತುತ ಸಂದರ್ಭಕ್ಕೆ ಅವುಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಗಳನ್ನು ಪ್ರಧಾನಿ ಒತ್ತಾಯಿಸಿದ್ದಾರೆ.
ದಕ್ಷತೆ, ಉತ್ತಮ ಫಲಿತಾಂಶಗಳು ಮತ್ತು ಸಾಮಾನ್ಯ ಜನರಿಗೆ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಪರಸ್ಪರ ಸಹಕರಿಸಬೇಕು ಎಂದು ಹೇಳಿದ್ದಾರೆ.

ಪ್ರಧಾನ ಮಂತ್ರಿಗಳ ಕಚೇರಿ (PMO) ಹೇಳಿಕೆಯ ಪ್ರಕಾರ, ಎರಡು ದಿನಗಳ ಚಿಂತನ್ ಶಿವರ್ ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನೀತಿ ನಿರೂಪಣೆ ಒದಗಿಸುವ ಪ್ರಯತ್ನವಾಗಿದೆ. ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 16 ರಾಜ್ಯಗಳ ಗೃಹ ಸಚಿವರು ಮತ್ತು ಉಪಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಚಿಂತನ್ ಶಿವರ್ ನಡೆಯುತ್ತಿದೆ.
ಈ ತಿಂಗಳ ಆರಂಭದಲ್ಲಿ, ಕೇಂದ್ರವು 'ಒಂದು ರಾಷ್ಟ್ರ, ಒಂದು ರಸಗೊಬ್ಬರ' ಕಲ್ಪನೆಯನ್ನು ಘೋಷಿಸಿತ್ತು. ಅದರ ಅಡಿಯಲ್ಲಿ ಎಲ್ಲಾ ಸಬ್ಸಿಡಿ ರಸಗೊಬ್ಬರಗಳನ್ನು ದೇಶಾದ್ಯಂತ 'ಭಾರತ್' ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ.












Click it and Unblock the Notifications