ನಾಗಪುರ ಬಿಲಾಸ್ಪುರ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪಿಎಂ ಮೋದಿ ಚಾಲನೆ
ಮುಂಬೈ, ಡಿಸೆಂಬರ್ 12: ನಾಗಪುರದಿಂದ ಬಿಲಾಸ್ಪುರಕ್ಕೆ ಸಂಪರ್ಕ ಕಲ್ಪಿಸುವ ದೇಶದ 6ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಉಪಸ್ಥಿತಿಯಲ್ಲಿ ನಾಗಪುರ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು.
ಆರನೇ ವಂದೇ ಭಾರತ್ ರೈಲಿನ ಸೇರ್ಪಡೆಯೊಂದಿಗೆ ಸೆಮಿ-ಹೈ-ಸ್ಪೀಡ್ ಇಂಟರ್ಸಿಟಿ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ಪ್ರಮುಖ ನಿಲ್ದಾಣಗಳು ಮತ್ತು ಸ್ಥಳಗಳನ್ನು ಒಳಗೊಂಡಿದೆ. ಇದಕ್ಕೂ ಮುನ್ನ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಮುಂದಿನ ಮೂರು ವರ್ಷಗಳಲ್ಲಿ 475 ವಂದೇ ಭಾರತ್ ರೈಲುಗಳನ್ನು ಉತ್ಪಾದಿಸುವ ಯೋಜನೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
ಭಾರತೀಯ ರೈಲ್ವೇ ಪ್ರಕಾರ, ಹೊಸ ವಂದೇ ಭಾರತ್ ರೈಲುಗಳು ಒರಗುವ ಸೀಟುಗಳು, ಸಿಸಿಟಿವಿ ಕ್ಯಾಮೆರಾಗಳು, ಸ್ವಯಂಚಾಲಿತ ಅಗ್ನಿ ಸಂವೇದಕಗಳು, ವೈಫೈ ಸೌಲಭ್ಯ, ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್ ಮತ್ತು ಜಿಪಿಎಸ್ ವ್ಯವಸ್ಥೆಗಳು ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ. ನಾಗಪುರದಿಂದ ಬಿಲಾಸ್ಪುರಕ್ಕೆ ಚಲಿಸುವ ಈ ರೈಲಿಗೂ ಮುನ್ನ ದೇಶದಲ್ಲಿ ಮೊದಲು ದೆಹಲಿಯಿಂದ ವಾರಣಾಸಿ, ದೆಹಲಿಯಿಂದ ಶ್ರೀ ವೈಷ್ಣೋದೇವಿ ಮಾತಾ ಕತ್ರಾ, ಗಾಂಧಿನಗರದಿಂದ ಮುಂಬೈ, ನವದೆಹಲಿಯಿಂದ ಅಂಬ್ ಅಂದೌರಾ ಮತ್ತು ಚೆನ್ನೈಯಿಂದ ಮೈಸೂರಿಗೆ ವಂದೇ ಭಾರತ್ ರೈಲುಗಳು ಈಗಾಗಲೇ ಓಡುತ್ತಿವೆ.
ನಾಗಪುರದಿಂದ ಬಿಲಾಸ್ಪುರ್ ನಡುವೆ ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ರೈಲು ಐದೂವರೆ ಗಂಟೆಗಳಲ್ಲಿ ತನ್ನ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ಈ ಮಾರ್ಗದ ರೈಲು ರಾಯ್ಪುರ, ದುರ್ಗ್ ಮತ್ತು ಗೊಂಡಿಯಾದಲ್ಲಿ ಮೂರು ನಿಲುಗಡೆಗಳನ್ನು ಹೊಂದಿರುತ್ತದೆ. ರೈಲು ಬಿಲಾಸ್ಪುರದಿಂದ ಬೆಳಿಗ್ಗೆ 6:45ಕ್ಕೆ ಹೊರಡುತ್ತದೆ ಮತ್ತು ಮಧ್ಯಾಹ್ನ 12:15 ಕ್ಕೆ ನಾಗಪುರ ತಲುಪುತ್ತದೆ. ನಾಗಪುರದಿಂದ ರೈಲು ಮಧ್ಯಾಹ್ನ 2 ಗಂಟೆಗೆ ಹೊರಟು ರಾತ್ರಿ 7:35 ಕ್ಕೆ ಬಿಲಾಸ್ಪುರವನ್ನು ತಲುಪುತ್ತದೆ.
ನವದೆಹಲಿ ಮತ್ತು ವಾರಣಾಸಿ ನಡುವಿನ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಫೆಬ್ರವರಿ 15, 2019 ರಂದು ಚಾಲನೆ ನೀಡಲಾಗಿದೆ. 759 ಕಿಮೀ ದೂರವನ್ನು ಕ್ರಮಿಸಲು ಪ್ರಯಾಣದ ಸಮಯ ಎಂಟು ಗಂಟೆಗಳು. ರೈಲು ದೆಹಲಿಯಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ತಲುಪುತ್ತದೆ. ಇನ್ನೊಂದು ಕಡೆಯಿಂದ ಹಿಂತಿರುಗುವಾಗ ಅದು ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿ 11 ಗಂಟೆಗೆ ರಾಷ್ಟ್ರ ರಾಜಧಾನಿಯನ್ನು ತಲುಪುತ್ತದೆ.

ಎಂಟು ಗಂಟೆಗಳಲ್ಲಿ ವೈಷ್ಣೋದೇವಿಗೆ ಪ್ರಯಾಣ
ದಿಲ್ಲಿಯಿಂದ ವೈಷ್ಣೋ ದೇವಿ, ಕತ್ರಾ ಮಾರ್ಗದಲ್ಲಿ ಭಾರತೀಯ ರೈಲ್ವೇಯಿಂದ ಮೊದಲ ವಂದೇ ಭಾರತ್ ರೈಲನ್ನು ಪ್ರಾರಂಭಿಸಲಾಯಿತು. ರೈಲು ಪ್ರಯಾಣದ ಸಮಯವನ್ನು 4 ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಇದು ರಾಷ್ಟ್ರ ರಾಜಧಾನಿಯಿಂದ ಯಾತ್ರಾಸ್ಥಳಕ್ಕೆ ಕೇವಲ 8 ಗಂಟೆಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ರೈಲು ನವದೆಹಲಿಯಿಂದ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 2 ಗಂಟೆಗೆ ಕತ್ರಾ ತಲುಪುತ್ತದೆ, ಆದರೆ ಹಿಂದಿರುಗುವ ರೈಲು ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 11 ಗಂಟೆಗೆ ರಾಷ್ಟ್ರ ರಾಜಧಾನಿಯನ್ನು ತಲುಪುತ್ತದೆ.

ವಂದೇ ಭಾರತ್ನಲ್ಲಿ ಪ್ರಧಾನಿ ಮೋದಿ ಪ್ರಯಾಣ
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30 ರಂದು ಗಾಂಧಿನಗರದಿಂದ ಮುಂಬೈಗೆ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದ್ದರು. ಬಳಿಕ ಅವರು ಗಾಂಧಿನಗರ ನಿಲ್ದಾಣದಿಂದ ಅಹಮದಾಬಾದ್ನ ಕಲುಪುರ್ ರೈಲು ನಿಲ್ದಾಣಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿದರು. ರೈಲು ಮುಂಬೈ ಸೆಂಟ್ರಲ್ ನಿಲ್ದಾಣದಿಂದ ಬೆಳಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 12.30ಕ್ಕೆ ಗುಜರಾತ್ನ ರಾಜಧಾನಿ ತಲುಪಲಿದೆ. ಇನ್ನೊಂದು ಕಡೆಯಿಂದ ಗಾಂಧಿನಗರದಿಂದ ಮಧ್ಯಾಹ್ನ 2.05ಕ್ಕೆ ಹೊರಟು ಮುಂಬೈ ಸೆಂಟ್ರಲ್ಗೆ ರಾತ್ರಿ 8.35ಕ್ಕೆ ಆಗಮಿಸಲಿದೆ. ಈ ರೈಲಿಗೆ ಸೂರತ್, ವಡೋದರಾ ಮತ್ತು ಅಹಮದಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಪ್ರಯಾಣದ ಸಮಯ 5.15 ಗಂಟೆಗಳು
ರಾಷ್ಟ್ರೀಯ ರಾಜಧಾನಿ ನವದೆಹಲಿ ಮತ್ತು ಹಿಮಾಚಲದ ಅಂಬ್ ಅಂಡೌರಾ ನಡುವಿನ ವಂದೇ ಭಾರತ್ ರೈಲನ್ನು ವಿಧಾನಸಭೆ ಚುನಾವಣೆಗೆ ಮುನ್ನ ನವೆಂಬರ್ನಲ್ಲಿ ಪ್ರಾರಂಭಿಸಲಾಯಿತು. ರೈಲು ಬೆಳಿಗ್ಗೆ 5:50 ಕ್ಕೆ ರಾಷ್ಟ್ರ ರಾಜಧಾನಿಯಿಂದ ಹೊರಟು 11:05 ಕ್ಕೆ ಅಂಬ್ ಅಂಡೌರಾ ರೈಲು ನಿಲ್ದಾಣವನ್ನು ತಲುಪುತ್ತದೆ. ಪ್ರಯಾಣವು 5.15 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇನ್ನೊಂದು ಕಡೆಯಿಂದ ರೈಲು ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗಿ ಸಂಜೆ 6:25 ಕ್ಕೆ ನವದೆಹಲಿ ತಲುಪುತ್ತದೆ.

ಚೆನ್ನೈನಿಂದ ಮೈಸೂರು ತಲುಪಲು ಆರೂವರೆ ಗಂಟೆ ಬೇಕು
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲನ್ನು ಚೆನ್ನೈ ಮತ್ತು ಮೈಸೂರು ನಡುವೆ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಈ ರೈಲು ಎರಡೂ ಕಡೆಗಳಲ್ಲಿ ಪ್ರಯಾಣಿಸಲು ಒಟ್ಟು ಆರೂವರೆ ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ರೈಲು ಬೆಳಿಗ್ಗೆ 5:50 ಕ್ಕೆ ಚೆನ್ನೈನ ಎಂಜಿಆರ್ ಕೇಂದ್ರ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12:20 ಕ್ಕೆ ಮೈಸೂರು ತಲುಪುತ್ತದೆ. ಹಿಂತಿರುಗುವಾಗ, ಅದು ಮಧ್ಯಾಹ್ನ 1:05 ಕ್ಕೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿ 7:30 ಕ್ಕೆ ಚೆನ್ನೈ ತಲುಪುತ್ತದೆ.












Click it and Unblock the Notifications