ಮೋದಿ ಚಲಿಸುವ ಕಾರಿನ ಮೇಲೆ ಆತ್ಮಹತ್ಯಾ ದಾಳಿಗೆ ಸಂಚು?
ನವದೆಹಲಿ, ಆ 7: ದೇಶದ ಈ ಹಿಂದಿನ ಪ್ರಧಾನಿಗಳಿಗಿಂತ ಹೆಚ್ಚು ಅಪಾಯ ಈ ಬಾರಿ ನರೇಂದ್ರ ಮೋದಿ ಮೇಲಿದೆ. ಅವರು ಚಲಿಸುವ ಕಾರಿನ ಮೇಲೆ ಆತ್ಮಹತ್ಯಾ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರಹಾಕಿದೆ.
ಸ್ವಾತಂತ್ರ್ಯೋತ್ಸವದ ದಿನದಂದು ಪಾಕ್ ಮೂಲದ ಉಗ್ರ ಸಂಘಟನೆಗಳು ಪ್ರಧಾನಿ ಚಲಿಸುವ ಕಾರಿನ ಮೇಲೆ ಮತ್ತು ರಾಜಧಾನಿ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸರ್ವ ಸನ್ನದ್ಧವಾಗಿದೆ ಎಂದು ಬೇಹುಗಾರಿಕೆ ಇಲಾಖೆಯ ವರದಿಯನ್ನು ಉಲ್ಲೇಖಿಸಿ ಡೈಲಿ ಭಾಸ್ಕರ್ ಪತ್ರಿಕೆ ವರದಿ ಮಾಡಿದೆ.
ಹಿಂದಿನ ಪ್ರಧಾನಿಗಳಿಗಿಂತ ನರೇಂದ್ರ ಮೋದಿಗೆ ಭಾರೀ ಅಪಾಯ ಎದುರಾಗಿದೆ. ಪಾಕ್ ಮೂಲದ ಇಂಡಿಯನ್ ಮುಜಾಹಿದೀನ್, ಲಷ್ಕರ್ - ಇ -ತೊಯ್ಬಾ ಮತ್ತು ಸಿಮಿ ಉಗ್ರ ಸಂಘಟನೆಗಳ ಪ್ರಮುಖ ಟಾರ್ಗೆಟ್ ಮೋದಿ. ಆತ್ಮಹತ್ಯಾ ದಾಳಿಯ ಜೊತೆಗೆ 26/11 ಮಾದರಿಯಲ್ಲಿ ದಾಳಿ ನಡೆಸಲು ಉಗ್ರ ಸಂಘಟನೆಗಳು ಸಜ್ಜಾಗಿದೆ ಎನ್ನುವ ಸುದ್ದಿಯನ್ನು ಬೇಹುಗಾರಿಕೆ ಇಲಾಖೆ ಕಲೆಹಾಕಿದೆ.
ಮೋದಿ ಸ್ವಾತಂತ್ರ್ಯೋತ್ಸದ ದಿನದಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡುವ ಭಾಷಣವನ್ನು ಹಾಳುಗೆಡವುದೇ ಉಗ್ರರ ಮೊದಲ ಆದ್ಯತೆ. ಹಾಗಾಗಿ, ಕೆಂಪುಕೋಟೆ ಸುತ್ತಮುತ್ತ ಸರ್ಪಗಾವಲು ಹಾಕಬೇಕೆಂದು ಬೇಹುಗಾರಿಕಾ ಇಲಾಖೆ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದೆ. (ಚಿತ್ರ: ಪಿಟಿಐ)
ಕೆಂಪುಕೋಟೆಯಲ್ಲಿ ಮೋದಿ ಭಾಷಣ
ಚುನಾವಣೆಗೆ ಮುನ್ನ ಕೆಂಪುಕೋಟೆಯನ್ನು ಹೋಲುವ ಪ್ರತಿಕೃತಿಯ ಎದುರು ಮೋದಿ ಸಾರ್ವಜನಿಕ ಸಭೆ ನಡೆಸಿದ್ದರು. ಈಗ ಕೆಂಪುಕೋಟೆಯಲ್ಲಿ ಮೋದಿಗೆ ಅಪಾಯದ ಚಿಹ್ನೆ ಗೋಚರಿಸಿದೆ. ಕೆಂಪುಕೋಟೆಗೆ ಪ್ರಧಾನಿ ಹಾದುಹೋಗುವ ದಾರಿಯ ಮೂಲಕವೂ ಮೋದಿ ಮೇಲೆ ದಾಳಿ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ದೆಹಲಿಯ ಇತರ ಕಡೆ ಕೂಡಾ ಸ್ಫೋಟಕ್ಕೆ ಸಂಚು
ದೆಹಲಿಯ ಪ್ರಮುಖ ಮಾರುಕಟ್ಟೆಗಳು, ಧಾರ್ಮಿಕ ಕೇಂದ್ರಗಳು, ಜನನಿಬಿಡ ಪ್ರದೇಶಗಳ ಮೇಲೂ ಉಗ್ರರು ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಮಾಹಿತಿಯನ್ನೂ ಗುಪ್ತಚರ ಇಲಾಖೆ ಗೃಹ ಸಚಿವಾಲಯಕ್ಕೆ ರವಾನಿಸಿದೆ.
ಕೆಂಪುಕೋಟೆ ಸುತ್ತಮುತ್ತ ವೈಮಾನಿಕ ಕಾವಲು
ಗುಪ್ತಚರ ಇಲಾಖೆಯ ಮಾಹಿತಿ ಬರುತ್ತಿದ್ದಂತೆಯೇ, ಗೃಹ ಸಚಿವಾಲಯ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲು ನಿರ್ಧರಿಸಿದೆ. ಕೆಂಪುಕೊಟೆ ಸುತ್ತಮುತ್ತ ವೈಮಾನಿಕ ಕಾವಲು, ಮತ್ತು ದಾಳಿ ತಡೆಗೆ ಮುಂದಾಗಿದೆ.
ಆಗಸ್ಟ್ ಹದಿನೈದರ ಭದ್ರತೆ
ವೈಮಾನಿಕ ಕಾವಲಿನ ಜೊತೆಗೆ ಕೆಂಪುಕೋಟೆಯ ಸುತ್ತಮುತ್ತಲಿನ ಬಹುಮಹಡಿ ಕಟ್ಟಡಗಳ ಮೇಲೆ ಶಾರ್ಪ್ ಶೂಟರುಗಳನ್ನು ನಿಯೋಜಿಸಲು ಸಚಿವಾಲಯ ನಿರ್ಧರಿಸಿದೆ.
ಸಾರ್ವಜನಿಕ ಪ್ರವೇಶ ನಿಷಿದ್ದ
ಕೆಂಪುಕೋಟೆಯ ಸುತ್ತಮುತ್ತ ಮತ್ತು ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು ಸಾಗುವ ದಾರಿಯ ಒಂದು ಕಿಲೋಮೀಟರ್ ದೂರದ ವರೆಗೆ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಹೇರಲು ಸಚಿವಾಲಯ ನಿರ್ಧರಿಸಿದೆ. NSG, ಅರೆ ಸೇನಾಪಡೆ, ದೆಹಲಿ ಪೊಲೀಸರು ಸೇರಿದಂತೆ ಇಪ್ಪತ್ತು ಸಾವಿರ ಭದ್ರತಾ ಪಡೆಗಳನ್ನು ಸಚಿವಾಲಯ ನಿಯೋಜಿಸಲಿದೆ.