ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ಕರೆ
ನವದೆಹಲಿ, ಮೇ.12: ನೊವೆಲ್ ಕೊರನಾ ವೈರಸ್ ವಿರುದ್ಧ ಭಾರತದ ಹೋರಾಟದ ಪರಿಯನ್ನು ಕಂಡು ವಿಶ್ವವೇ ನಿಬ್ಬೆರಗಾಗಿದೆ. ದೈತ್ಯ ರಾಷ್ಟ್ರಗಳೇ ಕೊವಿಡ್-19 ಮಹಾಮಾರಿ ಕೈಗೆ ಸಿಲುಕಿ ನಲುಗುತ್ತಿದ್ದು, ಜಗತ್ತಿನ ಎದುರು ಭಾರತ ಆಶಾಕಿರಣವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ಲಾಕ್ ಡೌನ್ ಬಳಿಕ 5ನೇ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯ ಸ್ವಾವಲಂಬನೆಯ ಮಂತ್ರ ಜಪಿಸಿದರು. ಕೊರೊನಾ ವೈರಸ್ ಸೋಂಕು ಮೊದಲಿಗೆ ಕಾಣಿಸಿಕೊಂಡಾಗ ಭಾರತದಲ್ಲಿ ಉತ್ಪಾದಿಸುವ ಎನ್-95 ಮಾಸ್ಕ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿತು.
ಭಾರತೀಯರಿಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಪ್ರಧಾನಮಂತ್ರಿ!
ವಿಶ್ವವು ಕೊರೊನಾ ವೈರಸ್ ಎದುರು ಹೋರಾಟ ನಡೆಸುತ್ತಿದ್ದ ಸಂದಿಗ್ಘ ಪರಿಸ್ಥಿತಿಯಲ್ಲೇ ಮಹಾಮಾರಿ ಭಾರತಕ್ಕೂ ಲಗ್ಗೆ ಇಟ್ಟಿತು. ಅಂದು ದೇಶದಲ್ಲಿ ಒಂದೇ ಒಂದು ಪಿಪಿಇ ಕಿಟ್ ಗಳು ಉತ್ಪಾದನೆ ಆಗುತ್ತಿರಲಿಲ್ಲ. ಆದರೆ ಇಂದು ದೇಶ ಮೊದಲಿನಂತೆ ಇಲ್ಲ. ಈಗ ದೇಶದಲ್ಲಿ ಪ್ರತಿನಿತ್ಯ 2 ಲಕ್ಷ ಪಿಪಿಇ ಕಿಟ್ ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಲೋಕಲ್ To ಗ್ಲೋಬಲ್ ಪ್ರಧಾನಿ ಹೇಳಿದ ಸೀಕ್ರೆಟ್:
ಸ್ವಾವಲಂಭಿ ಭಾರತ ನಿರ್ಮಾಣದ ಮೂಲಕ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು. ಇಂದು ಗ್ಲೋಬಲ್ ಬ್ರ್ಯಾಂಡ್ ಎನಿಸಿರುವ ವಸ್ತುಗಳೆಲ್ಲ ಆರಂಭದಲ್ಲಿ ಲೋಕಲ್ ಆಗಿದ್ದವು. ಭಾರತದಲ್ಲಿ ಕೂಡಾ ಸ್ವದೇಶಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು.
ಕೇಂದ್ರ ಸರ್ಕಾರವು ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ನಲ್ಲಿ ಭೂಮಿ, ರೈತರು, ಶ್ರಮಿಕರು, ಕಾರ್ಮಿಕರು ಹಾಗೂ ಸಣ್ಣ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಂಘಟಿತ ಮತ್ತು ಅಸಂಘಟಿತ ವಲಯಗಳಿಗೆಲ್ಲ ಆರ್ಥಿಕ ಪ್ಯಾಕೇಜ್ ಪೂರಕವಾಗಲಿದೆ. ಬಡವರು, ಕಾರ್ಮಿಕರು, ವಲಸೆ ಕಾರ್ಮಿಕರು ಹೀಗೆ ಎಲ್ಲ ವರ್ಗದವರಿಗೂ ಸಿಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.