ಮಹಾತ್ಮ ಗಾಂಧಿ ಜೊತೆಗೆ ಹೋಲಿಕೆ ಮಾಡಬೇಡಿ ಎಂದ ರಾಹುಲ್ ಗಾಂಧಿ
ಜೈಪುರ್, ಡಿಸೆಂಬರ್ 15: ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ನಡೆಸುತ್ತಿರುವ ಸಂಸದ ರಾಹುಲ್ ಗಾಂಧಿ, ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಮಹತ್ವದ ಸಂದೇಶವನ್ನು ನೀಡಿದ್ದಾರೆ. ತಮ್ಮನ್ನು ಮಹಾತ್ಮ ಗಾಂಧಿಗೆ ಹೋಲಿಸಿದರೆ ತಪ್ಪಾಗುವುದು ಎಂದು ಉಲ್ಲೇಖಿಸಿದರು.
"ಇದು ಸಂಪೂರ್ಣವಾಗಿ ತಪ್ಪು, ನಾವು ಒಂದೇ ಹಂತದವರಲ್ಲ ಮತ್ತು ಹೋಲಿಕೆಗೂ ಸೂಕ್ತವಲ್ಲ. ಅವರು ಮಹಾನ್ ವ್ಯಕ್ತಿ. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು, 10-12 ವರ್ಷಗಳ ಕಾಲ ಜೈಲಿನಲ್ಲಿ ಇದ್ದರು. ಯಾರೂ ಅವರನ್ನು ತುಂಬಲು ಸಾಧ್ಯವಿಲ್ಲ. ಕಾರ್ಯಕರ್ತರು ನನ್ನ ಹೆಸರನ್ನು ಅವರ ಜೊತೆಗೆ ಎಂದಿಗೂ ಹೋಲಿಕೆ ಮಾಡಬಾರದು, " ಎಂದು ರಾಹುಲ್ ಗಾಂಧಿ ಹೇಳಿದರು.
"ರಾಜೀವ್ ಗಾಂಧಿ ಮತ್ತು ಇಂದಿರಾಗಾಂಧಿ ಕಾರ್ಯವು ಚೆನ್ನಾಗಿಯೇ ಇದ್ದರೂ ಅವರೀಗ ಹುತಾತ್ಮರಾಗಿದ್ದಾರೆ. ಅದರ ಬಗ್ಗೆ ಕಾಂಗ್ರೆಸ್ ಪ್ರತಿ ಸಭೆಯಲ್ಲೂ ತಲೆಕೆಡಿಸಿಕೊಳ್ಳಬಾರದು. ಇಂದಿರಾಗಾಂಧಿ, ರಾಜೀವ್ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿಯವರು ಹಲವು ಕೊಡುಗೆ ನೀಡಿದ್ದಾರೆ. ಅವರು ತಮ್ಮ ಸೇವೆಯನ್ನು ಸಲ್ಲಿಸಿದ್ದು ಆಗಿದೆ, ಈಗ ನಾವು ಏನು ಮಾಡಲಿದ್ದೇವೆ ಎಂಬುದರ ಮೇಲೆ ನಾವು ಗಮನಹರಿಸಬೇಕು. ನಾವು ಜನರಿಗೆ ಏನು ಮಾಡುತ್ತಿದ್ದೇವೆ ಎಂಬುದರ ಕುರಿತು ಯೋಚಿಸುವುದು ಉತ್ತಮ," ಎಂದು ರಾಹುಲ್ ಗಾಂಧಿ ಹೇಳಿದರು.

ಕಾರ್ಯಕರ್ತರಿಗೆ "ಕಠಿಣ" ಸಂದೇಶ:
ರಾಜಸ್ಥಾನದಲ್ಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಮುಖ ನಾಯಕರು, ಕಾರ್ಯಕರ್ತರು, ತಂತ್ರಜ್ಞರು ಮತ್ತು ಮನರಂಜನಾ ಉದ್ಯಮ ಮತ್ತು ನಾಗರಿಕ ಸಮಾಜದ ಪ್ರಮುಖ ವ್ಯಕ್ತಿಗಳು ಸೇರಿಕೊಂಡಿದ್ದಾರೆ. ಬುಧವಾರವಷ್ಟೇ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಮೆರವಣಿಗೆಯಲ್ಲಿ ಸ್ವಲ್ಪ ಸಮಯದವರೆಗೆ ಕಾಣಿಸಿಕೊಂಡರು. ಈ ವೇಳೆ ರಾಹುಲ್ ಗಾಂಧಿಯವರೊಂದಿಗೆ ಸುದೀರ್ಘ ವಿಚಾರ ವಿನಿಮಯ ಮಾಡಿಕೊಂಡಿದ್ದರು. 100 ದಿನಗಳ ಮೆರವಣಿಗೆಯ ಕೊನೆಯಲ್ಲಿ, ಪಕ್ಷದ ಹಿರಿಯ ನಾಯಕರು ಮತ್ತು ವೀಕ್ಷಕರು ತಾವು ಕೆಲವು ಉದ್ದೇಶಗಳನ್ನು ಸಾಧಿಸಿದ್ದೇವೆ ಎಂದು ಭಾವಿಸಿದರು.
"ಇದು ರಾಹುಲ್ ಗಾಂಧಿಯವರ ರಾಜಕೀಯ ಬ್ರ್ಯಾಂಡ್ ಅನ್ನು ಪುನರುಜ್ಜೀವನಗೊಳಿಸಿದೆ. ಬಿಜೆಪಿಯು ತಮ್ಮ 'ನಕಲಿ ಸುದ್ದಿ ದುರುದ್ದೇಶಪೂರಿತ ಪ್ರಚಾರ' ಬಳಸಿಕೊಂಡು ಇನ್ನು ಮುಂದೆ ರಾಹುಲ್ ಗಾಂಧಿಯವರನ್ನು ಅಪಹಾಸ್ಯ ಮಾಡಲು ಸಾಧ್ಯವಿಲ್ಲ. ಎರಡನೆಯದಾಗಿ, ಕಾಂಗ್ರೆಸ್ ಅಂತಿಮವಾಗಿ ಈ ಜನಾಂದೋಲನದ ಮೂಲಕ ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ," ಎಂದು ಪಕ್ಷದ ಮಾಜಿ ನಾಯಕ ಸಂಜಯ್ ಝಾ ಹೇಳಿದರು.












Click it and Unblock the Notifications