ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಪಿಣರಾಯಿ ನೇರ ಹೊಣೆ : ಅಮಿತ್ ಶಾ
ಪಯ್ಯನೂರು, ಅಕ್ಟೋಬರ್ 3: ಕೇರಳದಲ್ಲಿ 120ಕ್ಕೂ ಹೆಚ್ಚು ಬಿಜೆಪಿ ಮತ್ತು ಆರ್.ಎಸ್.ಎಸ್ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇರ ಕಾರಣ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಬ್ಬರಿಸಿದ್ದಾರೆ.
ಕೇರಳ ಬಿಜೆಪಿ ಘಟಕ ಆಯೋಜಿಸಿರುವ 15ದಿನಗಳ ಜನರಕ್ಷಾ ಯಾತ್ರೆಗೆ ಕಣ್ಣೂರಿನ ಪಯ್ಯನೂರಿನಲ್ಲಿ ಚಾಲನೆ ನೀಡಿ ಅಮಿತ್ ಶಾ ಮಾತನಾಡುತ್ತಿದ್ದರು.

ತಮ್ಮ ಭಾಷಣದುದ್ದಕ್ಕೂ ಕಮ್ಯೂನಿಷ್ಟ್ ಪಕ್ಷದ ವಿರುದ್ಧ ಹರಿಹಾಯ್ದ ಅಮಿತ್ ಶಾ, "ಯಾವಾಗೆಲ್ಲಾ ಎಡಪಂಥೀಯರು ಅಧಿಕಾರಕ್ಕೇರುತ್ತಾರೋ ಆಗೆಲ್ಲಾ ಕೇರಳದಲ್ಲಿ ಹಿಂಸೆಯ ಸರಣಿ ಆರಂಭವಾಗುತ್ತದೆ. ಇಲ್ಲಿಯವರೆಗೆ ಕೇರಳದಲ್ಲಿ 120ಕ್ಕೂ ಹೆಚ್ಚು ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕ್ಷೇತ್ರದಲ್ಲೇ 80ಕ್ಕೂ ಹೆಚ್ಚು ಕಾರ್ಯಕರ್ತರು ಕೊಲೆಯಾಗಿದ್ದಾರೆ. ಸಾರ್ವಜನಿಕರಿಗೆ ಅವರು ಉತ್ತರ ನೀಡಲೇಬೇಕು," ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ಕೇರಳ, ತ್ರಿಪುರ, ಪಶ್ಚಿಮ ಬಂಗಾಳ ಸೇರಿದಂತೆ ಎಲ್ಲೆಲ್ಲಾ ಕಮ್ಯೂನಿಸ್ಟ್ ಪಕ್ಷ ಅಧಿಕಾರಕ್ಕೇರುತ್ತೋ , ಅಲ್ಲೆಲ್ಲಾ ರಾಜಕೀಯ ಹತ್ಯೆಗಳು ನಡೆಯುತ್ತವೆ ಎಂದು ಆರೋಪಿಸಿದ್ದಾರೆ. ಭಾಷಣದಲ್ಲಿ ಶಾ, ಕೊಲೆಗಳ ಬಗ್ಗೆ ಮಾನವ ಹಕ್ಕು ಸಂಘಟನೆಗಳು ಮೌನಕ್ಕೆ ಜಾರಿರುವುದೇಕೆ ಎಂದೂ ಪ್ರಶ್ನಿಸಿದ್ದಾರೆ.
ಇಂದು ಮುಂಜಾನೆ 1.30ಕ್ಕೆ ಮಂಗಳೂರಿಗೆ ಆಗಮಿಸಿದ ಅಮಿತ್ ಶಾ ರಾತ್ರಿಯೆ ಕಣ್ಣೂರಿಗೆ ಪ್ರಯಾಣಿಸಿದರು. ಇಂದು ಮುಂಜಾನೆ ಕಣ್ಣೂರಿನ ಜನಪ್ರಿಯ ತಳಿಪರಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶಾ ನಂತರ ಕೊಲೆಯಾದ ಕಾರ್ಯಕರ್ತರ ಭಾವಚಿತ್ರಗಳ ಪ್ರದರ್ಶನ ಉದ್ಘಾಟಿಸಿದರು. ನಂತರ ಪಯ್ಯನೂರಿನಲ್ಲಿ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿದರು.












Click it and Unblock the Notifications