ಹುಲಿ ಬೇಟೆ ಆಡಿದ್ದೇವೆ ಅಂದರೆ ಅದರ ಕಳೇಬರ ಎಲ್ಲಿ?: ಸರಕಾರಕ್ಕೆ ಅನ್ಸಾರಿ ಪ್ರಶ್ನೆ
ಬಾಲಾಕೋಟ್ ವಾಯು ದಾಳಿಯಲ್ಲಿ ಏನು ಮಾಡಲಾಯಿತು ಹಾಗೂ ಸಾಧಿಸಿದ್ದೇನು ಎಂದು ಪ್ರಶ್ನೆ ಮಾಡುವ ಹಕ್ಕು ಜನರಿಗೆ ಇದೆ. ಅಂಥ ಪ್ರಶ್ನೆಗಳಿಗೆ ಸರಕಾರ ಉತ್ತರಿಸಲೇ ಬೇಕು ಎಂದು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನರೇಂದ್ರ ಮೋದಿ ಅವರ ಸರಕಾರ ಮಿಶ್ರ ದಾಖಲೆ ಹೊಂದಿದೆ. ತುಂಬ ಎತ್ತರದ ನಿರೀಕ್ಷೆ ಜತೆ ಆರಂಭವಾದರೂ ಅದು ಪೂರೈಸಿದ ಭರವಸೆಗಳು ಬಹಳ ದೂರ ಇವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬಾಲಾಕೋಟ್ ದಾಳಿ ಹಾಗೂ ಪಾಕಿಸ್ತಾನದ ವಿಮಾನ ಹೊಡೆದುರುಳಿಸಿದ ಬಗ್ಗೆ ಸರಕಾರ ಅಥವಾ ಸೈನ್ಯವನ್ನು ಪ್ರಶ್ನೆ ಮಾಡುವ ಹಕ್ಕಿದೆಯಾ ಅಥವಾ ಇದು ದೇಶಪ್ರೇಮದ ಪ್ರಶ್ನೆಯಾ ಎಂದು ಸಂದರ್ಶನದಲ್ಲಿ ಕೇಳಿದಾಗ, ಇದು ನಾಗರಿಕರ ಹಕ್ಕು. ವಿದೇಶಾಂಗ ನೀತಿ ಹಾಗೂ ರಕ್ಷಣಾ ವಿಚಾರದ ಬಗ್ಗೆ ಪ್ರಶ್ನಿಸಬಹುದು ಎಂದಿದ್ದಾರೆ.

ನಾವು ಬಾಲಾಕೋಟ್ ನಲ್ಲಿ ಮಾಡಿದ್ದೇನು, ಅಲ್ಲಿ ಸಾಧಿಸಿದ್ದೇನು, ಅದರ ಅಂತಿಮ ಫಲಿತಾಂಶ ಏನು ಎಂದು ಜನರಿಗೆ ಪ್ರಶ್ನಿಸುವ ಹಕ್ಕಿದೆ. ದೇಶದ ಹೊರಗಡೆಯಿಂದ ನಂಬಲರ್ಹ ಮೂಲಗಳಿಂದ ಸಾಕಷ್ಟು ಸಾಕ್ಷ್ಯಾಧಾರ ಸಿಕ್ಕಿದೆ. ಅದನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು ಪಾಕಿಸ್ತಾನ ವಿಮಾನವನ್ನು ಹೊಡೆದುರುಳಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ನಾನು ಹುಲಿ ಬೇಟೆ ಆಡಿದೆ ಅಂದರೆ, ಕೊಂದ ಹುಲಿಯ ಕಳೇಬರವನ್ನು ತೋರಿಸಬೇಕು ಅಲ್ಲವಾ ಎಂದು ಹೇಳಿದ್ದಾರೆ.
ನನಗೆ ವಾಯು ಸೇನೆಯ ತಾಂತ್ರಿಕತೆಯ ಬಗ್ಗೆ ಗೊತ್ತಿಲ್ಲ. ಒಂದು ಕಡೆ ವಿಮನ ಹೊಡೆದುರುಳಿಸಿದ್ದೇವೆ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಇಲ್ಲ ಎನ್ನುವಾಗ ಖಂಡಿತವಾಗಿ ಮಧ್ಯ ಇನ್ನೇನೋ ಇರಬೇಕು ಎಂದು ಹಮೀದ್ ಅನ್ಸಾರಿ ಅಭಿಪ್ರಾಯ ಪಟ್ಟಿದ್ದಾರೆ.
ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿರುವ ಬಗ್ಗೆ ಪ್ರಶ್ನಿಸಿದ ಅವರು, ಇದರಿಂದ ಏನು ಸಂದೇಶ ರವಾನೆ ಆಗುತ್ತದೆ? ಇದರ ಹಿಂದಿನ ಉದ್ದೇಶ ಏನು? ಆಕೆಯನ್ನು ಅಭ್ಯರ್ಥಿ ಎಂದು ಘೋಷಿಸಿದ ನಂತರ ಬಾಬ್ರಿ ಮಸೀದಿ ಕೆಡವಿದ್ದರಲ್ಲಿನ ತನ್ನ ಪಾತ್ರದ ಬಗ್ಗೆ ಹೇಳಿದ್ದರ ಬಗ್ಗೆ ಕೂಡ ಪ್ರಶ್ನೆಗಳಿವೆ ಎಂದಿದ್ದಾರೆ.
ಆ ಕೃತ್ಯದಲ್ಲಿ ಭಾಗಿಯಾಗಿದ್ದ ಎಲ್ಲರ ವಿರುದ್ಧ ಸಮಗ್ರವಾಗಿ ಕ್ರಮ ಕೈಗೊಳ್ಳಲಾಗಿದೆ. ಇದೀಗ ಸಾಧ್ವಿ ಹೇಳಿಕೆಯನ್ನು ಗಣನೆಗೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.












Click it and Unblock the Notifications