ಹೂಂಕಾರ್ ಸಭೆ: 4ಇಂಡಿಯನ್ ಮುಜಾಹಿದ್ದೀನ್ ಉಗ್ರರ ಸೆರೆ
ಪಾಟ್ನಾ, ಮೇ 21: ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣಾ ಬಹಿರಂಗ ಪ್ರಚಾರದಲ್ಲಿ ತೊಡಗಿದ್ದಾಗ ಅವರನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟಿಸಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ನಾಲ್ವರು ಶಂಕಿತ ಉಗ್ರರನ್ನು ಇಂದು ಬುಧವಾರ ಬಂಧಿಸಲಾಗಿದೆ.
ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹಾಗೂ ರಾಂಚಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐಎಂ ಶಂಕಿತ ಉಗ್ರರಾದ ಹೈದರ್ (ಬ್ಲ್ಯಾಕ್ ಬ್ಯೂಟಿ), ನುಮಾನ್, ತೌಫಿಕ್ ಮತ್ತು ಮುಜಿಬುಲ್ಲಾ ಎಂಬುವರನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
2013ರ ಅಕ್ಟೋಬರ್ 27ರಂದು ಪಾಟ್ನಾದಲ್ಲಿ ನರೇಂದ್ರ ಮೋದಿ ಹೂಂಕಾರ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಅದಕ್ಕೂ ಮುನ್ನ ಎರಡು ಕಡೆ ಬಾಂಬ್ ಸ್ಫೋಟಿಸಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಎನ್ಐಎ, ಬಿಹಾರ ಹಾಗೂ ರಾಂಚಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಪ್ರಮುಖ ಆರೋಪಿ ತೆಹಸಿನ್ ಅಖ್ತರನನ್ನು ಮಾರ್ಚ್ ತಿಂಗಳಲ್ಲಿ ಬಂಧಿಸಲಾಗಿತ್ತು. (ಮೋದಿ ಸಭೆಯಲ್ಲಿ ಸ್ಪೋಟ: ಉಗ್ರರು ತಪ್ಪಿಸಿಕೊಂಡಿದ್ದು ಹೀಗೆ)
ಭಾರತ ಮತ್ತು ನೇಪಾಳ ಗಡಿಗೆ ಹೊಂದಿಕೊಂಡಿರುವ ಕುಗ್ರಾಮದಲ್ಲಿ ಅಡಗಿದ್ದ ತಹಸಿನ್ ಅಖ್ತರ್ ಬಂಧನದಿಂದ ಕೆಲವು ಮಹತ್ವದ ಸುಳಿವು ಪೊಲೀಸರಿಗೆ ಲಭ್ಯವಾಗಿತ್ತು. ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ಪಾಟ್ನಾ ಸೇರಿದಂತೆ ದೇಶದ ವಿವಿಧ ಕಡೆ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದಾಗಿ ಈತ ಪೊಲೀಸರಿಗೆ ಬಾಯಿಬಿಟ್ಟಿದ್ದ. ಬಂಧಿತನು ನೀಡಿದ ಸುಳಿವಿನ ಮೇರೆಗೆ ಪೊಲೀಸರು ಹೈದರ್, ನುಮನ್, ತೌಫಿಕ್ ಮತ್ತು ಮುಜಿಬುಲ್ಲಾನನ್ನು ಇಂದು ಬಂಧಿಸಿದ್ದಾರೆ.












Click it and Unblock the Notifications