ಪಠಾಣ್ಕೋಟ್ ದಾಳಿ : ಪ್ರತಿ ಉಗ್ರನ ಬಳಿ ಇದ್ದದ್ದು 6 ಕೆಜಿ ಆರ್ಡಿಎಕ್ಸ್!
ಪಠಾಣ್ಕೋಟ್, ಜನವರಿ 04 : ಭಾರತೀಯ ಯೋಧರು ಸೂಕ್ತ ಸಮಯಕ್ಕೆ ಪ್ರತಿದಾಳಿ ನಡೆಸಿ ಉಗ್ರರನ್ನು ಸದೆಬಡಿಯದಿದ್ದರೆ ಭಾರೀ ಅನಾಹುತ ನಡೆಯುವುದಂತೂ ಖಚಿತವಾಗಿತ್ತು. ಏಕೆಂದರೆ, ಪ್ರತಿ ಉಗ್ರನ ಬಳಿ ಇದ್ದಿದ್ದು 6 ಕಿ.ಗ್ರಾಂ. ಆರ್ಜಿಎಕ್ಸ್ ಮತ್ತು ನಾಲ್ಕೈದು ದಿನಗಳಿಗೆ ಸಾಕಾಗುವಷ್ಟು ಸ್ಫೋಟಕಗಳು.
ಹೊಸವರ್ಷದ ಬೆಳಗಿನ ಜಾವ 3.30ರ ಸುಮಾರಿಗೆ ಉಗ್ರರು ಆರಂಭಿಸಿದ ದಾಳಿ ಇನ್ನೂ ಮುಕ್ತಾಯವಾಗಿಲ್ಲ. ಐವರು ಉಗ್ರರು ಹತರಾಗಿದ್ದಾರಾದರೂ ಇನ್ನೂ ಇಬ್ಬರು ಉಗ್ರರು ಪಠಾಣ್ಕೋಟ್ನಲ್ಲಿ ಸೋಮವಾರ, ಜನವರಿ 4ರಂದು ಕಾಣಿಸಿಕೊಂಡಿದ್ದು ವರದಿಯಾಗಿದೆ. ಇದನ್ನು ಸೇನಾ ಮೂಲಗಳು ಅಲ್ಲಗಳೆದಿವೆಯಾದರೂ, ಯಾವ ವರದಿಯನ್ನೂ ನಿರ್ಲಕ್ಷಿಸುತ್ತಿಲ್ಲ.
ಭಾರತದಲ್ಲಿ ಭಾರೀ ಹತ್ಯಾಕಾಂಡ ನಡೆಸಲೆಂದೇ ಉಗ್ರರು ಡಿಸೆಂಬರ್ 30ರ ಆಸುಪಾಸಿನಲ್ಲಿ ಪಂಜಾಬ್ನಲ್ಲಿರುವ ಪಠಾಣ್ಕೋಟ್ ನೊಳಗೆ ನುಸುಳಿದ್ದರು. ಕಟ್ಟಕಡೆಯ ಕಾಡತೂಸು ಮುಗಿಯುವವರೆಗೆ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಬೇಕೆಂಬ ನಿರ್ಧಾರ ಮಾಡಿಯೇ ಅವರು ದಾಳಿ ಆರಂಭಿಸಿದ್ದರು. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ಭಾರತೀಯ ವಾಯುಸೇನಾ ನೆಲೆಗೆ ಪಾಕಿಸ್ತಾನದ ಉಗ್ರರು ನುಗ್ಗಿದ್ದರು. ಅವರ ಬಳಿ ಸಾಕಷ್ಟು ಗುಂಡುಗಳು ಇದ್ದರೂ ಅವರ ಮೇಲೆ ಮೊದಲೇ ಪ್ರತಿದಾಳಿ ನಡೆಸಿದ್ದರಿಂದ ಭಾರೀ ಅನಾಹುತ ಸಂಭವಿಸಿಲ್ಲ. ವಾಯುಸೇನೆ ನೆಲೆಗೆ ನುಗ್ಗಿದ ಆರರಲ್ಲಿ ಓರ್ವನನ್ನು ಆತ ಗೋಡೆ ಏರುತ್ತಿರುವ ಸಮಯದಲ್ಲೇ ಹೊಸಕಿಹಾಕಲಾಗಿತ್ತು.
ಇಲ್ಲಿ ಸಾಯಲೆಂದೇ ಬಂದ ಉಗ್ರರನ್ನು ನಿಗ್ರಹಿಸುವುದು ಬಲು ಕಷ್ಟದ ಕೆಲಸ ಎಂದು ಓರ್ವ ಅಧಿಕಾರಿ ಒನ್ಇಂಡಿಯಾಕ್ಕೆ ತಿಳಿಸಿದರು. ಅವರು ಸೇನಾನೆಲೆಯೊಳಗೆ ನುಗ್ಗಿದ್ದಾದರೂ ಹೇಗೆ? ವಾಯುಸೇನೆಯ ಸುಭದ್ರ ಕೋಟೆಯೊಳಗೆ ನುಸುಳಲು ಅವರಿಗೆ ಹೇಗೆ ಸಾಧ್ಯವಾಯಿತು? ನಮ್ಮ ಯೋಧರು ವಿಫಲವಾಗಿದ್ದು ಎಂಬ ಕುರಿತು ಪ್ರಶ್ನೆಗಳು ಉದ್ಭವವಾಗಿವೆ.
ನಿರಂಜನ್ ಅಂತ್ಯಕ್ರಿಯೆ : ಬೆಂಗಳೂರಿನಲ್ಲಿ ಶಾಲಾಕಾಲೇಜು ಕಲಿತಿದ್ದ ಲೆ.ಕ. ನಿರಂಜನ್ ಸೇರಿದಂತೆ ಏಳು ಭಾರತೀಯ ಭದ್ರತಾ ಸಿಬ್ಬಂದಿಗಳು ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಲೆ.ಕ. ನಿರಂಜನ್ ಅವರ ಅಂತಿಮ ದರ್ಶನವನ್ನು ಬೆಂಗಳೂರಿನಲ್ಲಿ ಸೋಮವಾರ ಏರ್ಪಡಿಸಲಾಗಿತ್ತು. ಅವರೂರು ಕೇರಳದ ಪಾಲಕ್ಕಾಡ್ ನಲ್ಲಿ ಮಂಗಳವಾರ ಅಂತಿಮ ಸಂಸ್ಕಾರ ನಡೆಯಲಿದೆ. [ಎಂಥಾ ಘೋರ ವಿಧಿಲಿಖಿತ, ನಿರಂಜನ್ ಸಾವಿನ ಆಘಾತ]
ಡೋವಲ್ ಪ್ರವಾಸ ರದ್ದು : ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದೆ ಉಗ್ರರು ಭಾರತದ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರ ಚೀನಾ ಪ್ರವಾಸವನ್ನು ರದ್ದುಪಡಿಸಲಾಗಿದೆ. ಅವರು ಮಂಗಳವಾರ ಚೀನಾ ಪ್ರವಾಸ ಕೈಗೊಳ್ಳುವವರಿದ್ದರು.












Click it and Unblock the Notifications