ಬಾಬಾ ರಾಮದೇವ್ ಪತಂಜಲಿ ಕೋವಿಡ್ -19 ಔಷಧಿ ಜಾಹೀರಾತಿಗೆ ತಡೆ
ನವದೆಹಲಿ, ಜೂನ್ 23 : ಕೊರೊನಾ ವೈರಸ್ ಸೋಂಕಿಗೆ ಔಷಧಿ ಕಂಡು ಹಿಡಿಯಲು ಜಗತ್ತಿನ ವಿವಿಧ ರಾಷ್ಟ್ರಗಳು ಶತ ಪ್ರಯತ್ನ ಮಾಡುತ್ತಿವೆ. ಯೋಗಗುರು ಬಾಬಾ ರಾಮ್ದೇವ್ ಆಯುರ್ವೇದಿಕ್ ಔಷಧಿಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಘೋಷಣೆ ಮಾಡಿದ್ದರು.
ಕೊರೊನಾ ವೈರಸ್ ಸೋಂಕಿಗೆ ಪತಂಜಲಿಯ ಆಯುರ್ವೇದಿಕ್ ಔಷಧಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿತ್ತು. ಈ ಔಷಧಿ ಕುರಿತು ಜಾಹೀರಾತು ನೀಡುವಂತಿಲ್ಲ ಎಂದು ಕೇಂದ್ರ ಆಯುಷ್ ಇಲಾಖೆ ಪತಂಜಲಿ ಕಂಪನಿಗೆ ಸೂಚನೆ ನೀಡಿದೆ.

ಇಂದು ಔಷಧಿ ಬಿಡುಗಡೆ ಮಾಡಿದ್ದ ಪತಂಜಲಿ ಸಂಸ್ಥೆ 'ಕೊರೊನಿಲ್' ಮತ್ತು 'ಸಸ್ವಾರಿ' ಎಂಬ ಎರಡು ಔಷಧಿಗಳು ರೋಗಿಗಳ ಮೇಲೆ ಶೇ 100ರಷ್ಟು ಸಕಾರಾತ್ಮಕ ಫಲಿತಾಂಶ ನೀಡಿವೆ ಎಂದು ಹೇಳಿಕೆ ಕೊಟ್ಟಿತ್ತು. ಔಷಧಿಯ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಆಯುಷ್ ಇಲಾಖೆ ಕೋವಿಡ್ - 19 ಔಷಧಿ ಬಗ್ಗೆ ಹಲವು ಸ್ಪಷ್ಟನೆಗಳನ್ನು ಪತಂಜಲಿ ಸಂಸ್ಥೆಯಿಂದ ಕೇಳಿದೆ. ಸ್ಪಷ್ಟನೆಗಳನ್ನು ನೀಡುವ ತನಕ ಎಲ್ಲೂ ಸಂಸ್ಥೆ ಔಷಧಿ ಬಗ್ಗೆ ಜಾಹೀರಾತು ನೀಡುವಂತಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಹರಿದ್ವಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ್ದ ಪತಂಜಲಿ ಮುಖ್ಯಸ್ಥ ಬಾಬಾ ರಾಮದೇವ್, "ಈ ಔಷಧಿಯನ್ನು ತೆಗೆದುಕೊಂಡರೆ ರೋಗಿಗಳು 3 ರಿಂದ 7 ದಿನಗಳ ಅವಧಿಯಲ್ಲಿ ಗುಣಮುಖರಾಗುತ್ತಾರೆ" ಎಂದು ಹೇಳಿಕೆ ನೀಡಿದ್ದದರು.
"ಈ ಔಷಧಿಗಳ ಮೇಲೆ ಎರಡು ಪ್ರಯೋಗಗಳನ್ನು ನಡೆಸಲಾಗಿದೆ. ಮೊದಲ ಕ್ಲಿನಿಕಲ್ ಆಧರಿತ ಅಧ್ಯಯನ ದೆಹಲಿ, ಅಹಮದಾಬಾದ್ ಸೇರಿ ಹಲವು ನಗರದಲ್ಲಿ ನಡೆದಿದೆ. 280 ರೋಗಿಗಳು ಶೇ 100ರಷ್ಟು ಗುಣಮುಖರಾಗಿದ್ದಾರೆ" ಎಂದು ಬಾಬಾ ರಾಮದೇವ್ ಹೇಳಿದ್ದರು.












Click it and Unblock the Notifications