ರಾಹುಲ್ ಗಾಂಧಿ ಹಾಜರಾತಿ: ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯ ಬ್ರಹ್ಮಾಸ್ತ್ರ?
ನವದೆಹಲಿ, ನವೆಂಬರ್ 22: ಸಂಸತ್ ಚಳಿಗಾಲದ ಅಧಿವೇಶನವನ್ನು ಒಂದಿಲ್ಲೊಂದು ಕಾರಣ ನೀಡಿ ಮುಂದೂಡುತ್ತಿರುವ ಬಿಜೆಪಿ ನಡೆಯನ್ನು ಟೀಕಿಸಿದ್ದ ಕಾಂಗ್ರೆಸ್ಸಿಗೆ ಬಿಜೆಪಿ ಸರಿಯಾದ ಟಾಂಗ್ ನೀಡಲಿದೆಯಾ?
ಅಪನಗದೀಕರ, ಜಿಎಸ್ ಟಿ ಮುಂತಾದ ವಿಷಯಗಳ ಬಗ್ಗೆ ವಿಪಕ್ಷ ಕೇಳುವ ಪ್ರಶ್ನೆಗಳನ್ನು ಎದುರಿಸುವ ಧೈರ್ಯವಿಲ್ಲದೆಯೇ ಅಧಿವೇಶನವನ್ನು ಬಿಜೆಪಿ ಮುಂದೂಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಯಾಗಿ ಬ್ರಹ್ಮಾಸ್ತ್ರವೊಂದನ್ನು ಹೂಡಲು ಆಡಳಿತಾರೂಢ ಬಿಜೆಪಿ ಸಿದ್ಧವಾಗಿದೆ!
ರಾಹುಲ್ ಅಧ್ಯಕ್ಷರಾದರೆ ಕಾಂಗ್ರೆಸ್ ಮುಕ್ತ ಭಾರತ ಗುರಿ ಸಲೀಸು: ಯೋಗಿ
ಆ ಬ್ರಹ್ಮಾಸ್ತ್ರ್ ಯಾವುದು ಗೊತ್ತಾ? ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಪೀಠ ಅಲಂಕರಿಸಲಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಸಂಸತ್ ಹಾಜರಾತಿ!
ಕೊನೆಗೂ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗುವ ದಿನ ಬಂತು
"ಬಿಜೆಪಿಯು ಚಳಿಗಾಲದ ಅಧಿವೇಶನ ಮುಂದೂಡುತ್ತಿರುವ ಬಗ್ಗೆ ಮಾತನಾಡುವ ಕಾಂಗ್ರೆಸ್, ಎಷ್ಟರ ಮಟ್ಟಿಗೆ ಸಂಸತ್ತಿನಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡಿದೆ? ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೆಶನ್ ಗಳಿಗೆ ಭಾಗವಹಿಸದೆ ಯಾವ ಕಾಲವಾಯ್ತು ಗೊತ್ತೇ? ಇಂತಿರುವ ಕಾಂಗ್ರೆಸ್ ಗೆ ಚಳಿಗಾಲದ ಅಧಿವೇಶನ ಮುಂದೂಡುತ್ತಿರುವ ಬಗ್ಗೆ ಮಾತನಾಡುವ ಹಕ್ಕಿದೆಯೇ" ಎಂದು ಬಿಜೆಪಿ ಮುಖಂಡ, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಅಧಿವೇಶನದ ಗಾಂಭೀರ್ಯ ತಿಳಿದಿದೆಯೇ?
'ಕಲಾಪದಿಂದ ಹೊರಹೋಗುವವರಿಗೆ ಅಧಿವೇಶನದ ಗಾಂಭೀರ್ಯದ ಅರಿವಿದೆಯೇ? ಅಪನಗದೀಕರಣ, ಜಿಎಸ್ ಟಿಯಂಥ ಪ್ರಮುಖ ವಿಷಯಗಳ ಬಗ್ಗೆ ಮಾತನಾಡುವಾಗ ಕಾಂಗ್ರೆಸ್ ನಾಯಕರು ಕಲಾಪದಿಂದ ಆಚೆ ನಡೆಯಲಿಲ್ಲವೇ? ಎಲ್ಲೆಲ್ಲಿ ತಮಗೆ ಇರಿಸು ಮುರಿಸಾಗುವ ಸನ್ನಿವೇಶ ಬರುತ್ತದೋ, ಆಗೆಲ್ಲ ಕಾಂಗ್ರೆಸ್ಸಿಗರು ಕಲಾಪದಿಂದ ಹೊರಹೋಗುತ್ತಾರೆ' ಎಂದು ರವಿಶಂಕರ್ ಪ್ರಸಾದ ಹೇಳಿದರು.
ರಾಹುಲ್ ಹಾಜರಾತಿಯೇ ಬಿಜೆಪಿಯ ಬ್ರಹ್ಮಾಸ್ತ್ರ
ಕಳೆದ ಮೂರೂವರೆ ವರ್ಷಗಳಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದು, ಕೇವಲ 11 ಚರ್ಚೆಗಳಲ್ಲಿ ಮಾತ್ರ. ಸಂಸತ್ತಿನಲ್ಲಿ ಅವರ ಒಟ್ಟೂ ಹಾಜರಾತಿ ಕೇವಲ 54 %! ಅಂದರೆ ಫಸ್ಟ್ ಕ್ಲಾಸ್ ಸಹ ಇಲ್ಲ! ಆ ಲೆಕ್ಕದಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅನಾರೋಗ್ಯವಿದ್ದರೂ ಶೇ. 57 ರಷ್ಟು ಹಾಜರಾತಿ ಹೊಂದಿದ್ದಾರೆ!
100 % ಹಾಜರಾತಿ ಹೊಂದಿರುವವರು 5 ಸಂಸದರು ಮಾತ್ರ!
ಸಂಸತ್ತಿನ ಒಟ್ಟು 545 ಸದಸ್ಯರಲ್ಲಿ 100 % ಪ್ರತಿಶತ ಹಾಜರಾತಿ ಗಳಿಸಿದವರು ಕೇವಲ 5 ಜನ ಮಾತ್ರ. ಉತ್ತರ ಪ್ರದೇಶದ ಬಾಂದಾ ಕ್ಷೇತ್ರದ ಸಂಸದ ಭೈರಾನ್ ಪ್ರಸಾದ್ ಮಿಶ್ರಾ, ಬಿಜೆಡಿ ಸಂಸದ ಕುಲ್ಮಾಣಿ ಸಮಾಲ್, ಬಿಜೆಪಿ ಸಂಸದರಾದ ಗೋಪಾಲ್ ಶೆಟ್ಟಿ, ಕೀರ್ತಿ ಸೋಲಂಕಿ, ರಮೇಶ್ ಚಂದರ್ ಕೌಶಿಕ್.
ಪ್ರಧಾನಿ ಹಾಜರಾತಿಗಳು
ಪ್ರಧಾನಿ ಮತ್ತು ಕೆಲವು ಮಂತ್ರಿಗಳಿಗೆ ಸಂಸತ್ತಿನಲ್ಲಿ ಹಾಜರಾತಿ ಕಡ್ಡಾಯವೇನಲ್ಲ. ವಿದೇಶಿ ಪ್ರವಾಸ, ಮತ್ತಿತರ ಅನಿವಾರ್ಯ ಸಂದರ್ಭಗಳಿರುವುದರಿಂದ ಅವರ ಹಾಜರಾತಿಯನ್ನು ಪ್ರಶ್ನಿಸುವುದಕ್ಕೆ ಸಾಧ್ಯವಿಲ್ಲ. ಅಚ್ಚರಿಯ ವಿಷಯವೆಂದರೆ ಬಿಹಾರದ ಪಾಟ್ನಾ ಸಾಹಿಬ್ ಸಂಸದ ಶತ್ರುಘ್ನ ಸಿನ್ಹಾ ಶೇ. 70 ರಷ್ಟು ಸೆಶನ್ ಗಳಲ್ಲಿ ಭಾಗವಹಿಸಿದ್ದರೂ ಇದುವರೆಗೂ ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ ಮತ್ತು ಯಾವುದೂ ಪ್ರಶ್ನೆ ಕೇಳಿಲ್ಲ.