ಇಮ್ರಾನ್ ಖಾನ್ ಗೆ ಗುನ್ನ; ಭಯೋತ್ಪಾದನೆ ನರಮಂಡಲ ಇಸ್ಲಾಮಾಬಾದ್ ಎಂದ ಭಾರತ
ನವದೆಹಲಿ, ಫೆಬ್ರವರಿ 20: ಪುಲ್ವಾಮಾ ಉಗ್ರ ದಾಳಿ ಬಗ್ಗೆ 'ಸರಿಯಾದ ಸಾಕ್ಷ್ಯಾಧಾರ'ಕ್ಕೆ ಒತ್ತಾಯಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಭಾರತ ಸರಿಯಾದ ತಿರುಗೇಟು ನೀಡಿದೆ. ಇಸ್ಲಾಮಾಬಾದ್ "ಭಯೋತ್ಪಾದನೆಯ ನರಮಂಡಲ" ಎಂದು ಕರೆದಿದೆ.
"ಪುಲ್ವಾಮಾ ದಾಳಿಯನ್ನು ಭಯೋತ್ಪಾದನಾ ಕೃತ್ಯ ಎಂದು ಹೇಳುವುದಕ್ಕೆ ಕೂಡ ಪಾಕಿಸ್ತಾನ ಪ್ರಧಾನಿ ನಿರಾಕರಿಸಿರುವುದು ನಮಗೆ ಅಚ್ಚರಿ ತಂದಿದೆ. ಪಾಕಿಸ್ತಾನದ ಪ್ರಧಾನಿ ಈ ಹೇಯ ಕೃತ್ಯವನ್ನು ಖಂಡಿಸಿಯೂ ಇಲ್ಲ ಅಥವಾ ಹುತಾತ್ಮ ಯೋಧರ ಕುಟುಂಬಕ್ಕೆ ಸಂತ್ವನವೂ ಹೇಳಿಲ್ಲ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ತನ್ನನ್ನು ಭಯೋತ್ಪಾದನೆಯ ಬಲಿಪಶು ಎಂದು ಪಾಕಿಸ್ತಾನ ಕರೆದುಕೊಂಡಿರುವುದನ್ನು ನಿರಾಕರಿಸಿರುವ ಭಾರತ, ಇದು ಸತ್ಯಕ್ಕೆ ದೂರವಾದ ಮಾತು. ಭಯೋತ್ಪಾದನೆಯ ನರಮಂಡಲವೇ ಪಾಕಿಸ್ತಾನ ಎಂಬುದು ಅಂತರರಾಷ್ಟ್ರೀಯ ಸಮುದಾಯಕ್ಕೆ ಗೊತ್ತಿದೆ ಎನ್ನಲಾಗಿದೆ.
ನಾವೇ ದಾಳಿ ಮಾಡಿದ್ದು ಅನ್ನೋದಕ್ಕೆ ಸಾಕ್ಷ್ಯ ಕೊಡಿ ಎಂದ ಪಾಕ್!
ಅಂತರರಾಷ್ಟ್ರೀಯ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಪಾಕಿಸ್ತಾನ ನಿಲ್ಲಿಸಬೇಕು. ಪುಲ್ವಾಮಾ ದಾಳಿ ಹಾಗೂ ಇತರ ಉಗ್ರ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಣ್ಣಿಗೆ ಕಾಣುವಂಥ ಹಾಗೂ ವಿಶ್ವಾಸಾರ್ಹವಾದ ಕ್ರಮ ತೆಗೆದುಕೊಳ್ಳಬೇಕು. ಜೈಶ್ ಇ ಮೊಹ್ಮದ್ ದಾಳಿಯ ಹೊಣೆ ಹೊತ್ತಿಕೊಂಡಿದ್ದನ್ನು ಹಾಗೂ ಆತ್ಮಹತ್ಯಾ ಬಾಂಬರ್ ಸ್ವತಃ ಹೇಳಿಕೊಂಡಿದ್ದನ್ನು ಪಾಕಿಸ್ತಾನದ ಪ್ರಧಾನಿ ಬೇಕೆಂತಲೇ ಪ್ರಸ್ತಾಪಿಸಿಲ್ಲ ಎಂದು ದೂರಲಾಗಿದೆ.
ಸಾಕ್ಷ್ಯ ಕೇಳುತ್ತಿರುವುದು ಕುಂಟು ನೆಪಗಳಷ್ಟೇ
ಜೈಶ್ ಇ ಮೊಹ್ಮದ್ ನ ನಾಯಕ ಮಸೂದ್ ಅಜರ್ ಪಾಕಿಸ್ತಾನ ಮೂಲದವನು ಎನ್ನುವುದು ಎಲ್ಲರಿಗೂ ಗೊತ್ತಿರುವ ವಾಸ್ತವ. ಈ ಎಲ್ಲವೂ ಸಾಲದೇ ಪಾಕಿಸ್ತಾನಕ್ಕೆ ಕ್ರಮ ತೆಗೆದುಕೊಳ್ಳುವುದಕ್ಕೆ ಎಂದು ಪ್ರಶ್ನಿಸಲಾಗಿದೆ. ಪಾಕಿಸ್ತಾನದ ಕೈವಾಡ ಇದೆ ಎನ್ನುವುದಕ್ಕೆ ಸಾಕ್ಷ್ಯ ಕೇಳುತ್ತಿರುವುದೆಲ್ಲ ಕುಂಟ ನೆಪಗಳಷ್ಟೆ ಎಂದು ಕಟು ಶಬ್ದಗಳಲ್ಲಿ ಟೀಕಿಸಲಾಗಿದೆ.
ಮುಂಬೈ ದಾಳಿ ತನಿಖೆ ಏನಾಯಿತು
ಸರಿಯಾದ ಸಾಕ್ಷ್ಯಾಧಾರ ನೀಡಿದರೆ ತನಿಖೆಗೆ ಭಾರತಕ್ಕೆ ಸಹಕರಿಸುವುದಾಗಿ ಪಾಕಿಸ್ತಾನದ ಪ್ರಧಾನಿ ಹೇಳಿದ್ದಾರೆ. ಆದರೆ ಇದು ಕುಂಟು ನೆಪ ಅಷ್ಟೇ. ಮುಂಬೈ ದಾಳಿ ಬಗ್ಗೆ ಪಾಕಿಸ್ತಾನಕ್ಕೆ ಸಾಕ್ಷ್ಯ ಒದಗಿಸಲಾಗಿತ್ತು. ಅಷ್ಟಾದರೂ ಹತ್ತು ವರ್ಷದಿಂದ ಆ ಪ್ರಕರಣದಲ್ಲಿ ಪ್ರಗತಿಯೇ ಕಂಡಿಲ್ಲ. ಅದೇ ರೀತಿ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ಕೂಡ. ಯಾವುದೇ ಪ್ರಗತಿ ಇಲ್ಲ. ಬರೀ ಪೊಳ್ಳು ಭರವಸೆ ನೀಡಿದ ದಾಖಲೆ ಮಾತ್ರ ಪಾಕಿಸ್ತಾನ ಹೆಸರಲ್ಲಿ ಇದೆ ಎಂದು ಆರೋಪಿಸಲಾಗಿದೆ.
ಉಗ್ರಗಾಮಿ ಜತೆಗೆ ಸಚಿವರು ವೇದಿಕೆಯಲ್ಲಿ
ಇದು ನಯಾ ಪಾಕಿಸ್ತಾನ (ಹೊಸ ಪಾಕಿಸ್ತಾನ) ಎಂಬ ಇಮ್ರಾನ್ ಖಾನ್ ರ ಹೇಳಿಕೆಗೆ ಸಂಬಂಧಿಸಿದಂತೆ ಬಿಸಿ ಮುಟ್ಟಿಸಲಾಗಿದ್ದು, ಈ ಸರಕಾರದಲ್ಲಿ ಸಾರ್ವಜನಿಕವಾಗಿ ಹಫೀಜ್ ಸಯೀದ್ ನಂಥವನ ಜತೆಗೆ ಸಚಿವರು ವೇದಿಕೆ ಹಂಚಿಕೊಳ್ಳುತ್ತಾರೆ. ಹಫೀಜ್ ಸಯೀದ್ ನನ್ನು ಉಗ್ರಗಾಮಿ ಎಂದು ವಿಶ್ವಸಂಸ್ಥೆಯೇ ಘೋಷಣೆ ಮಾಡಿದೆ ಎಂದು ತಿವಿಯಲಾಗಿದೆ.
ಭಾರತದ ಪ್ರಜಾಪ್ರಭುತ್ವ ಜಗತ್ತಿಗೇ ಮಾದರಿ
ಯಾವುದೇ ಸಮಗ್ರ ದ್ವಿಪಕ್ಷೀಯ ಮಾತುಕತೆಯು ಭಯೋತ್ಪಾದನೆ ಹಾಗೂ ಹಿಂಸಾರಹಿತ ವಾತಾವರಣದಲ್ಲಿ ಮಾತ್ರ ಸಾಧ್ಯ ಎಂದು ಭಾರತ ಹೇಳಿದೆ. ಇದೇ ವೇಳೆ, ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಈ ದಾಳಿಯ ಲಾಭ ಪಡೆಯಲು ಯತ್ನಿಸಲಾಗುತ್ತಿದೆ ಎಂಬ ಆರೋಪವನ್ನು ಸರಕಾರವು ನಿರಾಕರಿಸಿದೆ. ಭಾರತದ ಪ್ರಜಾಪ್ರಭುತ್ವವು ಜಗತ್ತಿಗೇ ಮಾದರಿ. ಅದನ್ನು ಪಾಕಿಸ್ತಾನವು ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ತಿರುಗೇಟು ಕೂಡ ನೀಡಿದೆ.