ಕರ್ತರ್ ಪುರ್ ಕಾರಿಡಾರ್ ಉದ್ಘಾಟನೆಗೆ ಪಾಕ್ ನಿಂದ ಮ.ಮೋ.ಸಿಂಗ್ ಗೆ ಆಹ್ವಾನ
ನವದೆಹಲಿ, ಸೆಪ್ಟೆಂಬರ್ 30: ಈ ವರ್ಷದ ನವೆಂಬರ್ ನಲ್ಲಿ ನಡೆಯಲಿರುವ ಕರ್ತರ್ ಪುರ್ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಆಹ್ವಾನಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿದ್ದರೆ ಪಾಕಿಸ್ತಾನಕ್ಕೆ ತೆರಳಬೇಕಾಗುತ್ತದೆ.
ವಿಡಿಯೋವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಖುರೇಷಿ, ಡಾ. ಸಿಂಗ್ ಅವರು ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದು, ಭಾರತದಲ್ಲಿ ಅವರ ಬಗ್ಗೆ ಅಪಾರ ಗೌರವ ಇದೆ. ಅವರ ಆಹ್ವಾನದ ಬಗ್ಗೆ ಪಾಕಿಸ್ತಾನದ ಸರ್ಕಾರ ಅಧಿಕೃತವಾದ ನಿಯಮಾವಳಿಗಳನ್ನು ಪಾಲಿಸುತ್ತದೆ ಎಂದು ಹೇಳಿದ್ದಾರೆ. ಇನ್ನು ಕರ್ತರ್ ಪುರ್ ಕಾರಿಡಾರ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತೋರಿದ ಆಸಕ್ತಿಯನ್ನು ಕೂಡ ಪ್ರಸ್ತಾಪಿಸಿದ್ದಾರೆ.
ಪಂಜಾಬ್ ನ ಗುರ್ ದಾಸ್ ಪುರ್ ಜಿಲ್ಲೆಯಲ್ಲಿ ಇರುವ ಡೇರಾ ಬಾಬ್ ನಾನಕ್ ಹಾಗೂ ಪಾಕಿಸ್ತಾನದ್ ಕರ್ತರ್ ಪುರ್ ನಲ್ಲಿ ಇರುವ ದರ್ಬಾರ್ ಸಾಹಿಬ್ ಗೆ ಈ ಕರ್ತರ್ ಪುರ್ ಕಾರಿಡಾರ್ ಸಂಪರ್ಕ ಕಲ್ಪಿಸುತ್ತದೆ. ಆ ಮೂಲಕ ಭಾರತೀಯ ಯಾತ್ರಾರ್ಥಿಗಳಿಗೆ ವೀಸಾ ಇಲ್ಲದೆ, ವಿಶೇಷ ಅನುಮತಿಯೊಂದಿಗೆ ಕರ್ತರ್ ಪುರ್ ಗೆ ಭೇಟಿ ನೀಡಲು ಅವಕಾಶ ದೊರಕಿಸುತ್ತದೆ.

ಸದ್ಯಕ್ಕೆ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಸಂಬಂಧ ಹದಗೆಟ್ಟಿದ್ದು ಪಾಕಿಸ್ತಾನ ಆಹ್ವಾನ ನೀಡಿದರೂ ಆ ಕಾರ್ಯಕ್ರಮದಲ್ಲಿ ಮನಮೋಹನ್ ಸಿಂಗ್ ಅವರು ಭಾಗವಹಿಸುವುದು ಅನುಮಾನ ಎನ್ನಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗಡಿಯ ಭಾಗದಲ್ಲಿ ನವೆಂಬರ್ ಒಂಬತ್ತರಂದು ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಉದ್ಘಾಟನೆ ಮಾಡಲಿದ್ದಾರೆ.












Click it and Unblock the Notifications