Pahalgam Terrorist Attack: ಉಗ್ರರು 'ಹಿಂದೂಗಳನ್ನೇ ಟಾರ್ಗೆಟ್' ಮಾಡಿದ್ದೇಕೆ? ಕಾರಣಗಳು ಇಲ್ಲಿವೆ
Pahalgam Terrorist Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ದಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 26 ಜನರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ದೇಶದಾದ್ಯಂತ ಉಗ್ರರ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಉಗ್ರರು ಭಾಷೆ ಕೇಳಿಲ್ಲ, ನಿಮ್ಮದು ಯಾವ ರಾಜ್ಯ ಎಂದು ಕೇಳಿಲ್ಲ... ಅವರು ಕೇಳಿದ್ದೆಲ್ಲವೂ ನಿಮ್ಮ ಧರ್ಮ ಯಾವುದು ಎನ್ನುವುದು.. ಇದು ಸ್ಪಷ್ಟವಾಗಿ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಮಾಡಿರುವ ದಾಳಿ! ಹಿಂದೂಗಳೇ ಯಾಕೆ ಟಾರ್ಗೆಟ್ ಆಗಿದ್ದಾರೆ ಎನ್ನುವ ವಿವರ ಇಲ್ಲಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ದಲ್ಲಿ ನಡೆದಿರುವ ಉಗ್ರರ ದಾಳಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಆದರೆ, ಈ ದಾಳಿಯಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿಕೊಂಡು ಉಗ್ರರು ದಾಳಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370ನೇ ವಿಧಿ ತೆಗೆದ ಮೇಲೆ ಕಣಿವೆ ರಾಜ್ಯವು ಸಹಜ ಪರಿಸ್ಥಿತಿಗೆ ಮರಳಿತ್ತು. ಈಚೆಗೆ ವಿಧಾನಸಭೆ ಚುನಾವಣೆಯೂ ನಡೆದು ಎಲ್ಲವೂ ಸುಸೂತ್ರವಾಗಿಯೇ ಸಾಗುತ್ತಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳಿಂದ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಜನ ಹಿಂದೆಂದೂ ಕಾಣದಷ್ಟು ನೆಮ್ಮದಿಯ ಜೀವನವನ್ನು ನಡೆಸಲು ಶುರು ಮಾಡಿಕೊಂಡಿದ್ದರು. ಈ ರೀತಿ ಇರುವಾಗಲೇ ಹಿಂದೂಗಳನ್ನೇ ಟಾರ್ಗೆಟ್ ಮಾಡಿಕೊಂಡು ದಾಳಿ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ಮಾಡುವುದಕ್ಕೂ ಮುಂಚೆ ನೀವು ಯಾವ ಧರ್ಮಕ್ಕೆ ಸೇರಿದವರು ಎಂದು ಕೇಳಿದ್ದಾರೆ. ಪ್ರತಿಯೊಬ್ಬರಿಗೆ ಗುಂಡು ಹಾರಿಸುವಾಗ ಯಾವ ಧರ್ಮದವರು, ಹಿಂದೂನಾ ಇಲ್ಲ, ಮುಸ್ಲಿಮನಾ ಎಂದು ಪ್ರಶ್ನಿಸಲಾಯಿತು ಎಂಬುದಾಗಿ ಪ್ರತ್ಯಕ್ಷದರ್ಶಿಗಳೇ ಹೇಳಿದ್ದಾರೆ. ಈ ಮೂಲಕ ಹಿಂದೂಗಳಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370 ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಮೇಲೆ ಇಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವುದಕ್ಕೆ ಪ್ರಾರಂಭಿಸಿತ್ತು. ಇದಾದ ಮೇಲೆ ಇಲ್ಲಿಗೆ ಪ್ರವಾಸಿಗರು ಬರುವುದು ಹೆಚ್ಚಾಗಿತ್ತು. ಆದರೆ, ಏಪ್ರಿಲ್ 22ರಂದು ಏಕಾಏಕಿ ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿರುವುದರ ಹಿಂದೆ ಹಲವು ಕಾರಣಗಳು ಇವೆ. ಅದರಲ್ಲಿ ಮೂರು ಪ್ರಮುಖ ಕಾರಣ ಭಾರತದ ಸೌಹಾರ್ದತೆಗೆ ಧಕ್ಕೆ ತರುವುದು, ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಿಸುವ ಅಲ್ಲಿ ಅತಂತ್ರ ವಾತಾವರಣವನ್ನು ನಿರ್ಮಿಸುವುದು ಹಾಗೂ 370 ವಿಧಿಯನ್ನು ತೆಗೆದಿರುವುದರಿಂದ ಹಿನ್ನಡೆ ಆಗಿದೆ ಎಂಬುದಾಗಿ ಬಿಂಬಿಸುವುದು ಸೇರಿದಂತೆ ಹಿಂದೂಗಳಲ್ಲಿ ಭೀತಿ ಹುಟ್ಟಿಸುವುದು ಸಹ ಉಗ್ರರ ಕಾರ್ಯತಂತ್ರದ ಉದ್ದೇಶವಾಗಿದೆ.

ಭಾರತದ ಸೌಹಾರ್ದತೆಗೆ ಧಕ್ಕೆ: ಉಗ್ರರ ಮುಖ್ಯ ಉದ್ದೇಶವೇ ಭಾರತದ ಸೌಹಾರ್ದತೆಗೆ ಪೆಟ್ಟು ನೀಡುವುದೇ ಆಗಿದೆ. ಭಾರತದ ಹಿಂದೂ- ಮುಸ್ಲಿಮರ ನಡುವೆ ವೈಷಮ್ಯವನ್ನು ಹೆಚ್ಚಿಸಿ ಭೀತಿಯ ವಾತಾವರಣವನ್ನು ಸೃಷ್ಟಿ ಮಾಡುವುದಕ್ಕೆ ಹೇಗೆಲ್ಲಾ ಸಾಧ್ಯವೋ ಆ ಎಲ್ಲಾ ಮಾರ್ಗಗಳಿಂದ ಉಗ್ರರು ಈ ದಾಳಿಯನ್ನು ಬಳಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಪೆಟ್ಟು: ಜಮ್ಮು ಮತ್ತು ಕಾಶ್ಮೀರಕ್ಕೆ ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಭೇಟಿ ನೀಡುವ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿತ್ತು. ಇಲ್ಲಿನ ಹಿಂದೂಗಳು ಸಹ ಕಣಿವೆ ರಾಜ್ಯಕ್ಕೆ ಮರಳಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ಮುಸ್ಲಿಮರು ಸಹ ಇಲ್ಲಿನ ಪ್ರವಾಸೋದ್ಯಮ ಚಿಗುರೊಡೆದಿದ್ದಕ್ಕೆ ಸಂಭ್ರಮದಲ್ಲಿದ್ದರು. ಆದರೆ, ಈಗ ಆಗಿರುವ ಉಗ್ರರ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಇಲ್ಲಿನ ಜನ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಉಗ್ರರು ಮತ್ತೆ ಇಲ್ಲಿ ಅತಂತ್ರ ವಾತಾವರಣ ಸೃಷ್ಟಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಭಾರತದ ಹಿಂದೂ- ಮುಸ್ಲಿಮರ ನಡುವೆ ದ್ವೇಷ: ಭಾರತದಲ್ಲಿ ಹಿಂದೂ- ಮುಸ್ಲಿಮರ ನಡುವೆ ದ್ವೇಷವನ್ನು ಹೆಚ್ಚಿಸುವುದರ ಮೂಲಕ ಹೇಯ ಕೃತ್ಯಗಳನ್ನು ನಡೆಸುವುದಕ್ಕೆ ಇದನ್ನು ದಾಳವಾಗಿಯೂ ಬಳಸಿಕೊಳ್ಳಲಾಗಿದೆ. ಹಿಂದೂಗಳನ್ನೇ ಗುರಿಯಾಗಿ ಇರಿಸಿಕೊಂಡು, ಅವರ ಧರ್ಮವನ್ನು ಕೇಳಿ ಕೊಲೆ ಮಾಡಲಾಗಿದೆ. ಈ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಶೇ 99.99ರಷ್ಟು ಜನ ಹಿಂದೂಗಳೇ ಆಗಿದ್ದಾರೆ.
370 ವಿಧಿಗೆ ಹಿನ್ನಡೆ ಆಗಿದೆ ಎಂದು ಬಿಂಬಿಸುವುದು: ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ 370 ವಿಧಿ ರದ್ದಾದ ಮೇಲೆ ಇದನ್ನು ವಿರೋಧಿಸಿ ಹೊಸ ಭಯೋತ್ಪಾದಕ ಸಂಘಟನೆ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಹುಟ್ಟಿಕೊಂಡಿತ್ತು. ಲಷ್ಕರ್-ಎ-ತೈಬಾ (ಎಲ್ಇಟಿ)ಯ ಅಂಗ ಸಂಸ್ಥೆ ಇದಾಗಿದೆ. ಇದೇ ಉಗ್ರ ಸಂಘಟನೆ ಇದೀಗ ಈ ದಾಳಿಯನ್ನು ನಡೆಸಿರುವುದಾಗಿ ಒಪ್ಪಿಕೊಂಡಿದೆ. ಆರ್ಟಿಕಲ್ 370 ರದ್ದಾಗಿರುವುದರಿಂದ ಹಿನ್ನಡೆ ಆಗಿದೆ ಎಂದು ಬಿಂಬಿಸುವುದಕ್ಕೆ ಉಗ್ರ ಸಂಘಟನೆ ಮುಂದಾಗಿದೆ. ಇದರ ಭಾಗವಾಗಿಯೇ ಈ ದಾಳಿ ನಡೆದಿದೆ ಎಂದು ವಿಶ್ಲೇಷಿಸಲಾಗಿದೆ.
ಹಿಂದೂಗಳೇ ಟಾರ್ಗೆಟ್
* ಉಗ್ರರು ಪ್ರವಾಸಿಗರನ್ನು ಕೊಲ್ಲುವುದಕ್ಕಿಂತ ಮುಂಚೆ ನೀವು ಯಾವ ಧರ್ಮದವರು ಎಂದು ಕೇಳಿದ್ದಾರೆ.
* ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿಕೊಂಡು ದಾಳಿ ಮಾಡಿದ್ದಾರೆ. ಹಿಂದೂನಾ ಇಲ್ಲ ಮುಸ್ಲಿಂ ಧರ್ಮದವರೇ ಎಂದು ಕೇಳಿರುವ ಅವರು, ಇದಾದ ಮೇಲೆ ಪ್ರವಾಸಿಗರ ಹೆಸರು ಕೇಳಿದ್ದಾರೆ. ಧಾರ್ಮಿಕ ಆಚರಣೆಯನ್ನು ಖಚಿತಪಡಿಸಿಕೊಂಡ ಮೇಲೆಯೇ ದಾಳಿ ಮಾಡಲಾಗಿದೆ.
* ಉಗ್ರರು ಇಷ್ಟೊಂದು ಹೇಯ ಕೃತ್ಯವನ್ನು ಮಾಡುವುದರ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎನ್ನುವ ಅನುಮಾನವನ್ನು ಭಾರತ ಸರ್ಕಾರ ವ್ಯಕ್ತಪಡಿಸಿದೆ. ಹೀಗಾಗಿ 5 ಪ್ರಮುಖ ನಿರ್ಧಾರಗಳನ್ನು ಭಾರತ ಸರ್ಕಾರ ತೆಗೆದುಕೊಂಡಿದೆ. ಪಾಕಿಸ್ತಾನದ ಐಎಸ್ಐ ತಂತ್ರಗಳನ್ನೇ ಈ ಉಗ್ರರ ದಾಳಿಯಲ್ಲೂ ಬಳಸಲಾಗಿದೆ. ವಿಶೇಷವಾಗಿ ಕಾಶ್ಮೀರದಂತಹ ಪ್ರದೇಶಗಳಲ್ಲಿ ಭಾರತವನ್ನು ರಕ್ತಸಿಕ್ತಗೊಳಿಸಲು ಭಯೋತ್ಪಾದನಾ ಕೃತ್ಯವನ್ನು ನಡೆಸಲಾಗಿದೆ.
* ಉಗ್ರರು ಪ್ರವಾಸಿಗರಿಗೆ ಇಸ್ಲಾಮ್ - ಕಲಿಮಾ ಪಠಿಸುವಂತೆ ಹೇಳಿದ್ದಾರೆ. ಇಸ್ಲಾಮ್ನಲ್ಲಿ ಕಲಿಮಾ ಎನ್ನುವುದು ಧಾರ್ಮಿಕ ನಂಬಿಕೆಯಾಗಿದೆ. ಅಲ್ಲಾಹನ ಏಕತೆ, ಮೊಹಮ್ಮದ್ ಪೈಗಂಬರ್ ಅವರ ಪ್ರವಾದಿತ್ವವನ್ನು ದೃಢೀಕರಿಸುವುದು ಎಂದೂ ಸಹ ಇದನ್ನು ಹೇಳಲಾಗುತ್ತದೆ. ಮಸ್ಲಿಂ ಧರ್ಮಕ್ಕೆ ಮತಾಂತರವಾದವರು ನಂಬಿಕೆ ಹೊಂದಿದ್ದೇವೆ ಎಂದು ತಿಳಿಸುವುದಕ್ಕೆ ಕಲಿಮಾ ಪಠಿಸುತ್ತಾರೆ. ಅಲ್ಲಾಹ ಹೊರತುಪಡಿಸಿದರೆ, ಬೇರೆ ಯಾವ ದೇವರೂ ಪೂಜೆಗೆ ಅರ್ಹರಲ್ಲ ಎನ್ನುವುದು ಕಲಿಮಾದ ಒಟ್ಟಾರೆ ಸಾರಾಂಶವಾಗಿದೆ.
* ಉಗ್ರರು ಕಲಿಮಾ ಪಠಿಸುವಂತೆ ಹೇಳಿದ್ದಾರೆ. ಇದನ್ನು ಪಠಿಸದೆ ಇರುವವರನ್ನು ಕೊಂದಿದ್ದಾರೆ. ಕೊಲೆಯಾದವರಲ್ಲಿ ಹಿಂದೂಗಳೇ ಆಗಿದ್ದಾರೆ.
* ಇನ್ನು ಈ ಉಗ್ರರು ಪುರುಷರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಪುರುಷರಿಗೆ ಗುಂಡು ಹಾರಿಸುವ ಮುಂಚೆ ಪ್ಯಾಂಟ್ ಬಿಚ್ಚಿಸಿದ್ದಾರೆ. ಹಿಂದೂಗಳು ಹೌದೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿದ್ದಾರೆ.
* ಈ ದಾಳಿ ಪ್ರತಿರೋಧಕ್ಕೂ ಅಲ್ಲ, ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟವೂ ಅಲ್ಲ. ಇದು ಧಾರ್ಮಿಕ ಭಯೋತ್ಪಾದನೆಯ ನರಮೇಧವೇ ಆಗಿದೆ ಎಂಬ ಆಕ್ರೋಶ ಇದೀಗ ತೀವ್ರವಾಗಿ ವ್ಯಕ್ತವಾಗುತ್ತಿದೆ.












Click it and Unblock the Notifications