ಸಂಭಾವ್ಯ ಪದ್ಮ ಪ್ರಶಸ್ತಿ ವಿಜೇತರಲ್ಲಿ ಕನ್ನಡಿಗರು ಯಾರ್ಯಾರು?
ಇಂದು ಸಂಜೆ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಮಾಡಲಿದ್ದು, ಸಂಭಾವ್ಯ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ.
ಬೆಂಗಳೂರು, ಜನವರಿ 25: 68ನೇ ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಇಂದು ಸಂಜೆ ಕೇಂದ್ರ ಸರಕಾರ ಬಿಡುಗಡೆ ಮಾಡಲಿದೆ. ಸಾಂಭಾವ್ಯ ಪ್ರಶಸ್ತಿ ವಿಜೇತರಲ್ಲಿ ಕರ್ನಾಟಕದ ಮೂವರ ಹೆಸರು ಕೇಳಿ ಬಂದಿದೆ..
ಜನಪದ ಕಲಾವಿದೆ ಸುಕ್ರಿ ಬೊಮ್ಮ ಗೌಡ, ಡಿಸ್ಕಸ್ ಎಸೆತರಗಾರವಿಕಾಸ್ ಗೌಡ ಹಾಗೂ ನಿಘಂಟು ತಜ್ಞ ಜಿ ವೆಂಕಟಸುಬ್ಬಯ್ಯ ಪ್ರತಿಷ್ಠಿತ ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗುವ ಸಾಧ್ಯತೆ ಇದೆ. ತೂಗು ಸೇತುವೆಗಳ ಸರದಾರ ಎಂಜಿನಿಯರ್ ಗಿರೀಶ್ ಭಾರಧ್ವಜ್, ಶೇಖರ್ ನಾಯಕ್ ಕೂಡಾ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.
ಇನ್ನು ಎನ್.ಸಿ.ಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಶರದ್ ಪವಾರ್, ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಪದ್ಮ ವಿಭೂಷಣ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗುವ ಸಾಧ್ಯತೆ ಇದೆ.

ಇನ್ನು ಗಾಯಕ ಕೆ.ಜೆ ಯೇಸುದಾಸ್, ದಿವಂಗತ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್, ದಿವಂಗತ ಲೋಕಸಭಾ ಸ್ಪೀಕರ್ ಪಿ.ಎ ಸಂಗ್ಮಾ, ದಿವಂಗತ ಮಧ್ಯ ಪ್ರದೇಶ ಮುಖ್ಯಮಂತ್ರಿ ಸುಂದರ್ ಲಾಲ್ ಪಟ್ವಾ ಕೂಡಾ ಪದ್ಮ ವಿಭೂಷಣ ಗೌರವಕ್ಕೆ ಪಾತ್ರವಾಗುವ ಸಾಧ್ಯತೆ ಇದೆ.
ಇನ್ನು ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ, ಒಲಂಪಿಕ್ ತಾರೆಯರಾದ ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್, ಪಿ.ಆರ್ ಶ್ರಿಜೇಶ್ ಪದ್ಮ ಶ್ರೀ ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.
ಇನ್ನು ಸಾಗರೋತ್ತರ ಭಾರತೀಯರಲ್ಲಿ ಏಡ್ಸ್ ಸಂಶೋಧಕಿ ಡಾ. ಸುನಿತಿ ಸೊಲೊಮನ್, ಸುರ್ಬಹರ್ ಕಲಾವಿದ ಇಮ್ರತ್ ಖಾನ್ ಮತ್ತು ನೇಪಾಳದ ಸಾಮಾಜಿಕ ಕಾರ್ಯಕರ್ತೆ ಅನುರಾಧಾ ಕೊಯಿರಾಲ ಕೂಡಾ ಪದ್ಮ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸಿನಿಮಾ ವಿಮರ್ಶಕಿ ಭಾವನಾ ಸೋಮಯ್ಯ, ಗಾಯಕಿ ಅನುರಾಧಾ ಪಡಿವಾಳ್, ಮೋಹನವೀಣಾ ಕಲಾವಿದ ವಿಶ್ವ ಮೋಹನ್ ಭಟ್ ಪಟ್ಟಿಯಲ್ಲಿರುವ ಇತರರು ಎಂದು ಸರಕಾರದ ನಂಬಲರ್ಹ ಮೂಲಗಳು ತಿಳಿಸಿವೆ.












Click it and Unblock the Notifications