ಎಲ್ಲಾ ರೈಲುಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕಡ್ಡಾಯ : ಸುಪ್ರಿಂ ಕೋರ್ಟ್
Recommended Video
ನವದೆಹಲಿ, ಅಕ್ಟೋಬರ್ 19: ಎಲ್ಲಾ ರೈಲುಗಳಲ್ಲಿ ಆಮ್ಲಜನಕದ ಸಿಲಿಂಡರ್ ಗಳು ಕಡ್ಡಾಯವಾಗಿ ಇರಲೇಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದೆ. ಈ ಮೂಲಕ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಆಮ್ಲಜನಕ ನೀಡಲು ಸಾಧ್ಯವಾಗುತ್ತದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಈ ಕುರಿತು ಆದೇಶ ನೀಡಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಎ.ಎಂ. ಖನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ, ಚಲಿಸುವ ರೈಲುಗಳಲ್ಲಿ ಒಂದೊಮ್ಮೆ ಪ್ರಯಾಣಿಕರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ವೈದ್ಯಕೀಯ ಸೇವೆ ನೀಡಲು ಅವಕಾಶ ಕಲ್ಪಿಸುವ ವ್ಯವಸ್ಥೆ ಜಾರಿಗೆ ತರುವಂತೆ ಹೇಳಿದೆ. ಇದಕ್ಕಾಗಿ ಏಮ್ಸ್ ತಜ್ಞ ವೈದ್ಯರ ನೆರವು ಪಡೆಯುವಂತೆ ನ್ಯಾಯಾಲಯ ಸೂಚಿಸಿದೆ.
"ಒಂದೊಮ್ಮೆ ರೈಲಿನಲ್ಲಿ ಪ್ರಯಾಣಿಕರು ಯಾವುದಾದರೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಟಿಕೆಟ್ ಕಲೆಕ್ಟರ್ ಗೆ ಈ ಬಗ್ಗೆ ದೂರು ನೀಡಬಹುದು. ಒಂದೊಮ್ಮೆ ತರ್ತು ಸಂದರ್ಭದಲ್ಲಿ ಅಧಿಕಾರಿಯು ಮುಂದಿನ ರೈಲ್ವೇ ನಿಲ್ದಾಣದಲ್ಲಿರುವವರಿಗೆ ಮಾಹಿತಿ ನೀಡಿ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು," ಎಂದು ಹೇಳಿದೆ.
ಈ ಹಿಂದೆ ರಾಜಸ್ಥಾನ ಸರಕಾರ ದೂರ ಪ್ರಯಾಣದ ರೈಲುಗಳಲ್ಲಿ ವೈದ್ಯರು, ನರ್ಸ್ ಮತ್ತು ಅಟೆಂಡರ್ ಒಬ್ಬರನ್ನು ನೇಮಿಸಬೇಕು ಎಂದು ಆದೇಶ ನೀಡಿತ್ತು. ಆದರೆ ಕೇಂದ್ರ ಸರಕಾರ ಇದೆಲ್ಲಾ ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು.
ಇದೀಗ ಸುಪ್ರಿಂ ಕೋರ್ಟ್ ರೈಲಿನಲ್ಲಿ ಆಮ್ಲಜನಕದ ಸಿಲಿಂಡರ್ ಇಡಲು ಸೂಚನೆ ನೀಡಿದೆ.