ಕೋವಿಡ್ 2ನೇ ಅಲೆ; ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿ
ನವದೆಹಲಿ, ಮೇ 17; ಕೋವಿಡ್ 2ನೇ ಅಲೆಯಿಂದಾಗಿ ದೇಶದ 516 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ 10ಕ್ಕಿಂತ ಹೆಚ್ಚಾಗಿದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮರಣ ಪ್ರಮಾಣ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿ ಭಾನುವಾರ ಹಲವು ಸೂಚನೆಗಳನ್ನು ನೀಡಿದೆ.
ಕೋವಿಡ್ ಪರಿಸ್ಥಿತಿ ಎದುರಿಸಲು ಮೂರು ಹಂತದ ಆರೋಗ್ಯ ವ್ಯವಸ್ಥೆಯನ್ನು ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಗ್ರಾಮೀಣ ಮಟ್ಟದಲ್ಲಿ 30 ಹಾಸಿಗೆಗಳ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಬೇಕು, ಇದರಲ್ಲಿ ಕನಿಷ್ಠ 2 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಇರಬೇಕು ಎಂದು ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಶಾಲೆ, ಸಮುದಾಯ ಭವನಗಳು, ಪಂಚಾಯತ್ ಕಟ್ಟಡಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಾವಣೆ ಮಾಡಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 30 ಹಾಸಿಗೆಗಳ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದೆ.

ಪ್ರಾಥಮಿಕ ಹಂತದಲ್ಲಿಯೇ ಸೋಂಕನ್ನು ಪತ್ತೆ ಹಚ್ಚಲು ಆಂಟಿಜೆನ್ ಪರೀಕ್ಷೆ ವಿಧಾನ ಜನರು ಗುಂಪು ಸೇರುವ ಪ್ರದೇಶಗಳಲ್ಲಿ ಲಭ್ಯವಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ. ಪಟ್ಟಣ ಪ್ರದೇಶಗಳಲ್ಲಿಯೂ 30 ಬೆಡ್ಗಳ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಬೇಕು ಎಂದು ಹೇಳಿದೆ.
ಸಮುದಾಯದ ಮಟ್ಟದಲ್ಲಿ ಎಎನ್ಎಂ ಆಂಟಿಜೆನ್ ಪರೀಕ್ಷೆಗಳನ್ನು ಮಾಡಬೇಕು ಈ ಮೂಲಕ ಪ್ರಾಥಮಿಕವಾಗಿ ಸೋಂಕು ಪತ್ತೆ ಹಚ್ಚಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಅವರಿಗೆ ಸಹಾಯ ಮಾಡಬೇಕು ಎಂದು ಆರೋಗ್ಯ ಸಚಿವಾಲಯ ನಿರ್ದೇಶನ ನೀಡಿದೆ.
ಕೋವಿಡ್ ಕೇರ್ ಸೆಂಟರ್ಗಳಲ್ಲಿ ಪ್ರತಿ 10 ಬೆಡ್ಗಳಿಗೆ ಒಂದು ಪಲ್ಸ್ ಆಕ್ಸಿಮೀಟರ್ ಇರುವಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕು. 5 ಲೀಟರ್ನ 2 ಆಕ್ಸಿಜನ್ ಸಿಲಿಂಡರ್, ಆಕ್ಸಿಜನ್ ವ್ಯವಸ್ಥೆ ಇರುವ ಅಂಬ್ಯುಲೆನ್ಸ್ 24 ಗಂಟೆಯೂ ಲಭ್ಯವಿರಬೇಕು ಎಂದು ಸೂಚನೆ ನೀಡಲಾಗಿದೆ.
ಕೋವಿಡ್ ಕೇರ್ ಸೆಂಟರ್ಗಳಿಗೆ ಹತ್ತಿರವಾಗಿ ಕನಿಷ್ಠ ಒಂದು ನಿಗದಿಪಡಿಸಿದ ಕೋವಿಡ್ ಆಸ್ಪತ್ರೆ ಇರಬೇಕು. ಇದರಿಂದಾಗಿ ತುರ್ತು ಸಂದರ್ಭದಲ್ಲಿ ಕೇರ್ ಸೆಂಟರ್ನ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯಕವಾಗಲಿದೆ ಎಂದು ಸಚಿವಾಲಯ ಸೂಚನೆ ಕೊಟ್ಟಿದೆ.












Click it and Unblock the Notifications