ವೆಮುಲಾ ತಾಯಿಯನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ: ಬಿಜೆಪಿ
ನವದೆಹಲಿ, ಜೂನ್ 20: 'ರೋಹಿತ್ ವೆಮುಲಾ ತಾಯಿ ರಾಧಿಕಾ ವೆಮುಲಾ ಅವರನ್ನು ವಿಪಕ್ಷಗಳು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿವೆ' ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವೆಮುಲಾ ತಾಯಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿದೆ. ಅಲ್ಲದೆ, ಆಡಳಿತ ಪಕ್ಷದ ವಿರುದ್ಧ ಅವರನ್ನು ಎತ್ತಿಕಟ್ಟುತ್ತಿದೆ ಎಂದು ಹೇಳಿದರು.
ಮಗನನ್ನು ಕಳೆದುಕೊಳ್ಳುವ ದುಃಖವೇನೆಂದು ನನಗೆ ಗೊತ್ತು: ರಾಧಿಕಾ ವೆಮುಲಾ
ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ತಮ್ಮ ಹಾಸ್ಟೆಲ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು, ಈ ವಿಷಯ ದೇಶದಾದ್ಯಂತ ಚರ್ಚೆಯಾಗಿ, ವಿವಾದ ಸೃಷ್ಟಿಸಿತ್ತು.
ವೆಮುಲಾ ಸಾವಿನ ನಂತರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ವೆಮುಲಾ ಕುಟುಂಬಕ್ಕೆ 20 ಲಕ್ಷ ರೂ.ಗಳನ್ನು ನೀಡುವುದಾಗಿ ಮಾತುಕೊಟ್ಟಿತ್ತು.
ಕಂತುಗಳ ಮೇಲೆ ಈ ಹಣ ನೀಡುತ್ತಿದ್ದ ಐಯುಎಂಎಲ್ ನೀಡಿದ್ದ ಚೆಕ್ ವೊಂದು ಬೌನ್ಸ್ ಆಗಿತ್ತು. ಇದರಿಂದಾಗಿ ಇರಿಸುಮುರಿಸನುಭವಿಸಿದ ವೆಮುಲಾ ತಾಯಿ, ಐಯುಎಂಎಲ್ ಗೆ ನಮಗೆ ಹಣ ನೀಡಲು ಇಷ್ಟವಿಲ್ಲದಿದ್ದರೆ ನೇರವಾಗಿ ಹೇಳಲಿ. ಹೀಗೆ ಸತಾಯಿಸುವ ಅಗತ್ಯವಿಲ್ಲ' ಎಂದಿದ್ದರು.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ವೆಮುಲಾ ತಾಯಿ ಮಾತನಾಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಗೋಯಲ್, 'ಇವೆಲ್ಲ ವಿಪಕ್ಷಗಳ ಕುತಂತ್ರ. ಬೇಕೆಂದೇ ವೆಮುಲಾ ತಾಯಿಯವರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಲಾಗುತ್ತಿದೆ' ಎಂದು ಅವರು ದೂರಿದ್ದರು.
ರಾಧಿಕಾ ವೆಮುಲಾ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯೆ ನೀಡಿದ ರಾಧಿಕಾ ವೆಮುಲಾ, 'ನಾನು ಪ್ರಧಾನಿ ಮೋದಿಯವರ ವಿರುದ್ಧವಾಗಲೀ, ಬಿಜೆಪಿ ವಿರುದ್ಧವಾಗಲೀ ಮಾತನಾಡಿದ್ದು ನನ್ನ ಸ್ವಂತ ಅಭಿಪ್ರಾಯ. ಯಾರ ಮಾತನ್ನೂ ಕೇಳಿ ನಾನು ಹೀಗೆ ಮಾಡಿಲ್ಲ. ನನ್ನನ್ನು ವಿಪಕ್ಷಗಳು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿವೆ ಎಂಬ ಮಾತು ಸುಳ್ಳು ಎಂದು ರಾಧಿಕಾ ವೆಮುಲಾ ಸಮಜಾಯಿಷಿ ನೀಡಿದ್ದಾರೆ.