ರಾಜಕೀಯ ತಿರುವು ಪಡೆದುಕೊಂಡ ಸಂಸತ್ನಲ್ಲಿ ಭದ್ರತಾ ಲೋಪ: ಮೋದಿ ಸರ್ಕಾರ ವಿರುದ್ಧ ಮುಗಿಬಿದ್ದ ವಿಪಕ್ಷಗಳು
ಮೈಸೂರು, ಡಿಸೆಂಬರ್ 14: ನಮ್ಮ ದೇಶದಲ್ಲಿ ಏನೇ ಘಟನೆಗಳು ನಡೆದರೂ ಅದು ರಾಜಕೀಯ ಸ್ವರೂಪ ಪಡೆಯುತ್ತದೆ. ಅದರ ಗಂಭೀರತೆ ಏನೇ ಇದ್ದರೂ ಅದೆಲ್ಲವನ್ನು ಬದಿಗೊತ್ತಿ ಅದರಲ್ಲಿ ರಾಜಕೀಯ ಬೇಳೆ ಬೇಯಿಸುವುದು ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮಾಡಿಕೊಂಡು ಬಂದಿದ್ದಾರೆ. ಹೀಗಿರುವಾಗ ಮುಂದೆ ಲೋಕಸಭಾ ಚುನಾವಣೆ ಇರುವ ಸಂದರ್ಭದಲ್ಲಿ ನಡೆದ ಸಂಸತ್ ಭವನಕ್ಕೆ ದುಷ್ಕರ್ಮಿಗಳು ನುಗ್ಗಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವುದು ಎದ್ದು ಕಾಣಿಸುತ್ತಿದೆ.
ಸಂಸತ್ ಭವನಕ್ಕೆ ದುಷ್ಕರ್ಮಿಗಳು ನುಗ್ಗಿದ ಪ್ರಕರಣ ಗಂಭೀರವಾಗಿದ್ದು, ಇದು ಇಡೀ ದೇಶವೇ ತಲೆತಗ್ಗಿಸುವ ಮತ್ತು ಭದ್ರತೆಯನ್ನೇ ಪ್ರಶ್ನೆ ಮಾಡುವ ವಿಚಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತದೆ.

ಅದು ಒಂದೆಡೆಯಾದರೆ, ಮತ್ತೊಂದೆಡೆ ಈ ವಿಚಾರ ರಾಜಕೀಯ ಕೆಸರು ಎರಚಾಟಕ್ಕೂ ಕಾರಣವಾಗುತ್ತಿದ್ದು, ಇದರಲ್ಲಿ ರಾಜಕೀಯವಾಗಿ ಯಾವ ರೀತಿಯಲ್ಲಿ ಲಾಭ ಪಡೆದುಕೊಳ್ಳಬಹುದೋ ಅದನ್ನು ಮಾಡಿಕೊಳ್ಳಲು ಕೆಲವರು ಮುಂದಾಗಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.
ಸಂಸತ್ ಒಳಗೆ ನುಗ್ಗಿ ಸ್ಮೋಕ್ ಬಾಂಬ್ ಎಸೆದು ದಾಂಧಲೆ ನಡೆಸಿರುವುದು ಕ್ಷಮಿಸಲಾರದ ಕೃತ್ಯ. ಅದಕ್ಕೆ ಏನು ಕ್ರಮ ಕೈಗೊಳ್ಳಬೇಕೋ ಅದೆಲ್ಲವೂ ಆಗಲೇ ಬೇಕು ಅದು ಆಗುತ್ತದೆ. ಆದರೆ ಮುಂದೆ ಲೋಕಸಭಾ ಚುನಾವಣೆ ಇರುವುದರಿಂದಾಗಿ ಈ ಪ್ರಕರಣ ರಾಜಕೀಯ ಬಣ್ಣಪಡೆದುಕೊಳ್ಳುವುದು ಖಚಿತವಾಗಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಈಗ ವಿಪಕ್ಷಗಳು ಮುಗಿಬಿದ್ದಿವೆ. ಅದು ಕೇಂದ್ರ ಮಟ್ಟದ ವಿಚಾರವಾಗಿದ್ದರೆ, ಇತ್ತ ಸಂಸತ್ಗೆ ನುಗ್ಗಿದ ದುಷ್ಕರ್ಮಿಗಳಿಬ್ಬರು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದಿದ್ದರು ಎಂಬುದು ಈಗ ಕಾಂಗ್ರೆಸ್ಸಿಗರು ಸಿಡಿದೇಳಲು ಕಾರಣವಾಗಿದೆ.
ಮುಗಿ ಬಿದ್ದ ಕಾಂಗ್ರೆಸ್ ನಾಯಕರು
ಸಂಸದ ಪ್ರತಾಪ್ ಸಿಂಹ ರನ್ನು ಕಾಂಗ್ರೆಸ್ ನಾಯಕರು ಮೊದಲಿನಿಂದಲೂ ಟಾರ್ಗೆಟ್ ಮಾಡಿಕೊಂಡು ಬರುತ್ತಿದ್ದರು. ಆದರೆ ಈಗ ನಡೆದ ಘಟನೆ ಇಡೀ ಕೈ ನಾಯಕರು ಅವರ ಮೇಲೆ ಮುಗಿ ಬೀಳುವಂತೆ ಮಾಡಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದರೆ, ಅತ್ತ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಆರಂಭವಾಗಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ತನಕ ಸಂಸದ ಪ್ರತಾಪ್ ಸಿಂಹರನ್ನೇ ಆರೋಪಿ ಸ್ಥಾನದಲ್ಲಿರಿಸಿ ಮಾತನಾಡುತ್ತಿದ್ದಾರೆ.
ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರು ಎನ್ನುವುದು ಸಮಗ್ರ ತನಿಖೆಯಿಂದ ಗೊತ್ತಾಗುತ್ತದೆ. ಇಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಪಾತ್ರ ಏನಿದೆ? ಎಷ್ಟಿದೆ? ಅದಕ್ಕೆ ಅವರು ಉತ್ತರ ಕೊಡಲೇ ಬೇಕಾಗಿದೆ. ಅದನ್ನು ಎಲ್ಲಿ ಕೊಡಬೇಕೋ ಅಲ್ಲಿ ಕೊಡಲೂ ಬಹುದು.
ಆದರೆ ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಕಾಂಗ್ರೆಸ್ಗೆ ಅಗತ್ಯವೂ ಹೌದು. ಏಕೆಂದರೆ ಮುಂದೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಬೇಕಾದರೆ ಇದನ್ನು ಬಳಸಿಕೊಳ್ಳಲೇ ಬೇಕು. ಇಲ್ಲಿ ಎಲ್ಲವೂ ರಾಜಕೀಯ ದೃಷ್ಟಿಯಿಂದಲೇ ನಡೆಯುವುದರಿಂದ ಅದನ್ನು ತಪ್ಪು ಎಂದು ಹೇಳಲಾಗದು.

ಮುಂದೆ ಏನಾಗಬಹುದೆಂಬುದನ್ನು ಕಾದು ನೋಡೋಣ
ರಾಜ್ಯದ ಮಟ್ಟಿಗೆ ಸಂಸದ ಪ್ರತಾಪ್ ಸಿಂಹ ಹಿಂದೂ ಫೈಯರ್ ಬ್ರಾಂಡ್. ಸಮಯ ಸಂದರ್ಭ ಸಿಕ್ಕಾಗಲೆಲ್ಲ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲ ನಾಯಕರಿಗೆ ಟಕ್ಕರ್ ಕೊಡುತ್ತಲೇ ಬಂದಿದ್ದಾರೆ. ರಾಜ್ಯ ಸರ್ಕಾರದ ನಿರ್ಧಾರಗಳನ್ನು ಕಟುವಾಗಿ ಟೀಕಿಸುತ್ತಲೇ ಇದ್ದಾರೆ.
ಹಿಂದುತ್ವ ವಿಚಾರದಲ್ಲಿ ಕಾಂಗ್ರೆಸ್ ನ್ನು ಟೀಕಿಸುವ ಪ್ರತಾಪ್ ಸಿಂಹ ವಿರುದ್ಧ ಕೈಪಡೆ ಆಗಾಗ್ಗೆ ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಅದರಲ್ಲೂ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಪ್ರತಾಪ್ ಸಿಂಹ ಮತ್ತೊಮ್ಮೆ ಗೆಲುವು ಕಾಣದಂತೆ ಮಾಡುವ ಸಲುವಾಗಿ ಹಲವು ತಂತ್ರಗಳನ್ನು ಆರಂಭಿಸಲಾಗಿದೆ.
ಮೈಸೂರು ಲೋಕಸಭಾ ಕ್ಷೇತ್ರ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿದ್ದು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲಬೇಕು ಎಂಬುದು ಕಾಂಗ್ರೆಸ್ ನ ಹಠವಾಗಿದೆ. ಅದಕ್ಕಾಗಿಯೇ ಸಿದ್ಧತೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ನಡುವೆ ಸಂಸತ್ಗೆ ನುಗ್ಗಿದ ಪ್ರಕರಣದ ದುಷ್ಕರ್ಮಿಗಳಿಗೆ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ದೊರೆತಿತ್ತು ಎಂಬುದು ಕಾಂಗ್ರೆಸ್ಗೆ ಸಿಕ್ಕ ಮತ್ತೊಂದು ದೊಡ್ಡ ಅಸ್ತ್ರವಾಗಿದೆ.
ಅದನ್ನು ಮುಂದಿಟ್ಟುಕೊಂಡು ಕೇವಲ ಪ್ರತಾಪ್ ಸಿಂಹ ಮಾತ್ರವಲ್ಲ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮುಂದಾಗಿದ್ದು ಅದರಂತೆ ರಾಜ್ಯ ಸೇರಿದಂತೆ ಎಲ್ಲೆಡೆ ಪ್ರತಿಭಟನೆ, ಹೋರಾಟಗಳು ಆರಂಭವಾಗಿವೆ. ಅತ್ತ ಪ್ರತಾಪ್ ಸಿಂಹ ಪರ ಬೆಂಬಲಿಗರು ಅಭಿಯಾನ ಆರಂಭಿಸಿದ್ದಾರೆ. ಒಟ್ಟಾರೆ ರಾಜಕೀಯವಾಗಿ ಯಾವ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.












Click it and Unblock the Notifications