ಅಯ್ಯೋ ಬಿಜೆಪಿಗೆ ಯಾರ್ ಹೆದರುತ್ತಾರೆ; ಹೀಗೆ ಹೇಳಿದ್ದೇಕೆ ರಾಹುಲ್ ಗಾಂಧಿ!?
ಕನ್ಯಾಕುಮಾರಿ, ಸೆಪ್ಟೆಂಬರ್ 07: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಪ್ರತಿಪಕ್ಷದ ಒಬ್ಬರೇ ಒಬ್ಬ ನಾಯಕರು ಭಯ ಪಡುವುದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
"ಸಿಬಿಐ, ಇಡಿ ಮತ್ತು ಐಟಿ ಇಲಾಖೆಯನ್ನು ಬಳಸಿಕೊಂಡು ಪ್ರತಿಪಕ್ಷಗಳನ್ನು ಹೆದರಿಸಬಹುದು ಎಂದು ಬಿಜೆಪಿಯವರು ಭಾವಿಸಿದ್ದಾರೆ. ಮುಖ್ಯವಾಗಿ ಸಮಸ್ಯೆ ಏನೆಂದರೆ ಅವರು ಭಾರತೀಯರನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಭಾರತದ ಜನರು ಈಗ ಹೆದರುವುದಿಲ್ಲ. ಒಬ್ಬರೇ ಒಬ್ಬ ವಿರೋಧ ಪಕ್ಷದ ನಾಯಕನೂ ಸಹ ಬಿಜೆಪಿಗೆ ಹೆದರುವುದಿಲ್ಲ,'' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿಯದ್ದು ಅಧಿಕಾರದ ಯಾತ್ರೆ, ಕಾಂಗ್ರೆಸ್ನದ್ದು ಸತ್ಯದ ಯಾತ್ರೆ: ಕನ್ಹಯ್ಯ ಕುಮಾರ್
ತ್ರಿವರ್ಣ ಧ್ವಜವು ಬಿಜೆಪಿಯ ವೈಯಕ್ತಿಕ ಆಸ್ತಿಯಲ್ಲ:
ಭಾರತದ ತ್ರಿವರ್ಣ ಧ್ವಜದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ರಾಹುಲ್ ಗಾಂಧಿ, ಬಿಜೆಪಿಯು ಅದನ್ನು ತಮ್ಮ ವೈಯಕ್ತಿಕ ಆಸ್ತಿಯ ರೀತಿ ಪರಿಗಣಿಸಿದಂತೆ ಕಾಣುತ್ತಿದೆ ಎಂದು ಕಿಡಿ ಕಾರಿದರು. "ಈ ಸುಂದರವಾದ ಸ್ಥಳದಿಂದ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲು ನನಗೆ ತುಂಬಾ ಸಂತೋಷವಾಗಿದೆ. ರಾಷ್ಟ್ರಧ್ವಜವು ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಧರ್ಮ ಮತ್ತು ಭಾಷೆಯನ್ನು ಪ್ರತಿನಿಧಿಸುತ್ತದೆ. ಬಿಜೆಪಿ ಮತ್ತು ಆರ್ಎಸ್ಎಸ್ ಮಂದಿಯು ಈ ಧ್ವಜವನ್ನು ತಮ್ಮ ವೈಯಕ್ತಿಕ ಆಸ್ತಿ ಎಂದು ಭಾವಿಸುತ್ತಿದ್ದಾರೆಯೇ," ಎಂದು ಪ್ರಶ್ನೆ ಮಾಡಿದರು.
ಭಾರತ್ ಜೋಡೋ ಯಾತ್ರೆ ಪ್ರಾರಂಭಿಸಿದ ಕಾಂಗ್ರೆಸ್:
ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಮಾಸ್ಟರ್ ಸ್ಟ್ರೋಕ್ ಕೊಡುವ ಉದ್ದೇಶದಿಂದಲೇ ಭಾರತ್ ಜೋಡೋ ಯಾತ್ರೆ ಅನ್ನು ಕಾಂಗ್ರೆಸ್ ಆರಂಭಿಸುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದೇ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ರಾಹುಲ್ ಗಾಂಧಿಯು ಮುಂದಿನ 150 ದಿನಗಳ ಅವಧಿಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3570 ಕಿಲೋ ಮೀಟರ್ ಪ್ರಯಾಣ ಮಾಡಲಿದ್ದಾರೆ.
ರಾಷ್ಟ್ರವ್ಯಾಪಿ ಯಾತ್ರೆಯನ್ನು ಪ್ರಾರಂಭಿಸುತ್ತಿದ್ದಂತೆ, ರಾಹುಲ್ ಗಾಂಧಿಯ ವಸತಿ ಮತ್ತು ಆಹಾರಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಅವರು ಯಾವುದೇ ಹೋಟೆಲ್ನಲ್ಲಿ ಉಳಿದುಕೊಳ್ಳುವುದಿಲ್ಲ, ಸಂಪೂರ್ಣ ಪ್ರಯಾಣವನ್ನು ಸರಳವಾಗಿ ಪೂರ್ಣಗೊಳಿಸುತ್ತಾರೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ರಾಹುಲ್ ಗಾಂಧಿ ಯಾತ್ರೆ ಹೇಗಿರಲಿದೆ?
ಮುಂದಿನ 150 ದಿನಗಳ ಕಾಲ ರಾಹುಲ್ ಗಾಂಧಿ ಕಂಟೈನರ್ ನಲ್ಲಿಯೇ ಉಳಿದುಕೊಳ್ಳುತ್ತಾರೆ. ಕೆಲವು ಕಂಟೈನರ್ಗಳಲ್ಲಿ ಮಲಗುವ ಹಾಸಿಗೆ, ಶೌಚಾಲಯ ಮತ್ತು ಎಸಿಗಳನ್ನು ಸಹ ಅಳವಡಿಸಲಾಗಿದೆ. ಪ್ರಯಾಣದ ಸಮಯದಲ್ಲಿ, ತಾಪಮಾನ ಮತ್ತು ಪರಿಸರವು ಅನೇಕ ಪ್ರದೇಶಗಳಲ್ಲಿ ಭಿನ್ನವಾಗಿರುತ್ತದೆ. ಈ ಸ್ಥಳ ಬದಲಾವಣೆಯೊಂದಿಗೆ ತೀವ್ರವಾದ ಶಾಖ ಮತ್ತು ತೇವಾಂಶವನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಗಳನ್ನು ಮಾಡಲಾಗಿದೆ. ಇಂತಹ ಸುಮಾರು 60 ಕಂಟೈನರ್ಗಳನ್ನು ಸಿದ್ಧಪಡಿಸಿ ಕನ್ಯಾಕುಮಾರಿಗೆ ಕಳುಹಿಸಲಾಗಿದ್ದು, ಅದರಲ್ಲಿ ಈ ಎಲ್ಲಾ ಕಂಟೈನರ್ಗಳನ್ನು ಇರಿಸಲಾಗಿದೆ.
148 ದಿನಗಳ ಯಾತ್ರೆ ಕಾಶ್ಮೀರದಲ್ಲಿ ಮುಕ್ತಾಯವಾಗಲಿದೆ. ಐದು ತಿಂಗಳ ಯಾತ್ರೆಯು 3,500 ಕಿಲೋಮೀಟರ್ ಮತ್ತು 12ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಂಚರಿಸಲಿದೆ. ಪ್ರತಿನಿತ್ಯ 25 ಕಿಲೋ ಮೀಟರ್ ಸಂಚರಿಸುವುದಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ.