ಭಾರತ-ಚೀನಾ ಗಡಿ ಕುರಿತು ಚರ್ಚೆ ನಡೆಸುವಂತೆ ಪಟ್ಟು: ಸಂಸತ್ನಿಂದ ಹೊರನಡೆದ ಪ್ರತಿಪಕ್ಷ ನಾಯಕರು
ನವದೆಹಲಿ, ಡಿಸೆಂಬರ್ 21: ಚೀನಾ ಜತೆಗಿನ ಗಡಿ ಸಮಸ್ಯೆ ಕುರಿತು ಚರ್ಚೆ ನಡೆಸುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಲೋಕಸಭೆಯಿಂದ ಬುಧವಾರ ಹೊರನಡೆದವು.
ಶೂನ್ಯವೇಳೆಗೆ ಸದನ ಸಮಾವೇಶಗೊಂಡ ತಕ್ಷಣ ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸದಸ್ಯರು ಸಭಾತ್ಯಾಗ ಮಾಡಿದರು.
ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಜನತಾದಳ (ಸಂಯುಕ್ತ) ಸಂಸದರು ಸಭಾತ್ಯಾಗ ಮಾಡಿದರು.
ಭಾರತ-ಚೀನಾ ವಿಷಯದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಕಾಂಗ್ರೆಸ್ನ ಸಭಾನಾಯಕ ಅಧೀರ್ ರಂಜನ್ ಚೌಧರಿ ಅವರು ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು. ಇದು ಪ್ರತಿಪಕ್ಷಗಳ ಹಕ್ಕು ಎಂದು ಪ್ರತಿಪಾದಿಸಿದರು.
'ನಾವು ಇಂದು ಬೆಳಿಗ್ಗೆಯಿಂದ ಚೀನಾ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿದ್ದೇವೆ. ಟಿವಿಯಲ್ಲಿ, ಹೊರಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಆದರೆ, ಸಂಸತ್ತಿನಲ್ಲಿ ಚರ್ಚೆಗಳು ನಡೆಯುತ್ತಿಲ್ಲ' ಎಂದು ಅಧೀರ್ ರಂಜನ್ ಚೌಧರಿ ತಿಳಿಸಿದರು.
'ಪ್ರತಿಪಕ್ಷಗಳಿಗೆ ಚರ್ಚೆಗೆ ಅವಕಾಶ ಕೊಡಿ. ಇದು ನಮ್ಮ ಹಕ್ಕು' ಎಂದು ಹೇಳಿದರು.
ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಕೂಡ ಚರ್ಚೆಗೆ ಒತ್ತಾಯಿಸಿದರು. ನಂತರ ಸದನವು ಡ್ರಗ್ಸ್ ವಿಚಾರದ ಕುರಿತು ಚರ್ಚೆ ಆರಂಭಿಸಿದರು.
ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಚೀನಾ ಹಾಗೂ ಭಾರತ ಸೈನಿಕರ ನಡುವೆ ಹೊಡೆದಾಟಗಳಾಗಿವೆ. ಇದು ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣವನ್ನು ನಿರ್ಮಿಸಿದೆ.
ಟಿಬೆಟಿಯನ್ ವಾಯು ನೆಲೆಯಲ್ಲಿ, ಭಾರತಕ್ಕೆ ಮುಖ ಮಾಡಿ ಚೀನಾದ ಅತ್ಯಾಧುನಿಕ ಕ್ಷಿಪಣಿ ಹಾಗೂ ಡ್ರೋನ್ಗಳನ್ನು ನಿರ್ಮಿಸಿದೆ. ಅರುಣಾಚಲ ಗಡಿ ಭಾಗಗಳಲ್ಲಿ ಗ್ರಾಮಗಳನ್ನು ನಿರ್ಮಿಸಿದೆ. ಸೇತುವೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಚೀನಾ ಒದಗಿಸಿದೆ. ಇದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳ ನಾಯಕರು ಈ ಕುರಿತು ಚರ್ಚೆ ನಡೆಸಬೇಕೆಂದು ಕಳೆದ ವಾರವೇ ಒತ್ತಾಯಿಸಿದ್ದಾರೆ. ಚೀನಾ ಉಪಟಳದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಾತನಾಡಬೇಕೆಂದು ಮನವಿ ಮಾಡಿದ್ದಾರೆ.
ಭಾರತ್ ಜೋಡೊ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
'ಚೀನಾ ದೇಶವು ಯುದ್ಧಕ್ಕೆ ಸಿದ್ದತೆ ನಡೆಸಿದೆ. ಆದರೆ, ನಮ್ಮ ಸರ್ಕಾರ ಮಾತ್ರ ನಿದ್ರೆಗೆ ಜಾರಿದೆ' ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಪ್ರಸ್ತುತ ರಾಜಸ್ಥಾನದಲ್ಲಿ ಭಾರತ್ ಜೋಡೊ ಯಾತ್ರೆ ಕೈಗೊಂಡಿದ್ದಾರೆ. ಡಿಸೆಂಬರ್ 24ರಂದು ಭಾರತ್ ಜೋಡೊ ಯಾತ್ರೆಯು ರಾಷ್ಟ್ರ ರಾಜಧಾನಿ ದೆಹಲಿಯನ್ನು ತಲುಪಲಿದೆ.