ಆಪರೇಷನ್ ಕಮಲ ಆರೋಪ: ವಿಡಿಯೋ ಬಿಡುಗಡೆ ಮಾಡಿದ ತೆಲಂಗಾಣ ಸಿಎಂ
ಹೈದರಾಬಾದ್, ನ.03: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಗುರುವಾರ ಅನಿರೀಕ್ಷಿತ ಸುದ್ದಿಗೋಷ್ಠಿ ಕರೆದಿದ್ದು, ಬಿಜೆಪಿ ವಿರುದ್ಧದ ಆಪರೇಷನ್ ಕಮಲ ಆರೋಪಕ್ಕೆ ಸಾಕ್ಷಿಯಾಗಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ತಮ್ಮ ಪಕ್ಷದ ಶಾಸಕರನ್ನು ಖರೀದಿಸಲು ಯತ್ನಿಸಿದ ಆರೋಪಕ್ಕೆ ಸಾಕ್ಷಿಯಾಗಿ ಸುದ್ದಿಗೋಷ್ಠಿ ಕರೆದು ಸರಣಿ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ನಾಲ್ವರು ಟಿಆರ್ಎಸ್ ಶಾಸಕರಿಗೆ ಬಿಜೆಪಿ ಜನರು ಲಂಚ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಡಿಯೋಗಳು ನಾಲ್ವರು ಟಿಆರ್ಎಸ್ ಶಾಸಕರಿಗೆ ಬಿಜೆಪಿ ಲಂಚ ನೀಡಲು ಯತ್ನಿಸಿದೆ ಎಂಬ ತಮ್ಮ ಪಕ್ಷದ ಹೇಳಿಕೆಗೆ ಸಾಕ್ಷಿ ಎಂದು ಕೆಸಿಆರ್ ಹೇಳಿದ್ದಾರೆ.
ತೆಲಂಗಾಣ ಆಪರೇಷನ್ ಕಮಲ: ಬಂಧಿತರ ಬಿಡುಗಡೆಗೆ ಕೋರ್ಟ್ ಆದೇಶ
ಕಳೆದ ವಾರ ತೆಲಂಗಾಣದಲ್ಲಿ ನಾಲ್ವರು ಟಿಆರ್ಎಸ್ ಶಾಸಕರಾದ ರೇಗಾ ಕಾಂತ ರಾವ್, ಗುವ್ವಾಲಾ ಬಾಲರಾಜು, ಬೀರಂ ಹರ್ಷವರ್ಧನ್ ರೆಡ್ಡಿ ಮತ್ತು ಪೈಲಟ್ ರೋಹಿತ್ ರೆಡ್ಡಿ ಅವರು ಪಕ್ಷವನ್ನು ಬದಲಾಯಿಸಲು ಬಿಜೆಪಿ ಆಮಿಷ ಒಡ್ಡಲು ಪ್ರಯತ್ನಿಸಿದೆ ಎಂದು ಹೇಳಿದ್ದರು.
ಬಿಜೆಪಿ ತನ್ನ ಶಾಸಕರಿಗೆ ಹಣ ಮತ್ತು ಹುದ್ದೆಯ ಆಮಿಷಗಳನ್ನು ನೀಡುವ ಮೂಲಕ ಟಿಆರ್ಎಸ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಕೆಸಿಆರ್ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಂದು ಗಂಟೆಗೂ ಹೆಚ್ಚಿನ ವಿಡಿಯೋವಿದೆ; ಕೆಸಿಆರ್
ಬಿಜೆಪಿ ಖರೀದಿಸಲು ಯತ್ನಿಸಿದೆ ಎಂದು ಆರೋಪಿಸಿರುವ ನಾಲ್ವರು ಶಾಸಕರನ್ನು ಪ್ರಸ್ತುತಪಡಿಸಿದ ಕೆಸಿಆರ್, ಬಿಜೆಪಿಯನ್ನು ಒಳಗೊಂಡಿರುವ ಒಂದು ಗಂಟೆಗೂ ಹೆಚ್ಚು ಹಿಡನ್ ಕ್ಯಾಮೆರಾ ದೃಶ್ಯಗಳು ತಮ್ಮ ಬಳಿ ಇವೆ ಎಂದು ಹೇಳಿದ್ದಾರೆ.
ಧಿಡೀರ್ ಎಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಐದು ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಫೋಟೋಗಳನ್ನು ತೋರಿಸಿದ್ದಾರೆ.
"ತಮ್ಮ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷದ ನಾಲ್ವರು ಶಾಸಕರಿಗೆ ದೆಹಲಿ ದಲ್ಲಾಳಿಗಳು ಲಂಚ ನೀಡಲು ಪ್ರಯತ್ನಿಸಿದ್ದಾರೆ" ಎಂದು ಆರೋಪಿಸಿದ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕಿಡಿಕಾರಿದ್ದಾರೆ.
ಬಿಜೆಪಿ ಆಪರೇಷನ್ ಕಮಲ ನಡೆಸಲು ಯತ್ನಿಸಿತೆ?
ತೆಲಂಗಾಣದ ಫಾರ್ಮ್ಹೌಸ್ನಲ್ಲಿ ಕಳೆದ ವಾರ ನಡೆದ ಘಟನೆಯನ್ನು ಉಲ್ಲೇಖಿಸಿರುವ ಕೆಸಿಆರ್ ಅವರ ಪಕ್ಷಕ್ಕೆ ಗುರುವಾರ ನಡೆದ ಉಪಚುನಾವಣೆಗೆ ಪ್ರಮುಖವಾಗಿದೆ. ಈ ಘಟನೆ ಉಪಚುನಾವಣೆಗೂ ಮುನ್ನ ರಾಜ್ಯದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಇದರಲ್ಲಿ ದೆಹಲಿಯವರ ಪಾತ್ರ ಅಧಿಕವಾಗಿದೆ ಎಂದು ಆರೋಪಿಸಿ, ವಿವಾದವನ್ನು ರಾಷ್ಟ್ರೀಯ ಮಟ್ಟದ್ದು ಎಂದು ಹೇಳಲು ಯತ್ನಿಸಿದ್ದಾರೆ.
ದೆಹಲಿ ದಲ್ಲಾಳಿಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು 20 ಬಾರಿ, ಪ್ರಧಾನಿ ನರೇಂದ್ರ ಮೋದಿಯನ್ನು ಮೂರು ಬಾರಿ ಉಲ್ಲೇಖಿಸಿದ್ದಾರೆ. ತೆಲಂಗಾಣದ ಫಾರ್ಮ್ಹೌಸ್ನಲ್ಲಿ ನಡೆದ ಘಟನೆ ಅಪರೇಷನ್ ಕಮಲವೇ ಎಂದು ಹೇಳಿದ್ದಾರೆ.
ಆಪರೇಷನ್ ಕಮಲದಲ್ಲಿ ಬಿಎಲ್ ಸಂತೋಷ್ ಪಾತ್ರ ಉಲ್ಲೇಖಿಸಿದ ಸ್ವಾಮೀಜಿ!
ಇನ್ನು ಬಿಜೆಪಿ ಸರ್ಕಾರ ರಚನೆ ಮಾಡಲು ಕರ್ನಾಟಕದಲ್ಲಿ ಶಾಸಕರನ್ನು ಹೇಗೆ ಸಿಂಹಾಸನದಿಂದ ಕೆಳಗಿಳಿಸಿದರು ಮತ್ತು ಅವರನ್ನು ಹೇಗೆ ಆಪರೇಷನ್ ಕಮಲಕ್ಕೆ ಒಳಪಡಿಸಿದರು ಎಂಬುದರ ಬಗ್ಗೆಯೂ ಕೆಸಿಆರ್ ಮಾತನಾಡಿದ್ದಾರೆ.
ಕೆಸಿಆರ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿವಲ್ಲಿ ಶಾಸಕರನ್ನು ಕುದುರಿಸುವಲ್ಲಿ ಬಿಎಲ್ ಸಂತೋಷ್ ಪಾತ್ರವನ್ನು ಸ್ವಾಮೀಜಿ ವಿವರಿಸುತ್ತಾರೆ. ಇದನ್ನು ಉಲ್ಲೇಖಿಸಿರುವ ಕೆಸಿಆರ್, ತೆಲಂಗಾಣ, ಆಂದ್ರ ಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳನ್ನು ಅಧಿಕಾರದಿಂದ ಕೆಳಗಿಳಿಸುವುದು ಅವರ ಗುರಿಯಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ಉಳಿಸಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಬೇಕು
ಸುದ್ದಿಗೋಷ್ಠಿಯಲ್ಲಿ "ದೇಶವನ್ನು ಉಳಿಸಿ" ಎಂದು ನ್ಯಾಯಾಂಗಕ್ಕೆ ವಿನಂತಿ ಮಾಡಿದ ಅವರು, ಸುಪ್ರೀಂಕೋರ್ಟ್, ಹೈಕೋರ್ಟ್ಗಳ ಉನ್ನತ ನ್ಯಾಯಾಧೀಶರು ಮತ್ತು ವಿರೋಧ ಪಕ್ಷದ ನಾಯಕರಿಗೆ ಈ ವಿಡಿಯೋಗಳನ್ನು ಕಳುಹಿಸುವುದಾಗಿ ಹೇಳಿದ್ದಾರೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಸಿಎಂ ಕೆಸಿಆರ್ ಒತ್ತಾಯಿಸಿದ್ದಾರೆ. ಈ ಅನಾರೋಗ್ಯಕರ ರಾಜಕಾರಣ ಭಾರತದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಇರಲಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿದ್ದಾರೆ.
ತೆಲಂಗಾಣ, ಆಂಧ್ರಪ್ರದೇಶ, ದೆಹಲಿ ಮತ್ತು ರಾಜಸ್ಥಾನದಲ್ಲಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕೆಸಿಆರ್ ಆರೋಪಿಸಿದ್ದಾರೆ.
ಬುಧವಾರ ತೆಲಂಗಾಣ ರಾಷ್ಟ್ರ ಸಮಿತಿ ಶಾಸಕ ಪೈಲಟ್ ರೋಹಿತ್ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದು, ಬಿಜೆಪಿಗೆ ಸೇರಿದ ರಾಮಚಂದ್ರ ಭಾರತಿ ಮತ್ತು ನಂದಕುಮಾರ್ ತಮ್ಮನ್ನು ಭೇಟಿ ಮಾಡಿ ಬಿಜೆಪಿ ಸೇರಲು 100 ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು. ಬಿಜೆಪಿ ಸೇರದಿದ್ದರೇ, ಕೇಂದ್ರೀಯ ತನಿಖಾ ದಳದಂತಹ ಕೇಂದ್ರೀಯ ಸಂಸ್ಥೆಗಳ ಮೂಲಕ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಅವರು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.