ಲಾಕ್ಡೌನ್ ಮಾಡಿಯೂ ಸೋತದ್ದು ಭಾರತ ಮಾತ್ರ ಎನಿಸುತ್ತದೆ: ಚಿದಂಬರಂ
ನವದೆಹಲಿ, ಸೆಪ್ಟೆಂಬರ್ 5: ದೇಶದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ನ ಹಿರಿಯ ಮುಖಂಡ ಪಿ. ಚಿದಂಬರಂ, ಲಾಕ್ಡೌನ್ ಕಾರ್ಯತಂತ್ರವನ್ನು ಅನುಸರಿಸಿದ ಬಳಿಕವೂ ಅದರ ಪ್ರಯೋಜನವನ್ನು ಪಡೆಯದ ಏಕೈಕ ದೇಶವೆಂದರೆ ಅದು ಭಾರತ ಮಾತ್ರ ಎನಿಸುತ್ತದೆ ಎಂದು ಟೀಕಿಸಿದ್ದಾರೆ.
Recommended Video
ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತವು 65 ಲಕ್ಷ ಕೋವಿಡ್ 19 ಪ್ರಕರಣಗಳನ್ನು ಹೊಂದಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 40 ಲಕ್ಷ ದಾಟಿದ ಹಿನ್ನೆಲೆಯಲ್ಲಿ ಚಿದಂಬರಂ ಅವರು ಸರ್ಕಾರದ ವಿರುದ್ಧ ಈ ಟೀಕಾಪ್ರಹಾರ ನಡೆಸಿದ್ದಾರೆ.
'ಸೆಪ್ಟೆಂಬರ್ 30ರ ವೇಳೆಗೆ ದೇಶದಲ್ಲಿನ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 55 ಲಕ್ಷ ತಲುಪುತ್ತದೆ ಎಂದು ನಾನು ಭವಿಷ್ಯ ನುಡಿದಿದ್ದೆ. ಆದರೆ ಭಾರತವು ಆ ಸಂಖ್ಯೆಯನ್ನು ಸೆ. 20ರ ವೇಳೆಗೇ ತಲುಪಲಿದೆ. ಸೆಪ್ಟೆಂಬರ್ ಅಂತ್ಯದ ಹೊತ್ತಿಗೆ ಅದು 65 ಲಕ್ಷವನ್ನು ಮುಟ್ಟುಬಹುದು' ಎಂದು ಚಿದಂಬರಂ ಹೇಳಿದ್ದಾರೆ.

'ಲಾಕ್ಡೌನ್ ಕಾರ್ಯತಂತ್ರದ ಪ್ರಯೋಜನವನ್ನು ಪಡೆದುಕೊಳ್ಳದ ಒಂದೇ ಒಂದು ದೇಶವೆಂದರೆ ಪ್ರಯಶಃ ಭಾರತ ಮಾತ್ರ' ಎಂದು ಅವರು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನಾವು ಕೊರೊನಾ ವೈರಸ್ಅನ್ನು 21 ದಿನಗಳಲ್ಲಿ ಸೋಲಿಸುತ್ತೇವೆ ಎಂದಿದ್ದರು. ಆದರೆ ಇತರೆ ದೇಶಗಳು ಅದರಲ್ಲಿ ಯಶಸ್ವಿಯಾಗಿರುವಂತೆ ಕಾಣಿಸುತ್ತಿರುವಾಗ ಭಾರತ ಏಕೆ ವಿಫಲವಾಗಿದೆ ಎನ್ನುವುದನ್ನು ಪ್ರಧಾನಿ ವಿವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಅವರು ಹಣಕಾಸು ಸಚಿವಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2020-21ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಹಿಂದೆಂದೂ ಕಾಣದ ನಕಾರಾತ್ಮಕ ಬೆಳವಣಿಗೆ ಉಂಟಾಗಿರುವುದಕ್ಕೆ ಒಂದೇ ಒಂದು ಪದವನ್ನೂ ಆಡಿಲ್ಲ ಎಂದು ಕಿಡಿಕಾರಿದ್ದಾರೆ.












Click it and Unblock the Notifications