ರಾಯ್ ಬರೇಲಿ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ, ಎಂಟು ಸಾವು
ರಾಯ್ ಬರೇಲಿ (ಉತ್ತರ ಪ್ರದೇಶ), ನವೆಂಬರ್ 1 : ರಾಯ್ ಬರೇಲಿಯಲ್ಲಿರುವ ಎನ್ ಟಿಪಿಸಿ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದರಿಂದ 8 ಜನ ಅಸುನೀಗಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಉಂಚಹಾರ್ ನಲ್ಲಿರುವ 30 ವರ್ಷ ಹಳೆಯದಾದ, ರಾಜ್ಯ ಸರಕಾರದ ಅಧೀನದಲ್ಲಿರುವ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಪೈಪ್ ಸ್ಫೋಟಗೊಂಡಿದೆ. ಅಧಿಕಾರಿಗಳ ಪ್ರಕಾರ, ಸತ್ತವರ ಮತ್ತು ಗಾಯಗೊಂಡವರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.
ಗಾಯಗೊಂಡವರನ್ನು ಎನ್ ಟಿಪಿಸಿ ಕ್ಯಾಂಪಸ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ಲಖನೌಗೆ ಕರತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟಗೊಂಡ ನಂತರ ಸ್ಥಾವರವನ್ನು ಮುಚ್ಚಲಾಗಿದೆ.
ಸ್ಥಾವರದಲ್ಲಿ 5 ವಿದ್ಯುತ್ ಉತ್ಪಾದನಾ ಘಟಕಗಳಿದ್ದು, ಪ್ರತಿ ಘಟಕಗಳು 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ 6ನೇ ಘಟಕವನ್ನು ಇದೇ ವರ್ಷ ಆರಂಭಿಸಲಾಗಿತ್ತು. ಈ ಹೊಸ ಘಟಕದಲ್ಲಿಯೇ ಸ್ಫೋಟ ಸಂಭವಿಸಿದೆ.
ಸದ್ಯಕ್ಕೆ ಮಾರಿಷಸ್ ಪ್ರವಾಸದಲ್ಲಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸತ್ತವರ ಕುಟುಂಬಕ್ಕೆ 2 ಲಕ್ಷ ರುಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರುಪಾಯಿ ಪರಿಹಾರ ಘೋಷಿಸಿದ್ದಾರೆ.