ರೈಲು ಆಹಾರದ ಬಗ್ಗೆ ದೂರು ನೀಡಲು ಹೊಸ ವ್ಯವಸ್ಥೆ
ರೈಲಿನಲ್ಲಿ ಆಹಾರ ಪೂರೈಕೆ ಬಗ್ಗೆ ದೂರು ನೀಡಲು ಹೊಸ ವ್ಯವಸ್ಥೆ. ಇಲಾಖೆಯ ಟ್ಯಾಬ್ಲೆಟ್ ಮೂಲಕವೇ ದೂರು ನೀಡಲು ಹೊಸ ವ್ಯವಸ್ಥೆ.
Recommended Video
ನವದೆಹಲಿ, ಸೆಪ್ಟೆಂಬರ್ 16: ರೈಲಿನಲ್ಲಿ ಪೂರೈಕೆ ಮಾಡುವ ಆಹಾರದ ಗುಣಮಟ್ಟದ ಬಗ್ಗೆ ಅಥವಾ ಆ ಆಹಾರದ ಬಗೆಗಿನ ಯಾವುದೇ ದೂರುಗಳನ್ನು ಈಗ ಪ್ರಯಾಣಿಕರು ರೈಲ್ವೆ ಇಲಾಖೆಗೆ ನೇರವಾಗಿ ತಿಳಿಸಬಹುದು.
ರೈಲ್ವೆ ಯಲ್ಲಿ ನೀಡಿದ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆ
ಇದಕ್ಕಾಗಿ ಹೊಸ ವ್ಯವಸ್ಥೆಯೊಂದನ್ನು ರೈಲ್ವೆ ಇಲಾಖೆ ಸದ್ಯದಲ್ಲೇ ಜಾರಿಗೊಳಿಸಿದ್ದು, ಇದರ ಸಾಧಕ ಬಾಧಕಗಳನ್ನು ನೋಡಿದ ನಂತರ, ಇದನ್ನು ಎಲ್ಲಾ ಕಡೆಗೂ ಜಾರಿಗೊಳಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಐಆರ್ ಸಿಟಿಸಿ ವತಿಯಿಂದ ರೈಲುಗಳಲ್ಲಿ ನೀಡಲಾಗುವ ಆಹಾರದ ಬಗ್ಗೆ ಹಲವಾರು ದೂರುಗಳು ಕೇಳಿಬಂದಿದ್ದವು. ಪ್ರತಿಷ್ಠಿತ ಸಂಸ್ಥೆಗಳೇ ಈ ಆಹಾರ ಸರಬರಾಜು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರೂ ಆಹಾರದ ಗುಣಮಟ್ಟದ ಬಗ್ಗೆ, ಕೆಲವೊಮ್ಮೆ ಆಹಾರ ಕಲುಷಿತವಾಗಿದ್ದ ಬಗ್ಗೆ ಆಗಾಗ ದೂರುಗಳು ಕೇಳಿಬಂದಿದ್ದವು. ಇತ್ತೀಚೆಗೆ, ಇಂಥ ಆಹಾರ ಪಟ್ಟಣವೊಂದರಲ್ಲಿ ಸತ್ತ ಹಲ್ಲಿ ಕಾಣಿಸಿಕೊಂಡು ದೊಡ್ಡ ಸುದ್ದಿಯಾಗಿತ್ತು.
ರಾಜಧಾನಿ, ಶತಾಬ್ದಿ ರೈಲುಗಳಲ್ಲಿ ಆಹಾರ ತುಟ್ಟಿ?
ಈ ಎಲ್ಲಾ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದ ರೈಲ್ವೆ ಇಲಾಖೆ, ಇದರ ನಿರ್ಮೂಲನೆಗೆ ಒತ್ತು ಕೊಟ್ಟಿತ್ತು. ಅದರ ಫಲವಾಗಿ ಈಗ ಆಹಾರದ ಬಗೆಗಿನ ತೊಂದರೆಗಳನ್ನು ಸರಿಪಡಿಸಲು ಹೊಸ ವ್ಯವಸ್ಥೆಯ ಮೊರೆ ಹೋಗಿದೆ ರೈಲ್ವೆ ಇಲಾಖೆ.
ತಂತ್ರಾಂಶವೂ ಸಿದ್ಧ
ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಕರು ಬೋಗಿಯೊಳಗೆ ಹತ್ತಿದ ಕೂಡಲೇ ಅವರಿಗೊಂದು ಟ್ಯಾಬ್ ನೀಡಲಾಗುತ್ತದೆ. ಈ ಟ್ಯಾಬ್ ನಲ್ಲಿ ರೈಲ್ವೆ ಇಲಾಖೆಗೆ ರೈಲಿನಲ್ಲಿ ನೀಡುವ ಆಹಾರದ ದೂರುಗಳನ್ನು ದಾಖಲಿಸಲು ಅನುಕೂಲವಾಗುವಂಥ ತಂತ್ರಾಂಶಗಳನ್ನು ಅಳವಡಿಸಲಾಗಿರುತ್ತದೆ.
ಟ್ಯಾಬ್ ಮೂಲಕ ದೂರು ಸಲ್ಲಿಕೆ
ರೈಲು ಪ್ರಯಾಣಿಕರು ತಾವು ಪಡೆದ ಆಹಾರದ ಗುಣಮಟ್ಟ ಸರಿಯಿಲ್ಲವೆಂದಾದರೆ ಅಥವಾ ತಾವು ಕೇಳಿದ ಆಹಾರ ಬಿಟ್ಟು ಬೇರೊಂದು ಆಹಾರ ನೀಡಿದ್ದಾರೆಂದಾದರೆ ಅಥವಾ ಆಹಾರಕ್ಕೆ ಸಂಬಂಧಿಸಿದ ಬೇರೆ ಯಾವುದೇ ರೀತಿಯ ದೂರುಗಳಿದ್ದರೆ ಆ ಎಲ್ಲಾ ದೂರುಗಳನ್ನು ಟ್ಯಾಬ್ ಮೂಲಕ ರೈಲ್ವೆ ಇಲಾಖೆಗೆ ಕಳುಹಿಸಬಹುದು.
ಟಿಕೆಟ್ ನಂಬರ್ ನಮೂದಿಸಬೇಕು
ಹೀಗೆ ದೂರು ನೀಡುವ ಪ್ರಯಾಣಿಕರು, ತಮ್ಮ ಹೆಸರು, ದೂರವಾಣಿ ಸಂಖ್ಯೆ, ವಿಳಾಸ ಹಾಗೂ ತಾವು ಕೊಂಡಿರುವ ರೈಲು ಟಿಕೆಟ್ ನಂಬರ್ ಇತ್ಯಾದಿಗಳನ್ನು ದಾಖಲಿಸಿ ಆನಂತರ ದೂರು ನೀಡಬೇಕಾಗುತ್ತದೆ.
ತ್ವರಿತ ಸ್ಪಂದನೆ
ಹೀಗೆ, ಪ್ರಯಾಣಿಕರಿಂದ ಬಂದ ದೂರುಗಳನ್ನು ತಕ್ಷಣವೇ ಪರಿಗಣಿಸುವ ರೈಲ್ವೆ ಇಲಾಖೆಯ ಆಹಾರ ಪೂರೈಕೆ ವಿಭಾಗ, ತಕ್ಷಣವೇ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆಗಳು ಮತ್ತೆ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲೂ ಇದು ನೆರವಾಗುತ್ತದೆ ಎಂದು ಅದು ಹೇಳಿದೆ.
ಇಲ್ಲಿ ಯಶಸ್ಸಾದರೆ ಮಿಕ್ಕ ಕಡೆಗೂ ಜಾರಿ
ಈ ವ್ಯವಸ್ಥೆಯನ್ನು ತೇಜಸ್, ರಾಜಧಾನಿ, ಆಗಸ್ಟ್ ಕ್ರಾಂತಿ ಹಾಗೂ ಶತಾಬ್ದಿ ಎಕ್ಸ್ ಪ್ರೆಸ್ ರೈಲಿಗಳಲ್ಲಿ ಅಳವಡಿಸಲಾಗಿದೆ. ಸೆ. 16ರಿಂದಲೇ ಈ ಸೇವೆ ಜಾರಿಗೆ ಬಂದಿದೆ. ಇತ್ತೀಚೆಗೆ, ಅಹ್ಮದಾಬಾದ್-ದೆಹಲಿ ಎಕ್ಸ್ ಪ್ರೆಸ್ ರೈಲಿನಲ್ಲಿ ಇದರ ಪ್ರಯೋಗ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಇದನ್ನು ನಾಲ್ಕು ರೈಲುಗಳಿಗೆ ವಿಸ್ತರಿಸಲಾಗಿದೆ. ಇದೂ ಯಶಸ್ವಿಯಾದರೆ ದೇಶದ ಇತರ ರೈಲು ವ್ಯವಸ್ಥೆಯಲ್ಲೂ ಇದನ್ನು ಪರಿಚಯಿಸಲಾಗುವುದು ಎಂದು ಇಲಾಖೆ ತಿಳಿಸಿದೆ.