ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಬಿಜೆಪಿಯೇತರ ಸರ್ಕಾರ ರಚನೆ; ಖರ್ಗೆ
ಹೈದರಾಬಾದ್, ನ. 01: ಕೇಂದ್ರದಲ್ಲಿ ಯಾರಾದರೂ ಬಿಜೆಪಿಯೇತರ ಸರ್ಕಾರವನ್ನು ತರಬೇಕಾದರೆ, ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಬಿಜೆಪಿಯೇತರ ಸರ್ಕಾರವನ್ನು ರಚಿಸುವುದು ನಾವು ಮಾತ್ರ ಎಂದು ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೈದರಾಬಾದ್ನಲ್ಲಿ ಹೇಳಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರಿದ ನಂತರ ಮೊದಲ ಬಾರಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸುವ ಬಗ್ಗೆ ಮಾತನಾಡುವಾಗ ತೆಲಂಗಾಣದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ವಾಗ್ದಾಳಿ ನಡೆಸಿದರು.
"ನಾವು ಸಂಸತ್ತಿನಲ್ಲಿ ಯಾವುದೇ ಮಸೂದೆಯನ್ನು ವಿರೋಧಿಸಿದಾಗಲೆಲ್ಲಾ ಟಿಆರ್ಎಸ್ನವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದರು, ಆದರೆ ಈಗ ಅವರು ಬಿಜೆಪಿಯೇತರ ಸರ್ಕಾರವನ್ನು ತರುತ್ತೇವೆ ಎಂದು ಹೇಳುತ್ತಾರೆ. ಆದರೆ, ಯಾರಾದರೂ ಬಿಜೆಪಿಯೇತರ ಸರ್ಕಾರವನ್ನು ತರಬೇಕಾದರೆ ಅದನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ನಾವು ತರುತ್ತೇವೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

'ಮೋದಿಯವರು ಕೆಸಿಆರ್ಗೆ ದೂರವಾಣಿಯಲ್ಲಿ ಆದೇಶಿಸುತ್ತಾರೆ'
'ಟಿಆರ್ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದಾರೆ' ಎಂದು ರಾಹುಲ್ ಗಾಂಧಿ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ದೂರವಾಣಿ ಮೂಲಕ ಆದೇಶ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.
'ಸಂಸತ್ತಿನಲ್ಲಿ ಯಾವುದೇ ಮಸೂದೆ ಬಂದಾಗ ಟಿಆರ್ಎಸ್ ಬಿಜೆಪಿಯನ್ನು ಬೆಂಬಲಿಸುತ್ತದೆ ಮತ್ತು ಪ್ರತಿಪಕ್ಷಗಳ ಗಮನವನ್ನು ಬೇರೆಡೆ ಸೆಳೆಯುತ್ತದೆ. ಬಿಜೆಪಿ ಮತ್ತು ಟಿಆರ್ಎಸ್ ಒಟ್ಟಾಗಿ ಕೆಲಸ ಮಾಡುತ್ತಿವೆ. ನಿಮ್ಮ ಸಿಎಂ ಚುನಾವಣೆಗೂ ಮುನ್ನ ನಾಟಕ ಮಾಡುತ್ತಾರೆ. ಆದರೆ, ಅವರು ಪ್ರಧಾನಿ ಮೋದಿಯವರೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ಪ್ರಧಾನಿಯವರು ನಿಮ್ಮ ಸಿಎಂಗೆ ಫೋನ್ನಲ್ಲಿ ಆದೇಶ ನೀಡುತ್ತಾರೆ" ಎಂದು ರಾಹುಲ್ ಗಾಂಧಿ ಹೇಳಿದ್ದರು.

ರೈತರ ಕಷ್ಟಗಳಿಗೆ ಬಿಜೆಪಿ, ಟಿಆರ್ಎಸ್ ಸ್ಪಂದಿಸುವುದಿಲ್ಲ; ರಾಹುಲ್
"ಕರಾಳ ಕೃಷಿ ಕಾನೂನುಗಳನ್ನು ಒಳಗೊಂಡಂತೆ ಬಿಜೆಪಿ ಸಂಸತ್ತಿನಲ್ಲಿ ಯಾವುದೇ ಮಸೂದೆಯನ್ನು ತಂದಾಗಲು ಟಿಆರ್ಎಸ್ ಬಿಜೆಪಿಯನ್ನು ಬೆಂಬಲಿಸುತ್ತದೆ" ಎಂದು ರಾಹುಲ್ ಆರೋಪಿಸಿದ್ದರು.
"ತೆಲಂಗಾಣದ ರೈತರು ಎಷ್ಟೇ ಶ್ರಮ ಪಟ್ಟರೂ ತಮ್ಮ ಹೊಲಗಳಿಂದ ಯಾವುದೇ ಲಾಭ ಸಿಗುವುದಿಲ್ಲ, 24 ಗಂಟೆ ದುಡಿದರೂ ತಮ್ಮ ಭೂಮಿಯಿಂದ ದುಡಿಯಲು ಸಾಧ್ಯವಿಲ್ಲ" ಎನ್ನುತ್ತಾರೆ. ಈ ಬಿಜೆಪಿ ಮತ್ತು ಟಿಆರ್ಎಸ್ ರೈತರನ್ನು ಬೆಂಬಲಿಸುವುದಿಲ್ಲ. ಅವರು ರೈತರ ಸಾಲ ಮನ್ನಾ ಮಾಡುವುದಿಲ್ಲ, MSP (ಕನಿಷ್ಠ ಬೆಂಬಲ ಬೆಲೆ) ಖಾತ್ರಿಪಡಿಸುವುದಿಲ್ಲ. ಬದಲಿಗೆ, ಅವರು ಮೂರು ಕರಾಳ ಕೃಷಿ ಕಾನೂನುಗಳನ್ನು ಜಾರಿಗೆ ತಂದರು. ರೈತರಿಂದ ಅವರ ಬಳಿ ಇರುವುದೆಲ್ಲವನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು" ಎಂದು ಕಿಡಿಕಾರಿದ್ದರು.

ರಾಹುಲ್ ಜೊತೆಗೆ ಹೆಜ್ಜೆ ಹಾಕಿದ ಮಲ್ಲಿಕಾರ್ಜುನ ಖರ್ಗೆ
ಮಂಗಳವಾರ ಹೈದರಾಬಾದ್ ತಲುಪಿದ ಮಲ್ಲಿಕಾರ್ಜುನ ಖರ್ಗೆ ನೆಕ್ಲೇಸ್ ರಸ್ತೆಯ ಇಂದಿರಾಗಾಂಧಿ ಪ್ರತಿಮೆ ಬಳಿ ನಡೆದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸಾಥ್ ನೀಡಿದರು.
ರಾಹುಲ್ ಗಾಂಧಿ ಅವರು ಚಾರ್ಮಿನಾರ್ ಬಳಿ ರಾಷ್ಟ್ರೀಯ ಧ್ವಜಾರೋಹಣ ಮಾಡಿದ ನಂತರ, ಇತರ ನಾಯಕರು, ಪಕ್ಷದ ಕಾರ್ಯಕರ್ತರೊಂದಿಗೆ ನೆಕ್ಲೇಸ್ ರಸ್ತೆಯಲ್ಲಿ ಪಾದಯಾತ್ರೆ ನಡೆಸಿದರು. ಅಲ್ಲೇ ಪಕ್ಷದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೇದಿಕೆಯಲ್ಲಿ ಸೇರಿಕೊಂಡಿದ್ದಾರೆ.

"ಅಚಲ ವಾತ್ಸಲ್ಯ, ಪರಸ್ಪರ ಗೌರವ, ಇದು ಕಾಂಗ್ರೆಸ್ನ ಲಕ್ಷಣ"
ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೇದಿಕೆಗೆ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬೆಂಬಲಿಗರು ಹರ್ಷೋದ್ಗಾರ ಮಾಡಿದರು. ಈ ವೇಳೆ ಉಭಯ ನಾಯಕರು ಪರಸ್ಪರ ಅಪ್ಪಿಕೊಂಡರು.
ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, "ಅಚಲ ವಾತ್ಸಲ್ಯ, ಪರಸ್ಪರ ಗೌರವ, ಇದು ಕಾಂಗ್ರೆಸ್ನ ಲಕ್ಷಣ" ಎಂದು ಶೀರ್ಷಿಕೆ ನೀಡಿದೆ.












Click it and Unblock the Notifications