Breaking; ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲು ವಿರೋಧವೇ ಇಲ್ಲ!
ನವದೆಹಲಿ, ಏಪ್ರಿಲ್ 22; ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಪಕ್ಷದ ಹಲವಾರು ಹಿರಿಯ ನಾಯಕರು ಈ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಶುಕ್ರವಾರ ರಾಷ್ಟ್ರೀಯ ವಾಹಿನಿಯೊಂದರ ಜೊತೆ ದಿಗ್ವಿಜಯ್ ಸಿಂಗ್ ಈ ಕುರಿತು ಮಾತನಾಡಿದರು, "ಅವರ ಯೋಜನೆಗಳು, ವಿವರಣೆಗಳು ಉತ್ತಮವಾಗಿವೆ. ಅವರು ಪಕ್ಷ ಸೇರಲು ಪಕ್ಷದ ವಲಯದಲ್ಲಿ ಯಾರ ವಿರೋಧವೂ ಇಲ್ಲ" ಎಂದು ಸ್ಪಷ್ಟಪಡಿಸಿದರು.
"ಅವರು ಅಂಕಿ ಅಂಶಗಳ ಮನುಷ್ಯ. ಕೆಲವು ವಿಚಾರಗಳು ಹೊಸದೇನಲ್ಲ. ನೀವು ವಿಚಾರವನ್ನು ಹೇಗೆ ಪ್ರಸ್ತಾಪಿಸುತ್ತೀರಿ ಮತ್ತು ಜನರು ಅದನ್ನು ಹೇಗೆ ಸ್ವೀಕಾರ ಮಾಡುತ್ತಾರೆ ಎಂಬುದು ಮುಖ್ಯವಾಗುತ್ತದೆ" ಎಂದು ಹೇಳಿದರು.

"ನಾನು ಪ್ರಶಾಂತ್ ಕಿಶೋರ್ ಅವರನ್ನು ಹತ್ತಿರದಿಂದ ಬಲ್ಲೆ. ಅವರ ಜೊತೆ ಹಲವಾರು ವಿಚಾರಗಳ ಕುರಿತು ಚರ್ಚೆ ಮಾಡಿದ್ದೇನೆ. ಅವರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗಿ ಗುರುತಿಸಿಕೊಂಡಿದ್ದಾರೆ. ಈಗ ಕಾಂಗ್ರೆಸ್ ಪರವಾಗಿ ಮಂಡಿಸಿರುವ ವಿಚಾರಗಳು ಉತ್ತಮವಾಗಿವೆ" ಎಂದು ದಿಗ್ವಿಜಯ್ ಸಿಂಗ್ ತಿಳಿಸಿದರು.
"ಪ್ರಶಾಂತ್ ಕಿಶೋರ್ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ, ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪುರಾತನವಾದ ಅತಿ ದೊಡ್ಡ ಪಕ್ಷವಾಗಿದೆ. ನಾವು ಎಲ್ಲಾ ರೀತಿಯ ಚರ್ಚೆಗೆ ಸಿದ್ಧವಾಗಿದ್ದೇವೆ" ಎಂದರು.
"ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಜೊತೆ ಸಭೆ ನಡೆಸಿದಾಗ ಅವರು ಪಕ್ಷದ ವಿಚಾರದಲ್ಲಿ ಹಲವಾರು ಪ್ರಸ್ತಾವನೆಗಳನ್ನು ಮಂಡಿಸಿದ್ದಾರೆ. 2024ರ ಚುನಾವಣೆಗೆ ಕಾರ್ಯತಂತ್ರವನ್ನು ವಿವರಿಸಿದ್ದಾರೆ" ಎಂದು ದಿಗ್ವಿಜಯ್ ಸಿಂಗ್ ಹೇಳಿದರು.












Click it and Unblock the Notifications