ಸಂಜೆ ಜೆಡಿಯು ಶಾಸಕಾಂಗ ಸಭೆ, ತೇಜಸ್ವಿ ಯಾದವ್ ಭವಿಷ್ಯ ನಿರ್ಧಾರ
ಪಾಟ್ನಾ, ಜುಲೈ 16: 'ಬಿಹಾರದ ಜೆಡಿಯು-ಆರ್.ಜೆ.ಡಿ ಮೈತ್ರಿಯ ಭವಿಷ್ಯ ಏನಾಗಲಿದೆ? ಮಹತ್ವದ ಈ ಪ್ರಶ್ನೆಗೆ ಇಂದು ಸಂಜೆ ಉತ್ತರ ಸಿಗಲಿದೆ.
ಭ್ರಷ್ಟಾಚಾರದ ಆರೋಪ ಹೊತ್ತ ಲಾಲು ಪ್ರಸಾದ್ ಯಾದವ್ ಪುತ್ರ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ವಿವರಣೆ ನೀಡುವಂತೆ ಅಥವಾ ರಾಜೀನಾಮೆ ನೀಡುವಂತೆ ಆಡಳಿತರೂಢ ಜೆಡಿಯು ನೀಡಿದ್ದ ಗಡುವು ಶನಿವಾರ ಸಂಜೆಗೆ ಮುಗಿದಿದೆ.
ತೇಜಸ್ವಿ ಯಾದವ್ ಗೆ ಸಂಪುಟದಿಂದ ಕೊಕ್: ಲಾಲೂಗೆ ನಿತೀಶ್ ಗಡುವು
ಈ ಅವಧಿಯಲ್ಲಿ ತೇಜಸ್ವಿ ಯಾದವ್ ತಮ್ಮ ಮೇಲಿರುವ ಭ್ರಷ್ಟಾಚಾರ ಆರೋಪಕ್ಕೆ ಉತ್ತರವನ್ನೂ ನೀಡಿಲ್ಲ. ಅತ್ತ ರಾಜೀನಾಮೆಯನ್ನೂ ಕೊಟ್ಟಿಲ್ಲ.
ಕಾಂಗ್ರೆಸ್ ಕತ್ತಲಿಗೆ ನಿತಿಶ್ ಬೆಳಕು ಎಂದ ರಾಮಚಂದ್ರ ಗುಹಾ
ಈ ಹಿನ್ನಲೆಯಲ್ಲಿ ಇಂದು ಸಂಜೆ ನಡೆಯಲಿರುವ ಜೆಡಿಯು ಶಾಸಕಾಂಗ ಪಕ್ಷದ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಭ್ರಷ್ಟಾಚಾರದ ಜತೆ ರಾಜಿಯಿಲ್ಲ
ನಾಳೆ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಚರ್ಚಿಸಲು ಈ ಶಾಸಕಾಂಗ ಸಭೆ ಕರೆಯಲಾಗಿದೆ. ಆದರೆ ಇದೇ ಸಭೆಯನ್ನು ಬಳಸಿಕೊಂಡು ನಿತೀಶ್ ರಾಜಕೀಯ ತಂತ್ರ ರೂಪಿಸುವ ಸಾಧ್ಯತೆ ಇದೆ.
ಶನಿವಾರವಷ್ಟೇ ಹೇಳಿಕೆ ನೀಡಿರುವ ಜೆಡಿಯು ವಕ್ತಾರ ಸಂಜಯ್ ಸಿಂಗ್, 'ನಮ್ಮ ನಾಯಕ ನಿತೀಶ್ ಕುಮಾರ್ ಭ್ರಷ್ಟಾಚಾರದ ಜತೆ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವುದು ಗೋಡೆ ಮೇಲಿನ ಬರಹದಷ್ಟೇ ಸ್ಪಷ್ಟ . ಇದನ್ನು ಲಾಲು ಪ್ರಸಾದ್ ಯಾದವ್ ನೆನಪಿನಲ್ಲಿಟ್ಟುಕೊಳ್ಳಬೇಕು' ಎಂದು ಹೇಳಿದ್ದಾರೆ.
ಜೆಡಿಯು ಕಡೆಯಿಂಬ ಬರುತ್ತಿರುವ ಈ ರೀತಿಯ ಹೇಳಿಕೆಗಳು ಬಿಕ್ಕಟ್ಟು ಶಮನದ ಸಾಧ್ಯತೆಯನ್ನು ಕಡಿಮೆಗೊಳಿಸಿವೆ.
ಜೆಡಿಯು ನಾಯಕರಿಂದ ತೇಜಸ್ವಿಗೆ ಬೆಂಬಲ
ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆಗೆ ಒತ್ತಾಯಿಸಬಾರದು ಎಂದು ನಿತೀಶ್ ಕುಮಾರ್ ಮೇಲೆ ಅವರ ಪಕ್ಷದ ನಾಯಕರೇ ಒತ್ತಡ ತರುತ್ತಿದ್ದಾರೆ.
ಇದರ ಜತೆಗೆ 'ತೇಜಸ್ವಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ ಎಂಬ ಒಂದೇ ಕಾರಣಕ್ಕೆ ಅವರ ರಾಜೀನಾಮೆಗೆ ಒತ್ತಾಯಿಸುವುದು ಸರಿಯಾದ ನಿರ್ಧಾರವಲ್ಲ' ಜೆಡಿಯು ಅಧ್ಯಕ್ಷ ಶರದ್ ಯಾದವ್ ಹೇಳಿದ್ದಾರೆ. ಹೀಗಾಗಿ ಬಿಹಾರದ ಬೆಳವಣಿಗೆ ಕುತೂಹಲ ಹುಟ್ಟಿಸಿದೆ. ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಭಿನ್ನ ಹೇಳಿಕೆ ನೀಡುತ್ತಿರುವುದು ಗಮನ ಸೆಳೆದಿದೆ.
ಲಾಲು ಗರಂ
ಲಾಲು ಪ್ರಸಾದ್ ಯಾದವ್ ರಾಂಚಿಯಿಂದ ಮರಳಿದ ನಂತರ ಪಕ್ಷದ ಮುಖಂಡರ ಜತೆ ಶುಕ್ರವಾರ ತುರ್ತು ಸಭೆ ನಡೆಸಿದರು. ಸಭೆಯ ನಂತರ 'ಎಫ್ಐಆರ್ ದಾಖಲಾಗಿದೆ ಎಂದ ಮಾತ್ರಕ್ಕೆ ತಮ್ಮ ಪುತ್ರ ತೇಜಸ್ವಿ ರಾಜೀನಾಮೆ ನೀಡುವ ಅಗತ್ಯವಿಲ್ಲ' ಎಂದು ತಮ್ಮ ನಿಲುವನ್ನು ಅವರು ಸ್ಪಷ್ಟಪಡಿಸಿದ್ದಾರೆ.
'ಒತ್ತಡಕ್ಕೆ ಮಣಿದು ತೇಜಸ್ವಿ ಯಾದವ್ ರಾಜೀನಾಮೆ ಕೊಡಬಾರದು ಎಂಬ ಪಕ್ಷದ ಶಾಸಕಾಂಗ ಸಭೆಯ ನಿರ್ಧಾರಕ್ಕೆ ಬದ್ಧ' ಎಂದು ಅವರು ಗುಡುಗಿದ್ದಾರೆ.
ವಿವರಣೆ ನೀಡಿ
"ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಆದಾಯದ ಮೂಲ ಯಾವುದು? ಅವರ ವಿರುದ್ಧ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಹೊಂದಿದ ಆಪಾದನೆ ಬಂದಿದ್ದಾದರೂ ಹೇಗೆ? ಎಂಬುದರ ಬಗ್ಗೆ ವಿವಿರಣೆ ನೀಡಿ," ಎಂದು ಜೆಡಿಯು ಲಾಲೂರನ್ನು ಒತ್ತಾಯಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಜೆಡಿಯು ವಕ್ತಾರ ನೀರಜ್ ಕುಮಾರ್ 'ನೀವು (ತೇಜಸ್ವಿ) ಏನೂ ತಪ್ಪು ಮಾಡದಿದ್ದರೆ ಆದಾಯದ ಮೂಲದ ಸಂಪೂರ್ಣ ವಿವರ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಿ. ಇದೊಂದು ದೊಡ್ಡ ವಿಚಾರವೇ ಅಲ್ಲ," ಎಂದಿದ್ದಾರೆ.
ನಿತೀಸ್-ತೇಜಸ್ವಿ ದೂರ ದೂರ
ಶನಿವಾರ ಡಿಜಿಟಲ್ ತಂತ್ರಜ್ಞಾನ ಬಳಕೆಗೆ ಬಿಹಾರ ಸರ್ಕಾರ ಆರಂಭಿಸಿರುವ 'ಕುಶಲ ಯುವ ಕಾರ್ಯಕ್ರಮ'ದ ಮೊದಲ ವಾರ್ಷಿಕೋತ್ಸವ ಕ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹಾಜರಾಗಿರಲಿಲ್ಲ. ವೇದಿಕೆ ಮೇಲೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತ್ರವೇ ಇದ್ದರು.
ಮುಖ್ಯ ಅತಿಥಿಯಾಗಿ ತೇಜಸ್ವಿ ಬರಬೇಕಿತ್ತಾದರೂ ಅವರು ಕಾರ್ಯಕ್ರಮದಿಂದ ದೂರವೇ ಉಳಿದರು.
ಅಖಾಡಕ್ಕಿಳಿದ ಸೋನಿಯಾ
ಜೆಡಿಯು ಮತ್ತು ಆರ್ಜೆಡಿ ನಡುವಿನ ಭಿಕ್ಕಟ್ಟು ಶಮನಕ್ಕೆ ಸೋನಿಯಾ ಗಾಂಧಿ ಮುಂದಾಗಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಸೋನಿಯಾ ನಿತೀಶ್ ಮತ್ತು ಲಾಲು ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಗೋಪಾಲ್ ಕೃಷ್ಣ ಗಾಂಧಿಯವರನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ ಹೇಳಲು ಸೋನಿಯಾ ನಿತೀಶ್ಗೆ ಕರೆ ಮಾಡಿದ್ದರು. ಈ ವೇಳೆ ಮಾತುಕತೆ ನಡೆಸಿದ್ದಾರೆ.
ಶರದ್ ಯಾದವ್-ಸೋನಿಯಾ ಭೇಟಿ
ಇನ್ನು ಶನಿವಾರ ಜೆಡಿಯು ಅಧ್ಯಕ್ಷ ಶರದ್ ಯಾದವ್ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಬಿಹಾರ ರಾಜಕೀಯ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಸೋನಿಯಾ ಮತ್ತು ಶರದ್ ಮಾತುಕತೆ ನಡೆಸಿದ್ದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.
ಇನ್ನುಬಿಹಾರ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ಚೌಧರಿ ಕೂಡ ಪ್ರತ್ಯೇಕವಾಗಿ ನಿತೀಶ್ ಮತ್ತು ಲಾಲುರನ್ನು ಭೇಟಿಯಾಗಿ ಬಿಕ್ಕಟ್ಟು ಶಮನಕ್ಕೆ ಯತ್ನಿಸಿದ್ದಾರೆ.
ಜೆಡಿಯು ಒಡೆಯುವ ತಂತ್ರ?
ಒಂದೊಮ್ಮೆ ನಿತೀಶ್ ಕುಮಾರ್ ತಮ್ಮ ನಿಲುವು ಬದಲಿಸದೇ ಇದ್ದರೆ ಲಾಲು ಪ್ರಸಾದ್ ಯಾದವ್ ಜೆಡಿಯು ಒಡೆಯುವ ತಂತ್ರಕ್ಕೂ ಮುಂದಾಗಬಹುದು ಎಂದು ಬಿಜೆಪಿ ಮಿತ್ರ ಪಕ್ಷ ಎಲ್ಜೆಪಿಯ ಮುಖಂಡ ರಾಂ ವಿಲಾಸ್ ಪಾಸ್ವಾನ್ ಸುಳಿವು ನೀಡಿದ್ದಾರೆ.
ಹೀಗೆ ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು ಜೋರಾಗಿದೆ. ಮುಂದೆನಾಗುತ್ತದೋ ಕಾದು ನೋಡಬೇಕು.