ನವದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ ನಿತೀಶ್
ನವದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ ನಿತೀಶ್
ನವದೆಹಲಿ, ಜುಲೈ 22: ರಾಷ್ಟ್ರಪತಿ ಪದವಿಯಿಂದ ನಿರ್ಗಮನದ ಹಂತದಲ್ಲಿರುವ ಪ್ರಣಬ್ ಮುಖರ್ಜಿಯವರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಜುಲೈ 22ರಂದು ಏರ್ಪಡಿಸಿರುವ ರಾತ್ರಿಯೂಟದ ಔತಣಕೂಟದಲ್ಲಿ ಭಾಗಿಯಾಗಲು ನವದೆಹಲಿಗೆ ಆಗಮಿಸಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ.
ಮಧ್ಯಾಹ್ನದ ವೇಳೆ, ದೆಹಲಿಯ ತುಘಲಕ್ ಲೇನ್ ನಲ್ಲಿರುವ ರಾಹುಲ್ ಗಾಂಧಿ ನಿವಾಸಕ್ಕೆ ಆಗಮಿಸಿದ ನಿತೀಶ್ ಕುಮಾರ್, ಅಲ್ಲಿ ಕೆಲ ಹೊತ್ತಿದ್ದು ಸಮಕಾಲೀನ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಇದೇ ವೇಳೆ, ರಾಷ್ಟ್ರಪತಿ ಚುನಾವಣೆ ವೇಳೆ ತಮ್ಮ ಹಾಗೂ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಪಕ್ಷದ ಧುರೀಣ ಲಾಲು ಪ್ರಸಾದ್ ಯಾದವ್ ನಡುವೆ ಭಿನ್ನಮತ ತಲೆದೋರಿದ ವಿಚಾರವನ್ನು ರಾಹುಲ್ ಜತೆಗೆ ನಿತೀಶ್ ಚರ್ಚಿಸಿದರು.
ಇತ್ತೀಚೆಗೆ, ಲಾಲು ಕುಟುಂಬದ ಮೇಲೆ ಭ್ರಷ್ಟಾಚಾರ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಲಾಲು ಪುತ್ರ ತೇಜಸ್ವಿ ಯಾದವ್ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲು ತಾವು ನಿರ್ಧರಿಸಿದ್ದು ಲಾಲು ಹಾಗೂ ತಮ್ಮ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಲು ಕಾರಣವಾಗಿರುವ ವಿಚಾರಗಳು ನಿತೀಶ್ - ರಾಹುಲ್ ಭೇಟಿ ವೇಳೆ ಚರ್ಚೆಗೊಳಗಾದವು ಎಂದು ಮೂಲಗಳು ತಿಳಿಸಿವೆ.
ಲಾಲೂ ಜತೆಗಿನ ಭಿನ್ನಮತ, ನಿತೀಶ್ ಅವರ ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ನಿತೀಶ್ ಹಾಗೂ ರಾಹುಲ್ ಭೇಟಿ ಕುತೂಹಲ ಕೆರಳಿಸಿದೆ.












Click it and Unblock the Notifications