ನಿತ್ಯಾನಂದ ಸ್ವಾಮಿಯ 'ಕೈಲಾಸ'ದ ಹಿಂದೆ ಇರುವವರು ಯಾರು?: ಅಚ್ಚರಿ ಮೂಡಿಸುವ ಸಂಗತಿಗಳು
ನವದೆಹಲಿ, ಆಗಸ್ಟ್ 21: ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ನಿತ್ಯಾನಂದ ಸ್ವಾಮಿ ದೇಶದಿಂದ ಪರಾರಿಯಾಗಿ ತನ್ನದೇ 'ಕೈಲಾಸ' ಎಂಬ ದೇಶ ಮಾಡಿಕೊಂಡು ಅದಕ್ಕೆ 'ಜಗತ್ತಿನ ಅತಿ ದೊಡ್ಡ ಡಿಜಿಟಲ್ ಹಿಂದೂ ದೇಶ' ಎಂಬ ಹೆಸರಿಟ್ಟಿರುವುದು ಗೊತ್ತೇ ಇದೆ. ಕೆಲವು ದಿನಗಳ ಹಿಂದಷ್ಟೇ ನಿತ್ಯಾನಂದ ತನ್ನ ದೇಶಕ್ಕೆ ರಿಸರ್ವ್ ಬ್ಯಾಂಕ್ ಮತ್ತು ಕರೆನ್ಸಿ ಆರಂಭಿಸುತ್ತಿರುವುದಾಗಿ ತಿಳಿಸಿದ್ದರು.
ಅತ್ಯಾಚಾರ, ಅಪಹರಣ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ನಿತ್ಯಾನಂದ ದೇಶದಿಂದ ಹೊರಹೋಗಿದ್ದು ಹೇಗೆ? ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಿ ಈಕ್ವೆಡಾರ್ನಲ್ಲಿ ದ್ವೀಪವೊಂದನ್ನು ಖರೀದಿಸಿ ಅದಕ್ಕೆ ಕೈಲಾಸ ದೇಶ ಎಂಬ ಹೆಸರಿಟ್ಟಿದ್ದು ಹೇಗೆ ಮುಂತಾದ ಅನೇಕ ಪ್ರಶ್ನೆಗಳು ಅನೇಕರನ್ನು ಕಾಡುತ್ತಿವೆ. ಇಷ್ಟೆಲ್ಲ ಚಟುವಟಿಕೆ ನಡೆಸುತ್ತಿರುವ ನಿತ್ಯಾನಂದನಿಗೆ ಪ್ರಭಾವಿಗಳ ಬೆಂಬಲ ಇರಲೇಬೇಕು ಎಂಬ ತರ್ಕವಿದೆ.
ನಿತ್ಯಾನಂದ ಪ್ರತಿಪಾದಿಸಿರುವ ಕೈಲಾಸ ಸಾಮ್ರಾಜ್ಯವು ನೈಜ ಜಗತ್ತಿನಲ್ಲಿ ನೆಲೆಯೂರಿರುವ ಅನೇಕ ಖಾಸಗಿ ಕಂಪೆನಿಗಳು ಮತ್ತು ಲಾಭ ರಹಿತ ಸಂಸ್ಥೆಗಳ (ಎನ್ಜಿಒ) ಬೃಹತ್ ಜಾಲದ ಬೆಂಬಲ ಹೊಂದಿದೆ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ. ಮುಂದೆ ಓದಿ...

ಕೈಲಾಸಕ್ಕೆ ನೆರವು ನೀಡುತ್ತಿರುವವರು
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯೊಂದಿಗೆ ನಂಟು ಹೊಂದಿರುವ ಅಂತಹ 13 ಸಂಸ್ಥೆಗಳ ವಿವರಗಳನ್ನು ಕಲೆ ಹಾಕಿರುವುದಾಗಿ 'ಇಂಡಿಯಾ ಟುಡೆ' ತಿಳಿಸಿದೆ. ಸಮಾಜೋ-ಆರ್ಥಿಕ ಗುಂಪುಗಳ ತಂಡಗಳು ನಿತ್ಯಾನಂದ ಹೇಳಿಕೊಳ್ಳುತ್ತಿರುವ ಕೈಲಾಸ ಸೆಮಿ ಡಿಜಿಟಲ್ ದೇಶಕ್ಕೆ ಬುನಾದಿಯನ್ನು ಮತ್ತು ಬ್ಯಾಂಕ್ ಹಾಗೂ ಶಿಕ್ಷಣ ಸಂಸ್ಥೆಗಳಂತಹ ಅಭಿವೃದ್ಧಿ ಚಟುವಟಿಕೆಗಳಿಗೆ ಬೆಂಬಲವನ್ನು ನೀಡುತ್ತಿವೆ ಎನ್ನಲಾಗಿದೆ.

ಎನ್ಜಿಒಗಳ ಮೂಲಕ ನೆರವು
ನಿಧಿ ಸಂಗ್ರಹಣೆಯ ವ್ಯವಸ್ಥೆಗೆ ಎನ್ಜಿಒಗಳ ಜಾಲವನ್ನು ಹೇಗೆ ಬಳಸಿಕೊಳ್ಳಲು ಬಯಸಿದ್ದೇನೆ ಎಂದು ನಿತ್ಯಾನಂದ ವಿವರಿಸಿದ್ದರು. ಜಗತ್ತಿನ ಎಲ್ಲೆಡೆಗಳಿಂದ ಜನರು ದೇಣಿಗೆ ನೀಡುತ್ತಿದ್ದಾರೆ. ಸ್ಥಳೀಯ ಸರ್ಕಾರಗಳ ಜತೆಗೆ ಕೆಲಸ ಮಾಡುತ್ತಿದ್ದು, ಯಾವುದೇ ದೇಶದ ಎನ್ಜಿಒ ನೀಡುವ ದೇಣಿಗೆಯು ಆ ದೇಶದ ಕಾನೂನನ್ನು ಪಾಲಿಸಬೇಕಾಗುತ್ತದೆ. ಸಂಘಟಿತ ಮಾರ್ಗದಲ್ಲಿ ಆ ದೇಶಗಳೊಂದಿಗೆ ವ್ಯವಹರಿಸುತ್ತಿದ್ದು, ಇಡೀ ಸಂರಚನೆ ಸಂಪೂರ್ಣ ಸಿದ್ಧವಿದೆ ಎಂದು ಹೇಳಿಕೊಂಡಿದ್ದರು.

ಹಿಂದೂಗಳಿಗಾಗಿ ಕಚೇರಿ
ನಿತ್ಯಾನಂದ ಹೇಳಿರುವ ಈ ಎನ್ಜಿಒ ಜಾಲಗಳು ಅಮೆರಿಕ, ಬ್ರಿಟನ್ ಮತ್ತು ಏಷ್ಯಾದ ದೇಶಗಳ ಮೂರು ಖಂಡಗಳಲ್ಲಿ ವ್ಯಾಪಿಸಿವೆ. ಅಮೆರಿಕದ ಅಧಿಕಾರಿಗಳಿಗೆ 'ಕೈಲಾಸ ದೇಶ'ದಿಂದ ಸಲ್ಲಿಸಿರುವ ಮಾಹಿತಿಗಳಲ್ಲಿ ಅಧಿಕೃತ ಹಿಂದುತ್ವ ಪಾಲನೆ ಮಾಡಲು ಸೂಕ್ತವಾದ ಜಾಗವೇ ಇಲ್ಲದಂತಾಗಿದೆ. ಹೀಗಾಗಿ ಹಿಂದೂಗಳಿಗಾಗಿ ರಾಯಭಾರ ಕಚೇರಿ ಸೃಷ್ಟಿಸುವ ಬಯಕೆ ಹೊಂದಿರುವುದಾಗಿ ಹೇಳಿಕೊಂಡಿದ್ದರು.

ಹವಾಯಿಯಲ್ಲಿ ಲಾಭದಾಯಕ ಸಂಸ್ಥೆ
ನಿತ್ಯಾನಂದ ಪ್ರಸ್ತುತ ಎಲ್ಲಿದ್ದಾರೆ ಎನ್ನುವುದು ಹೊರಜಗತ್ತಿಗೆ ಈಗಲೂ ತಿಳಿದಿಲ್ಲ. ಆದರೆ ಅವರು ಅಮೆರಿಕದಲ್ಲೆಡೆ ಓಡಾಡಿದ ಹೆಜ್ಜೆಗುರುತುಗಳು ಸಿಗುತ್ತವೆ ಎಂದು ಮಾಧ್ಯಮ ತಿಳಿಸಿದೆ. ಕೈಲಾಸ ಹಾಗೂ ನಿತ್ಯಾನಂದನೊಂದಿಗೆ ಅಮೆರಿಕವೊಂದರಲ್ಲಿಯೇ ಕಳೆದ ಒಂದು ವರ್ಷದಲ್ಲಿ ಕನಿಷ್ಠ ಹತ್ತು ಸಂಘಟನೆಗಳು ನಂಟು ಬೆಸೆದುಕೊಂಡಿವೆ. ಈ ಎಲ್ಲ ಸಂಘಟನೆಗಳೂ ಒಂದೋ ಲಾಭ ರಹಿತ, ಇಲ್ಲವೇ ಸಾರ್ವಜನಿಕ ಅನುಕೂಲದ ಸಂಸ್ಥೆಗಳಾಗಿವೆ. ಹವಾಯ್ ದ್ವೀಪದಲ್ಲಿರುವ ಒಂದು ಸಂಸ್ಥೆ ಮಾತ್ರ ಲಾಭ ರಹಿತವಲ್ಲ. ಹವಾಯಿ ದ್ವೀಪದ ಪಶ್ಚಿಮ ಕರಾವಳಿಯ ಪಟ್ಟಣವೊಂದರಲ್ಲಿ 'ಕೈಲಾಸ ಆನ್ ಹವಾಯಿ ಐಲ್ಯಾಂಡ್' ಎಂದು ಅಧಿಕೃತವಾಗಿ ನೋಂದಣಿ ಮಾಡಿರುವ ಸಂಸ್ಥೆಯು ಅಮೆರಿಕದ ಆಂತರಿಕ ಲಾಭ ಉದ್ದೇಶದ ಸಂಸ್ಥೆಯಾಗಿದೆ.

ಉಳಿದ ಎನ್ಜಿಒಗಳು ಎಲ್ಲಿವೆ?
ಉಳಿದ ಕೈಲಾಸ ಎನ್ಜಿಒಗಳು ಸ್ಯಾನ್ ಜೋ, ಮಿಚಿಗನ್, ಮಿನ್ನೆಸೊಟಾ, ಪೆನ್ಸಿಲ್ವೇನಿಯಾ, ಪಿಟ್ಸ್ಬರ್ಗ್, ಟೆನ್ನಿಸ್ಸೀ, ಡಲ್ಲಾಸ್, ಹ್ಯೂಸ್ಟನ್ ಮತ್ತು ಸಿಯಾಟಲ್ಗಳಲ್ಲಿವೆ. ಈ ಸಂಸ್ಥೆಗಳ ಉದ್ದೇಶ ಸನಾತನ ಧರ್ಮದ (ಹಿಂದೂ) ಅನುಯಾಯಿಗಳಿಗೆ ಜಾಗತಿಕ ಪ್ರಾತಿನಿಧಿಕ ವೇದಿಕೆಗಾಗಿ ರಾಜತಾಂತ್ರಿಕ ವಿಭಾಗ ಸೃಷ್ಟಿಸುವುದೇ ಈ ಸಂಸ್ಥೆಗಳ ಉದ್ದೇಶವಾಗಿದೆ ಎಂದು ಕೈಲಾಸದ ಪ್ರತಿನಿಧಿಗಳು ಅಮೆರಿಕ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
'ಅತಿಥಿ ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡುವುದು ಮತ್ತು ಕೈಲಾಸಕ್ಕೆ ತೊಂದರೆಯುಂಟು ಮಾಡುವಂತಹ ಸಂಗತಿಗಳನ್ನು ಕೈಲಾಸ ದೇಶದ ಸೂಕ್ತ ಸಚಿವಾಲಯಕ್ಕೆ ಮಾಹಿತಿ ನೀಡುವುದು ಉದ್ದೇಶಗಳಲ್ಲಿ ಒಂದು' ಎಂದು ತಿಳಿಸಿದ್ದಾರೆ. ನಿತ್ಯಾನಂದ ಧ್ಯಾನಪೀಠಂ ಮತ್ತು ನಿತ್ಯಾನಂದ ಮಿಷನ್ ಅಥವಾ ಯುನೈಟೆಡ್ ಸ್ಟೇಟ್ ಆಫ್ ಕೈಲಾಸದೊಂದಿಗೆ ಧಾರ್ಮಿಕ ಸಂಸ್ಥೆಗಳು ತಮ್ಮ ನಿಷ್ಠೆಯನ್ನು ಪ್ರತಿಜ್ಞೆ ಮೂಲಕ ತಿಳಿಸಿವೆ.

ಇತರೆ ದೇಶಗಳಲ್ಲಿ ಚಟುವಟಿಕೆ
ಹಾಕಾಂಗ್ನ ಜಾಗತಿಕ ಹಣಕಾಸು ಕೇಂದ್ರದಲ್ಲಿ ಕೈಲಾಸ ಲಿಮಿಟೆಡ್ ಎಂಬ ಖಾಸಗಿ ಕಂಪೆನಿಯೊಂದನ್ನು ಅಕ್ಟೋಬರ್ನಲ್ಲಿ ಕೈಲಾಸ ದೇಶದಿಂದ ನೋಂದಣಿ ಮಾಡಲಾಗಿದೆ. ಹಾಂಕಾಂಗ್ನ ಸ್ಟ್ಯಾನ್ಲಿ ಸ್ಟ್ರೀಟ್ನ ವರ್ಲ್ಡ್ ಟ್ರಸ್ಟ್ ಟವರ್ಅನ್ನು ತನ್ನ ವಿಳಾಸವಾಗಿ ಕಂಪೆನಿ ನಮೂದಿಸಿದೆ. ಈ ವರ್ಷದ ಏಪ್ರಿಲ್ ಆರಂಭದಲ್ಲಿ ಬ್ರಿಟನ್ನಲ್ಲಿ ಒಂದೇ ದಿನ ಎರಡು ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿದೆ. ಸಂಸ್ಥೆಗಳು ಪೂರಕ ಕರೆನ್ಸಿಗಳನ್ನು ಬಳಸಲು ಅವಕಾಶ ನೀಡುವ ದೇಶಗಳಲ್ಲಿ ಬ್ರಿಟನ್ ಕೂಡ ಒಂದು.

ಕೈಲಾಸ ಕರೆನ್ಸಿ ಇರಲು ಸಾಧ್ಯವೇ?
ಅನೇಕ ದೇಶಗಳಲ್ಲಿ ಸಮುದಾಯಗಳು ತಮ್ಮದೇ ಸ್ವಂತ ಹಣವನ್ನು ಮುದ್ರಿಸಬಹುದು. ಪೂರಕ ಕರೆನ್ಸಿ ಮತ್ತು ಖಾಸಗಿ ಕರನ್ಸಿಗಳ ಪರಿಕಲ್ಪನೆ ಹೊಸದಲ್ಲ. ಅನೇಕ ದೇಶಗಳು ಸಾಮಾಜಿ, ಧಾರ್ಮಿಕ ಮತ್ತು ಪರಿಸರ ಸಂಘಟನೆಗಳಿಗೆ ಪೂರಕ ಕರೆನ್ಸಿಗಳನ್ನು ಬಳಸಲು ಅವಕಾಶ ನೀಡುತ್ತವೆ. ಉದಾಹರಣೆಗೆ ಬ್ರಿಟನ್ನಲ್ಲಿ ಸಮುದಾಯಗಳು ಬ್ರಿಸ್ಟಲ್ ಪೌಂಡ್ಸ್ ಮತ್ತು ಲೆವಿಸ್ ಪೌಂಡ್ ಎಂಬ ಸಮುದಾಯ ಕರೆನ್ಸಿಗಳನ್ನು ಬಳಸಲು ಅವಕಾಶವಿದೆ. ಈ ರೀತಿಯ ಕರೆನ್ಸಿಗಳನ್ನು ವಿನ್ಯಾಸ ಮಾಡಲು ಮತ್ತು ಮುದ್ರಿಸಿಕೊಡಲು ಒಂದು ವೆಬ್ ಸೈಟ್ ಸಹ ಇದೆ. ಅನೇಕ ದೇಶಗಳಲ್ಲಿ ಬಿಟ್ ಕಾಯಿನ್ನಂತಹ ವಿಧಾನಕ್ಕೂ ಅವಕಾಶ ನೀಡಲಾಗಿದೆ. ಹೀಗಾಗಿ ಕೈಲಾಸ ಕರೆನ್ಸಿ ಹೊಂದಲು ಅವಕಾಶ ಇದೆ ಹಾಗೂ ಇಲ್ಲ ಎಂದೂ ಹೇಳಬಹುದು.

ತನ್ನ ಸಮುದಾಯದಲ್ಲಿ ಚಲಾವಣೆ ಮಾಡಬಹುದು
ನಿತ್ಯಾನಂದ ತನ್ನ ಸಮುದಾಯದ ಸದಸ್ಯರು ಮಾತ್ರವೇ ತನ್ನ ಸ್ವಂತ ಕರೆನ್ಸಿ ಚಲಾವಣೆ ಮಾಡುವಂತೆ ಎನ್ಜಿಒಗಳ ಸಮುದಾಯ ಮತ್ತು ಖಾಸಗಿ ಕಂಪೆನಿಗಳನ್ನು ಹಾಗೂ ದೇಶವೊಂದರ ಸ್ಥಳೀಯ ಕಾನೂನುಗಳನ್ನು ಬಳಸಿಕೊಳ್ಳಬಹುದು. ಇದಕ್ಕೆ ಕಾನೂನಾತ್ಮಕ ಮನ್ನಣೆ ಬೇಕಾಗದೆ ಇರಬಹುದು ಮತ್ತು ಅವರ ವರ್ಚ್ಯುವಲ್ ಬ್ಯಾಂಕ್ನಲ್ಲಿ ಚಲಾವಣೆ ಮಾಡಲು ಅವರಿಗೆ ಅವಕಾಶ ನೀಡಬಹುದು.

ನಿರಾಕರಿಸಿದ್ದ ಈಕ್ವೆಡಾರ್ ಸರ್ಕಾರ
ಹೊಸ ಸಾರ್ವಭೌಮ ದೇಶ ಸ್ಥಾಪಿಸುತ್ತಿರುವುದಾಗಿ ಹಲವು ಬಾರಿ ಹೇಳಿದ್ದರೂ, ತನ್ನ ಅನುಯಾಯಿಗಳಿಗೆ ನಿತ್ಯಾನಂದ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಾನ ಒದಗಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಹಿಂದೆ ಈಕ್ವೆಡಾರ್ನಲ್ಲಿ ದ್ವೀಪವೊಂದನ್ನು ಖರೀದಿಸಿದ್ದಾರೆ ಎಂಬ ವಾದವನ್ನು ಈಕ್ವೆಡಾರ್ ಸರ್ಕಾರ ನಿರಾಕರಿಸಿತ್ತು. ಆದರೆ ನಿತ್ಯಾನಂದ ಸಲ್ಲಿಸಿದ್ದ ವಾಸ ಅರ್ಜಿಯನ್ನು ತಿರಸ್ಕರಿಸಿದ್ದಾಗಿ ಖಚಿತಪಡಿಸಿತ್ತು. ಪ್ರಸ್ತುತ ನಿತ್ಯಾನಂದ ಆನ್ಲೈನ್ ಮೂಲಕ ಜಗತ್ತಿನೆಲ್ಲಡೆಯ ತನ್ನ ಅನುಯಾಯಿಗಳ ಜತೆಗೆ ಸಂಪರ್ಕ ಹೊಂದಿದ್ದಾರೆ. ತಮ್ಮ ಸಾಹಿತ್ಯ ಮತ್ತು ಕಾರ್ಯಕ್ರಮಗಳಿಗೆ ಆನ್ಲೈನ್ ಪ್ರವೇಶ ನೀಡುವ ಇ-ಪಾಸ್ಪೋರ್ಟ್ ನೀಡುತ್ತಿದ್ದಾರೆ. ಆಗಸ್ಟ್ 22ರಂದು ತಮ್ಮ ಹೊಸ ಕರೆನ್ಸಿ ಆರಂಭಿಸುವುದಾಗಿ ನಿತ್ಯಾನಂದ ಪ್ರಕಟಿಸಿದ್ದಾರೆ. 'ಕೈಲಾಸ' ದೇಶದ ಕಥನ ಯಾವ ಹಂತಕ್ಕೆ ತಲುಪಲಿದೆ ಎನ್ನುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications