ನಿರ್ಭಯ ಪ್ರಕರಣ; ಅಕ್ಷಯ್ ಠಾಕೂರ್ ಅರ್ಜಿ ತೀರ್ಪು 1 ಗಂಟೆಗೆ
ನವದೆಹಲಿ, ಡಿಸೆಂಬರ್ 18 : ನಿರ್ಭಯ ಪ್ರಕರಣದ ಅಪರಾಧಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಮಧ್ಯಾಹ್ನ 1 ಗಂಟೆಗೆ ಸುಪ್ರೀಂಕೋರ್ಟ್ ನೀಡಲಿದೆ. ಗಲ್ಲು ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು.
ಬುಧವಾರ ಸುಪ್ರೀಂಕೋರ್ಟ್ನಲ್ಲಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಎರಡೂ ಕಡೆಯ ವಾದವನ್ನು ಆಲಿಸಿದ ಮೂವರು ನ್ಯಾಯಮೂರ್ತಿಗಳ ಪೀಠ ಮಧ್ಯಾಹ್ನ 1 ಗಂಟೆಗೆ ತೀರ್ಪನ್ನು ಕಾಯ್ದಿರಿಸಿದೆ.
ನಿರ್ಭಯ ಪ್ರಕರಣ; ಅಕ್ಷಯ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ
ಬುಧವಾರ ನ್ಯಾಯಮೂರ್ತಿಗಳಾದ ಎಸ್. ಎ. ಬೋಪಣ್ಣ, ಆರ್. ಭಾನುಮತಿ ಮತ್ತು ಅಶೋಕ್ ಭೂಷಣ್ ಅವರ ಪೀಠದಲ್ಲಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಅಕ್ಷಯ್ ಠಾಕೂರ್ ಪರವಾಗಿ ವಕೀಲ ಎ. ಪಿ. ಸಿಂಗ್ ವಾದ ಮಂಡಿಸಿದರು.
ದೇಶವನ್ನೇ ಬೆಚ್ಚಿಬೀಳಿಸಿದ ನಿರ್ಭಯಾ ಅತ್ಯಾಚಾರಿಗಳಿಗೆ ಖಿನ್ನತೆ
ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಾದ ಮುಕೇಶ್, ವಿನಯ್ ಮತ್ತು ಪವನ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ. ಅಕ್ಷಯ್ ಠಾಕೂರ್ ಪ್ರಕರಣದ 4ನೇ ಅಪರಾಧಿ. ಎಲ್ಲಾ ಅಪರಾಧಿಗಳಿಗೂ ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿದೆ.
ನಿರ್ಭಯಾ ಅತ್ಯಾಚಾರಿಗಳಿಗೆ ಕ್ಷಮಾದಾನ ನೀಡಲ್ಲ ಎಂದ ರಾಷ್ಟ್ರಪತಿ
ವಕೀಲರ ವಾದವೇನು?
ಅಕ್ಷಯ್ ಠಾಕೂರ್ ಪರವಾಗಿ ವಕೀಲ ಎ. ಪಿ. ಸಿಂಗ್ ವಾದ ಮಂಡಿಸಿದರು. "ನಿರ್ಭಯ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಗಣ್ಯ ಸಾಕ್ಷಿದಾರರು ನೀಡಿರುವ ಹೇಳಿಕೆ ನಂಬಲು ಸಾಧ್ಯವಿಲ್ಲ. ಅಕ್ಷಯ್ ಅಮಾಯಕ ಮತ್ತು ಬಡಕುಟುಂಬದವನು. ರಕ್ತಕ್ಕೆ ರಕ್ತವೇ ಬೇಕು ಎಂಬ ಸೇಡಿನ ಕ್ರಮ ಸರಿಯಲ್ಲ" ಎಂದು ವಾದಿಸಿದರು.
ದೂರು ದಾಖಲು ಮಾಡಿದ್ದೇವೆ
"ನಿರ್ಭಯ ಗೆಳೆಯ ಲಂಚ ಪಡೆದು ಟಿವಿ ಚಾನೆಲ್ಗಳ ಮುಂದೆ ಹೇಳಿಕೆ ನೀಡಿದ್ದಾನೆ. ಆತನ ವಿರುದ್ಧ ನಾವು ಪಟಿಯಾಲಾ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿದ್ದೇವೆ. ಡಿಸೆಂಬರ್ 20ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಆತನನ್ನೇ ಪೊಲೀಸರು ಸಾಕ್ಷಿ ಎಂದು ಪರಿಗಣಿಸಿದ್ದಾರೆ" ಎಂದು ಅಕ್ಷಯ್ ಪರ ವಕೀಲರು ವಾದಿಸಿದರು.
ರಾಜಕೀಯ ಒತ್ತಡವಿದೆ
"ನಿರ್ಭಯ ಪ್ರಕರಣದ ಅಪರಾಧಿಗಳನ್ನು ಗಲ್ಲು ಹಾಕುವಂತೆ ಮಾಧ್ಯಮಗಳು, ಸಾರ್ವಜನಿಕರು, ರಾಜಕೀಯ ಒತ್ತಡವಿದೆ. ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ದೆಹಲಿ ಸರ್ಕಾರ ತುಂಬಾ ಆಸಕ್ತಿ ವಹಿಸುತ್ತಿದೆ. ಗಲ್ಲು ಶಿಕ್ಷೆಗೆ ಆದೇಶ ನೀಡಿರುವ ಹಲವು ಅಪರಾಧಿಗಳು ಇನ್ನೂ ಜೀವಂತವಾಗಿದ್ದಾರೆ. ಈ ಪ್ರಕರಣದಲ್ಲಿ ರಾಜಕೀಯ ಹಿತಾಸಕ್ತಿ ಅಡಗಿದೆ" ಎಂದು ವಾದಿಸಿದರು.
ಅಪರಾಧಿ ಕೊಲ್ಲಬಹುದು
"ಉಪನಿಷತ್ ಪ್ರಕಾರ ಮನುಷ್ಯ ನೂರಾರು ವರ್ಷಗಳ ಕಾಲ ಬದುಕಿರುತ್ತಿದ್ದರು. ಗಲ್ಲು ಶಿಕ್ಷೆಯಿಂದ ಏನು ಸಾಧನೆ ಮಾಡಿದಂತೆ ಆಗುತ್ತದೆ. ಅಕ್ಷಯ್ ಕುಟುಂಬದ ಮುಂದಿನ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ. ಅಪರಾಧಿಯನ್ನು ಕೊಲ್ಲಬಹುದೇ ವಿನಃ ಅಪರಾಧವನ್ನಲ್ಲ. ಬದುಕಿ, ಬದುಕಲು ಬಿಡಿ ಎಂಬುದು ಹಿಂದೂ ಧರ್ಮದ ಧ್ಯೇಯವಾಗಿದೆ" ಎಂದು ಮೂವರು ನ್ಯಾಯಾಧೀಶರ ಮುಂದೆ ವಾದಿಸಿದರು.
ಸಿಜೆಐ ಹಿಂದೆ ಸರಿದಿದ್ದರು
ಮಂಗಳವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ಅಕ್ಷಯ್ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಎಸ್. ಎ. ಬೋಬ್ಡೆ ಸಹೋದರನ ಪುತ್ರ ಅರ್ಜುನ್ ಬೋಬ್ಡೆ ಸಂತ್ರಸ್ತೆಯ ತಾಯಿ ಪರವಾಗಿ ವಾದ ಮಂಡನೆ ಮಾಡಿದ್ದರು. ಆದ್ದರಿಂದ, ಸಿಜೆಐ ವಿಚಾರಣೆಯಿಂದ ಹಿಂದೆ ಸರಿದಿದ್ದರು.