6 ಸಾವಿರ ಸಂಬಳ, ಬ್ಯಾಂಕ್ ಖಾತೆಯಲ್ಲಿ 18 ಲಕ್ಷ!
ಜಮ್ಮು, ಅಗಸ್ಟ್ 25: ಜಮ್ಮು-ಕಾಶ್ಮೀರದ ವಿವಿಧ ಬ್ಯಾಂಕ್ ಗಳಲ್ಲಿ ಅನುಮಾನ ಮೂಡಿಸುವಂಥ ಹಲವು ಖಾತೆಗಳನ್ನು ರಾಷ್ಟ್ರೀಯ ತನಿಖಾ ದಳ ಪತ್ತೆ ಮಾಡಿದೆ. ಈ ಹಣವು ಕಣಿವೆ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಹರಿದುಬಂದಿದೆ.
ಅಂಥದ್ದೇ ಒಂದು ಖಾತೆಗೆ ಮೂರು ಕಂತುಗಳಲ್ಲಿ 18 ಲಕ್ಷ ಜಮೆಯಾಗಿದೆ. ಪುಲ್ವಾಮಾಗೆ ಸೇರಿದ ಆ ವ್ಯಕ್ತಿಯ ತಿಂಗಳ ಸಂಬಳ 6 ಸಾವಿರ ರುಪಾಯಿ. ಅ ಖಾತೆಯನ್ನು ಪೂರ್ತಿಯಾಗಿ ಬಂದ್ ಮಾಡುವ ಮುಂಚೆ ಹಲವು ಕಂತುಗಳಲ್ಲಿ ಹಣ ತೆಗೆದುಕೊಳ್ಳಲಾಗಿದೆ.
ಎನ್ ಐಎನಿಂದ ಈ ಬಗ್ಗೆ ತನಿಖೆ ನಡೆದಿದ್ದು, ಇದರಿಂದ ಮೇಲ್ನೋಟಕ್ಕೆ ಕೆಲವು ವಿಚಾರಗಳು ತಿಳಿದುಬಂದಿದೆ. ಬಡವರಿಂದ ಬ್ಯಾಂಕ್ ಖಾತೆ ತೆರೆಸಿ, ಅ ಖಾತೆಗಳಿಗೆ ಹಣ ಹಾಕಿಸಿ, ಕಂತುಗಳಲ್ಲಿ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳ ಪ್ರಕಾರ: 30 ಕೋಟಿಗೂ ಹೆಚ್ಚು ಮೊತ್ತ ಹರಿದು ಬಂದಿದೆ.
ಅದನ್ನು ಗಲಭೆ ಸೃಷ್ಟಿಸಲು ಬಳಸಲಾಗಿದೆ. ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಬುಹ್ರಾನ್ ವನಿ ಎನ್ ಕೌಂಟರ್ ಆದ 46 ದಿನಗಳ ನಂತರ ಕೂಡ ಕಣಿವೆ ರಾಜ್ಯ ಹೊತ್ತಿ ಉರಿಯುತ್ತಿದೆ.[ಕಾಶ್ಮೀರದಲ್ಲಿ ಶಾಂತಿ ಕದಡಲು 30 ಕೋಟಿಗೂ ಹೆಚ್ಚು ಹಣ: ಎನ್ ಐಎ ತನಿಖೆ]
ಕನಿಷ್ಠ 17 ಖಾತೆಗಳು ಎನ್ ಐಎ ಗಮನಕ್ಕೆ ಬಂದಿದೆ. ಇವುಗಳಲ್ಲಿ ಅನುಮಾನಾಸ್ಪದ ವ್ಯವಹಾರ ನಡೆದಿದೆ. ತನಿಖಾ ದಳಗಳ ಗಮನಕ್ಕೆ ಬಾರದಿರಲಿ ಎಂಬ ಕಾರಣಕ್ಕೆ ಏನೂ ಅರಿಯದ ಬಡವರನ್ನು ಬಳಸಿಕೊಳ್ಳಲಾಗಿದೆ. ಒಂದು ಸಲ ಹಣ ಖಾತೆಗೆ ಜಮೆಯಾದ ಮೇಲೆ ಅದ ಹಲವು ಕಂತುಗಳಲ್ಲಿ ಡ್ರಾ ಮಾಡಲಾಗಿದೆ. ಅದಾದ ನಂತರ ಖಾತೆ ಕ್ಲೋಸ್ ಮಾಡಿದ್ದಾರೆ.
ಕಲ್ಲು ಎಸೆಯುವವರಿಗೆ, ರಸ್ತೆ ತಡೆ ನಡೆಸುವವರಿಗೆ, ನುಸುಳುಕೋರರಿಗೆ ಕೊಡುವುದಕ್ಕೆ ಈ ಹಣವನ್ನು ಬಳಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.[3 ಉಗ್ರರನ್ನು ಗಡಿಯಲ್ಲಿ ಹೊಡೆದುರುಳಿಸಿದ ಸೇನಾಪಡೆ]
ಇನ್ನು ಗಲ್ಫ್ ರಾಷ್ಟ್ರಗಳಿಂದ ಹರಿದುಬಂದಿರುವ ಹಣದ ಬಗ್ಗೆಯೂ ಎನ್ ಐಎ ಕಣ್ಣಿಟ್ಟಿದೆ. ಹಲವು ಕಾಶ್ಮೀರಿ ವ್ಯಾಪಾರಸ್ಥರನ್ನು ಸಂಪರ್ಕಿಸಿ, ಹಣ ಕಳುಹಿಸುವಂತೆ ಕೇಳಿಕೊಳ್ಳಲಾಗಿದೆ. ಈ ಬಗ್ಗೆ ಅನುಮಾನ ಬರಬಾರದು ಎಂಬ ಕಾರಣಕ್ಕೆ ವ್ಯವಹಾರದ ಬಿಲ್ ಗಳಲ್ಲಿ ಹೆಚ್ಚಿನ ಮೊತ್ತ ಹಾಕಲಾಗಿದೆ ಎಂಬ ಬಗ್ಗೆಯೂ ಗುಮಾನಿ ಇದೆ.
ಒಟ್ಟಿನಲ್ಲಿ ಎಲ್ಲ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಜತೆಗೆ ಭಯೋತ್ಪಾದಕರ ಜತೆಗೆ ಪ್ರತ್ಯೇಕತಾವಾದಿಗಳ ನಂಟು ಮತ್ತು ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸಲು ಅವರು ಹಣ ನೀಡಿದ್ದಾರೆ ಎಂಬ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ.