ಉತ್ತರಪ್ರದೇಶದಲ್ಲಿ ಐಎಸ್ಐಎಸ್ ಉಗ್ರನ ಬಂಧನ
ಬೆಂಗಳೂರು, ಫೆಬ್ರವರಿ 05 : ರಾಷ್ಟ್ರೀಯ ತನಿಖಾ ದಳ ಉತ್ತರ ಪ್ರದೇಶದಲ್ಲಿ ಐಎಸ್ಐಎಸ್ ಉಗ್ರನನ್ನು ಬಂಧಿಸಿದೆ. ಭಾರತದಲ್ಲಿ ಐಎಸ್ಐಎಸ್ ಉಗ್ರ ಸಂಘಟನೆಗೆ ಈತ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ.
ಬಂಧಿತ ಯುವಕನನ್ನು ಅಬ್ದುಲ್ ಸಾಮಿ ಖಾಸ್ಮಿ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಹರೋಡಿ ಜಿಲ್ಲೆಯಲ್ಲಿ ಖಾಸ್ಮಿಯನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಎನ್ಐಎ ವಿಶೇಷ ನ್ಯಾಯಾಲಯ 10 ದಿನಗಳ ವರೆಗೆ ಆತನನ್ನು ಎನ್ಐಎ ವಶಕ್ಕೆ ನೀಡಿದೆ. [ಭಟ್ಕಳದ ಶಫಿ ಉಗ್ರರಿಗೆ ಮುಖ್ಯಸ್ಥ]
ಗಣರಾಜ್ಯೋತ್ಸವಕ್ಕೆ ಮೊದಲು ದೇಶದ ವಿವಿಧ ನಗರಗಳಲ್ಲಿ ಎನ್ಐಎ ನಡೆಸಿದ ದಾಳಿಯ ವೇಳೆ ಹಲವು ಐಎಸ್ಐಎಸ್ ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಈ ಉಗ್ರರ ವಿಚಾರಣೆ ವೇಳೆ ಖಾಸ್ಮಿ ಹೆಸರನ್ನು ಅವರು ಹೇಳಿದ್ದರು. ಇದರ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ. [ಉಗ್ರರಿಗೆ ಮುಂಬೈನಿಂದ ಸೂಚನೆ ಸಿಗುತ್ತಿತ್ತು]
ಐಎಸ್ಐಎಸ್ ಬೆಂಬಲಿಗರು ಎಂದು ಇದುವರೆಗೂ ಎನ್ಐಎ ಮತ್ತು ಇತರ ತನಿಖಾ ಸಂಸ್ಥೆಗಳು 22 ಆರೋಪಿಗಳನ್ನು ಬಂಧಿಸಿವೆ. ಈ ಎಲ್ಲಾ ಆರೋಪಿಗಳು ಭಟ್ಕಳ ಮೂಲದ ಮೊಹಮದ್ ಶಫಿ ಅರ್ಮರ್ ಸೂಚನೆಯಂತೆ ಕಾರ್ಯ ನಿರ್ವಹಣೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. [ಉಗ್ರರ ಬಳಿ ಸುಧಾರಿತ ಸ್ಫೋಟಕ ಪತ್ತೆ]
ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆದ ದಾಳಿಯ ವೇಳೆ ಎನ್ಐಎ ಬೆಂಗಳೂರು, ತುಮಕೂರು ಮತ್ತು ಮಂಗಳೂರಿನಲ್ಲಿಯೂ ಶಂಕಿತ ಉಗ್ರರನ್ನು ಬಂಧಿಸಿತ್ತು. ಈ ಎಲ್ಲಾ ಆರೋಪಿಗಳು ಇನ್ನೂ ಎನ್ಐಎ ವಶದಲ್ಲಿದ್ದಾರೆ.