ಚಿತ್ರಗಳಲ್ಲಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ
ನವದೆಹಲಿ, ಮೇ 26: ನರೇಂದ್ರ ಮೋದಿ ಸರ್ಕಾರಕ್ಕೆ ವರ್ಷ ತುಂಬಿದಕ್ಕೆ ಬಿಜೆಪಿಯವರು ಸಂಭ್ರಮಾಚರಣೆ ಮಾಡಿದರೆ ಕಾಂಗ್ರೆಸ್ ನವರು ದೇಶಾದ್ಯಂತ ಪ್ರತಿಭಟನೆ, ಅಣಕು ಶವಯಾತ್ರೆ ನಡೆಸಿದರು. ಬಿಜೆಪಿ ಸರ್ಕಾರ ಸೂಟು ಬೂಟಿನ ಸರ್ಕಾರ, ರೈತರ ಹಿತ ಗಾಳಿಗೆ ತೂರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತ ನರೇಂದ್ರ ಮೋದಿ ವರ್ಷಾಚರಣೆಯಲ್ಲೂ ಪಾಲ್ಗೊಂಡರು ಜತೆಗೆ ಅಧಿಕಾರಿಗಳ ಸಭೆಯನ್ನು ನಡೆಸಿದರು. ಕಾಶ್ಮೀರಿ ಪಂಡಿತರು ಗಂದೆರ್ ಬಲ್ ನ ಖೀರ್ ಭವಾನಿ ದೇವಾಲಯದ ಉತ್ಸವದ ನಿಮಿತ್ತ ಪ್ರಾರ್ಥನೆ ಸಲ್ಲಿಸಿದರು...ದೇಶಾದ್ಯಂತ ಮಂಗಳವಾರ ನಡೆದ ವಿವಿಧ ಘಟನಾವಳಿಗಳ ಸಂಕ್ಷಿಪ್ತ ಸಾರ ಇಲ್ಲಿದೆ...(ಪಿಟಿಐ ಚಿತ್ರಗಳು)

ಬೆಂಗಳೂರಲ್ಲಿ ಬೀದಿಗಿಳಿದ ಕಾಂಗ್ರೆಸ್ ಪಡೆ
ಮೋದಿ ಸರ್ಕಾರದ ರೀತಿ ನೀತಿಗಳನ್ನು ವಿರೋಧಿಸುವ ಭಿತ್ತಿ ಪತ್ರಗಳನ್ನು ಹಿಡಿದ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಕೋಟನ್ನು ಪ್ರದರ್ಶನ ಮಾಡಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದರು.

ಕಾಂಗ್ರೆಸ್ ಪ್ರತಿಭಟನೆ
ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಮುಂಬೈ ನಲ್ಲಿ ಅಣಕು ಶವ ದಹನ ಮಾಡಿ ಪ್ರತಿಭಟನೆ ನಡೆಸಿದರು.

ಲಖ್ನೋ ದಲ್ಲೂ ಕೈ ಆರ್ಭಟ
ಬಿಜೆಪಿ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಓಲೈಕೆಯಲ್ಲಿ ತೊಡಗಿದ್ದು ಸಾಮಾನ್ಯ ಜನರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿ ಲಖ್ನೋ ದಲ್ಲಿ ಕೈ ಕಾರ್ಯಕರ್ತರ ಆರ್ಭಟ.

ಅಚ್ಛೇ ದಿನ ಯಾವಾಗ ಬರುತ್ತೆ?
ನರೇಂದ್ರ ಮೋದಿ ಸ್ವಕ್ಷೇತ್ರ ವಾರಣಾಸಿಯಲ್ಲಿ ಅಚ್ಛೇ ದಿನ ಯಾವಾಗ ಬರುತ್ತೆ? ಎಂದು ಸಾರುವ ಭಿತ್ತಿ ಪತ್ರಗಳನ್ನು ಹಿಡಿದು ಸಮಾಜವಾದಿ ಪಾರ್ಟಿ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಸಭೆ
ಸರ್ಕಾರಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ದೆಹಲಿಯ ತಮ್ಮ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಒಂದು ವರ್ಷದಲ್ಲಿ ಆದ ಸಾಧನೆಗಳು ಮತ್ತು ಸವಾಲುಗಳ ಪರಾಮರ್ಶೆ ನಡೆಯಿತು.

ಒತ್ತುವರಿ ತೆರವು ಕಾರ್ಯಾಚರಣೆ ಅಲ್ಲ
ಕೋಲ್ಕತ್ತಾದಲ್ಲಿ ಬಹುಮಹಡಿ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯಿತು. ಬೆಂಗಳೂರಿನಂತೆ ಇದು ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲ. ಹೊಸ ಕಟ್ಟಡ ನಿರ್ಮಿಸಲು ಮುಂದಾಗಿರುವ ಸ್ಥಳೀಯ ಆಡಳಿತ ಹಳೇ ಕಟ್ಟಡಗಳಿಗೆ ಮುಕ್ತಿ ಕಾಣಿಸಿತು.

ವರ್ಷಾಚರಣೆಯಲ್ಲಿ ಭಾಗಿಯಾದ ಗಡ್ಕರಿ
ಪಾಟ್ನಾದಲ್ಲಿ ಹಮ್ಮಿಕೊಂಡಿದ್ದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾಗಿಯಾಗಿದ್ದರು. ದೇಶಾದ್ಯಂತ ಅನೇಕ ರಸ್ತೆ ಟೋಲ್ ಗಳನ್ನು ಮುಚ್ಚಲಾಗುವುದು ಎಂದು ಗಡ್ಕರಿ ಇತ್ತಿಚೇಗೆ ತಿಳಿಸಿದ್ದರು.

ಅಮೇಥಿಯಲ್ಲಿ ಸ್ಮೃತಿ ಇರಾನಿ
ಅಮೇಥಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ. ಇತ್ತೀಚೆಗೆ ಗೋವಾದ ಮಾಲ್ ವೊಂದರಲ್ಲಿ ರಹಸ್ಯ ಕ್ಯಾಮರಾ ಪತ್ತೆ ಮಾಡಿ ಸುದ್ದಿಯಾಗಿದ್ದರು.

ಸೈನಿಕರಿಗೆ ಬಿಡುವಿಲ್ಲ
ಗಡಿ ಕಾಯುವ ಸೈನಿಕರಿಗೆ ಪ್ರತಿ ದಿನವೂ ಹೊಸ ಪರೀಕ್ಷೆಗಳು ಎದುರಾಗುತ್ತಿರುತ್ತವೆ. ಮಂಗಳವಾರ ಕುಪ್ ವಾರಾದಲ್ಲಿ ಉಗ್ರರ ಜಾಡು ಬೆನ್ನು ಹತ್ತಿರುವ ಸೈನಿಕರು.

ಪಂಡಿತರ ಪ್ರಾರ್ಥನೆ
ಗಂದೆರ್ ಬಲ್ ನ ಖೀರ್ ಭವಾನಿ ದೇವಾಲಯದ ಉತ್ಸವದ ನಿಮಿತ್ತ ಪ್ರಾರ್ಥನೆ ಸಲ್ಲಿಸಿದ ಕಾಶ್ಮೀರಿ ಪಂಡಿತರು. ಜಮ್ಮು ಮತ್ತು ಕಾಶ್ಮೀರಕ್ಕೆ ಪಂಡಿತರು ಹಿಂದಿರುಗುವುದಾದರೆ ಎಲ್ಲ ಮೂಲ ಸೌಕರ್ಯ ಕಲ್ಪಿಸಿಕೊಡುತ್ತೇವೆ ಎಂದು ಕಾಶ್ಮೀರದ ಸಮ್ಮಿಶ್ರ ಸರ್ಕಾರ ಹೇಳಿತ್ತು.

ಭೀಕರ ಅಪಘಾತ
ಪಶ್ಚಿಮ ಬಂಗಾಳದ ದಕ್ಷಿಣ ದಿಂಜಾಪುರ್ ನಲ್ಲಿ ಲಾರಿ ಮತ್ತು ವ್ಯಾನ್ ನಡುವೆ ಭೀಕರ ಅಪಘಾತ ಸಂಭವಿಸಿ 8 ಜನ ಸಾವನ್ನಪ್ಪಿದ್ದಾರೆ. ಚಿತ್ರವೇ ಘಟನೆಯ ಭೀಕರತೆಗೆ ಸಾಕ್ಷಿ.












Click it and Unblock the Notifications