ಬಾಲಕೋಟ್ ದಾಳಿ ಸುಳ್ಳಾ? ಉಪಗ್ರಹ ಚಿತ್ರಗಳು ಹೇಳುವ ಹೊಸಕತೆ ನಿಜಾನಾ?
Recommended Video

ನವದೆಹಲಿ, ಮಾರ್ಚ್ 07: ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಉಗ್ರನೆಲೆಯ ಮೇಲೆ ಭಾರತದ ವಾಯುಸೇನೆ ನಡೆಸಿದ ದಾಳಿ ಸುಳ್ಳು ಎಂಬಂಥ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Reuters India ನ್ಯೂಸ್ ಏಜೆನ್ಸಿಯೂ ಮೊದಲ ಬಾರಿಗೆ ಈ ಚಿತ್ರವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ದಾಳಿಯ ನಂತರವೂ ಜೆಇಎಂ ಮದರಸಾ ಕಟ್ಟಡ ಯಾವುದೇ ಹಾನಿಯಿಲ್ಲದೆ ನಿಂತಿದೆ ಎಂದು ಅದು ಟ್ವೀಟ್ ಮಾಡಿದೆ.
ಇದು ಉಪಗ್ರಹ ಚಿತ್ರವಾಗಿದ್ದು, ದಾಳಿಯ ಮೊದಲು ಮತ್ತು ದಾಳಿಯ ನಂತರ ಜೈಷ್ ಇ ಮೊಹಮ್ಮದ್ ಉಗ್ರ ನೆಲೆ ಹೇಗಾಗಿದೆ ಎಂಬ ಚಿತ್ರ ಇದರಲ್ಲಿದೆ. ಆದರೆ ಈ ಎರಡೂ ಚಿತ್ರಗಳಲ್ಲೂ ಹೆಚ್ಚೇನೂ ಬದಲಾವಣೆ ಇಲ್ಲದಿರುವುದನ್ನು ಗುರುತಿಸಿ, ಭಾರತದ ದಾಳಿಯಿಂದ ಜೆಇಎಂ ನೆಲೆಗೆ ಹೆಚ್ಚೇನೂ ಹಾನಿಯಾಗಿಲ್ಲ ಎನ್ನಲಾಗುತ್ತಿದೆ.
'ಇಸ್ರೇಲಿ ಶಕ್ತಿಶಾಲಿ ಬಾಂಬ್ ಬಳಸಿ ಈ ದಾಳಿ ನಡೆಸಲಾಗಿದೆ ಎಂದು ವಾಯುಸೇನೆ ಹೇಳಿದೆ. ಆದರೆ ಆ ಬಾಂಬ್ ಗಳನ್ನು ಬಳಸಿದ್ದೇ ಆದಲ್ಲಿ ಕಟ್ಟಡಗಳು ಧ್ವಂಸವಾಗಬೇಕಿತ್ತು. ಆದರೆ ಚಿತ್ರದಲ್ಲಿ ನೋಡಿದರೆ ಯಾವುದೇ ರೀತಿಯ ಹಾನಿಯಾದಂತೆ ಕಾಣಿಸುವುದಿಲ್ಲ' ಎಂದು ಏಜೆನ್ಸಿ ವರದಿ ಮಾಡಿದೆ.
|
ಯಾವುದು ಸುಳ್ಳು? ಯಾವುದು ಸತ್ಯ?
ಇತ್ತೀಚೆಗಷ್ಟೇ ಬಾಲಕೋಟ್ ದಾಳಿಯ ಮೊದಲು ಮತ್ತು ನಂತರದ ಉಪಗ್ರಹ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕ್ಯಾಂಪಿನ ಸುತ್ತಮುತ್ತ ಇದ್ದ ಮರಗಳು ಕಾಣೆಯಾಗಿದ್ದವು ಮತ್ತು ಕಟ್ಟಡಗಳಿಗೆ ಹಾನಿಯಾಗಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಕೆಲವು ಕಟ್ಟಡಗಳ ಮೇಲೆ ತೂತಾಗಿರುವುದೂ ಕಂಡು ಬಂದಿತ್ತು. ಆದರೆ ಈ ಇದೀಗ Reuters India ಬಿಡುಗಡೆ ಮಾಡಿದ ಚಿತ್ರದಲ್ಲಿ ಮರಗಳಿಗೂ ಹಾನಿಯಾಗಿಲ್ಲ. ಹಾಗಾದರೆ ಸತ್ಯ ಯಾವುದು?

ವಾಯುಸೇನೆ ಪ್ರತಿಕ್ರಿಯೆ
Reuters India ವರದಿಯನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ ಭಾರತೀಯ ವಾಯುಸೇನೆ, 'ನಾವು ಇಸ್ರೇಲಿನ ಸ್ಪೈಸ್ ಬಾಂಬ್ ಗಳ ಮೂಲಕ ಕರಾರುವಕ್ಕಾಗಿ ದಾಳಿ ನಡೆಸಿದ್ದೇವೆ. ಸ್ಪೈಸ್ ಬಾಂಬ್ ಗಳು ಕಟ್ಟಡದೊಳಗೇ ನುಗ್ಗಿ ಅಲ್ಲಿದ್ದವರನ್ನು ಕೊಂದಿದೆ. ಅದು ಕಟ್ಟಡದೊಳಗೆ ಸ್ಫೋಟಿಸಿದೆ' ಎಂದು ವಾಯುಸೇನೆ ಸಮಜಾಯಿಷಿ ನೀಡಿದೆ.
|
ಆ ಉಪಗ್ರಹ ಚಿತ್ರ ಸುಳ್ಳಾ?
ಬಾಲಕೋಟ್ ದಾಳಿಯ ಉಪಗ್ರಹ ಚಿತ್ರಗಳು ಇತ್ತೀಚೆಗಷ್ಟೇ ಮಾಧ್ಯಮಗಳಲ್ಲಿ ಬಿಡುಗಡೆಯಾಗಿತ್ತು. ಫೆಬ್ರವರಿ 23 ರಂದು ಬಾಲಕೋಟ್ ಉಗ್ರನೆಲೆ ಹೇಗಿತ್ತು ಮತ್ತು ಫೆ.26 ರಂದು ಹೇಗಾಗಿದೆ ಎಂಬುದನ್ನು ಈ ಚಿತ್ರ ತೋರಿಸಿತ್ತು. ಈ ಚಿತ್ರದಲ್ಲಿ ಉಗ್ರನೆಲೆಯ ಮೇಲೆ ದಾಳಿಯಾಗಿದ್ದು ಸಂಪೂರ್ಣವಾಗಿ ತಿಳಿಯುವಂತಿತ್ತು.

ಏನಿದು ಏರ್ ಸ್ಟ್ರೈಕ್?
ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸೈನಿಕರಿದ್ದ ವಾಯನದಮೇಲೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ, 44 ಯೋಧರು ಹುತಾತ್ಮರಾಗುವಂತೆ ಮಾಡಿತ್ತು. ಈ ಘಟನೆಗೆ ಪ್ರತೀಕಾರ ಎಂಬಂತೆ ಫೆ.26 ರಂದು ಭಾರತ ಪಾಕಿಸ್ತಾನದಲ್ಲಿರುವ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ಘಟನೆಯಲ್ಲಿ 250-300 ಉಗ್ರರು ಸತ್ತಿರಬಹುದು ಎನ್ನಲಾಗಿತ್ತು. ಈ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಭಾರತ ಉಗ್ರನೆಲೆಯ ಮೇಲೆ ದಾಳಿ ಮಾಡಿದ್ದೇ ಸುಳ್ಳು ಎಂದು ಪಾಕಿಸ್ತಾನ ಮತ್ತು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದವು.












Click it and Unblock the Notifications