ಯಡಿಯೂರಪ್ಪ ಮಗನಿಗೂ ತಟ್ಟಿದ ಮೋದಿ ಆಡಳಿತದ ಬಿಸಿ
ನವದೆಹಲಿ, ಸೆ 16: ಇಲಾಖೆ ನೀಡಿದ ಹಲವು ನೋಟೀಸುಗಳಿಗೆ ಕ್ಯಾರೇ ಅನ್ನದ ಮಾಜಿ ಸಂಸದರ ಮತ್ತು ಸಚಿವರ ಮೇಲೆ ನವದೆಹಲಿ ಮುನ್ಸಿಪಲ್ ಕೌನ್ಸಿಲ್ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದೆ. ಇದರಲ್ಲಿ ಮಾಜಿ ಸಂಸದ ಬಿ ವೈ ರಾಘವೇಂದ್ರ ಅವರು ವಾಸವಿದ್ದ ಸರಕಾರೀ ಬಂಗಲೆ ಕೂಡಾ ಒಂದು.
ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಸಂಸದರು ಮತ್ತು ಸಚಿವರಾಗಿದ್ದಾಗ ಅವಧಿಯಲ್ಲಿ ನೀಡಿದ್ದ ಸರಕಾರೀ ಬಂಗಲೆಯನ್ನು ಖಾಲಿ ಮಾಡುವಂತೆ ಹಲವು ಸುತ್ತಿನ ನೋಟೀಸ್ ಜಾರಿ ಮಾಡಿತ್ತು. ಆದರೆ ಮೂವತ್ತಕ್ಕೂ ಹೆಚ್ಚು ಮಾಜಿ ಸಂಸದರು ಮತ್ತು ಸಚಿವರು ಇಲಾಖೆಯ ನೋಟೀಸಿಗೆ ಸೊಪ್ಪು ಹಾಕಿರಲಿಲ್ಲ.
ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಇಲಾಖೆ ಮನೆ ಖಾಲಿ ಮಾಡದ 'ಮಾಜಿಗಳ' ಸರಕಾರೀ ಬಂಗಲೆಯ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡಿದೆ. (ನೂರು ಸ್ಮಾರ್ಟ್ ಸಿಟಿಗಳ ನಿರ್ಮಾಣ ನಾಯ್ಡು ಗುರಿ)
ಕೇಂದ್ರ ಸರಕಾರದಿಂದ ನಿಯೋಜಿಸಲ್ಪಡುವ ಅಧಿಕಾರಿ ಅಧ್ಯಕ್ಷರಾಗಿರುವ ಮತ್ತು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಸಚಿವಾಲಯದಡಿಯಲಿ ಕಾರ್ಯ ನಿರ್ವಹಿಸುವ ಈ ಇಲಾಖೆ, ಶಿವಮೊಗ್ಗದ ಮಾಜಿ ಸಂಸದ ಮತ್ತು ಶಿಕಾರಿಪುರದ ಹಾಲಿ ಶಾಸಕ ಬಿ ವೈ ರಾಘವೇಂದ್ರ ಅವರಿಗೂ ಬಂಗಲೆ ಖಾಲಿ ಮಾಡುವಂತೆ ನೋಟೀಸ್ ಜಾರಿ ಮಾಡಿತ್ತು.
ಇಲಾಖೆಯ ನೋಟೀಸನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ ರಾಘವೇಂದ್ರ ಈಗ ಮುಜುಗರಕ್ಕೀಡಾಗುವಂತಾಗಿದೆ. ಇಲಾಖೆ ಯಾವಾಗ ನೀರು, ಕರೆಂಟ್ ಕಟ್ ಮಾಡಿದ ಕೂಡಲೇ ರಾಘವೇಂದ್ರ ಸಮಜಾಯಿಷಿ ನೀಡಲು ಮುಂದಾಗಿದ್ದಾರೆ.
ಇಲಾಖೆ ಯಾರ್ಯರಿಗೆ ಬಿಸಿ ಮುಟ್ಟಿಸಿದೆ? ಮುಂದೆ ಓದಿ..

ಮಾಜಿ ಸಚಿವ ಎ ಕೆ ಆಂಟನಿ
ಮಾಜಿ ರಕ್ಷಣಾ ಸಚಿವ, ಸಜ್ಜನ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ ಎ ಕೆ ಆಂಟನಿ ವಾಸವಾಗಿರುವ ಸರಕಾರೀ ಬಂಗಲೆಯ ಮೇಲೂ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.

ಇಲಾಖೆಯ ಅಧ್ಯಕ್ಷರು ಹೇಳುವುದೇನು?
ಸಚಿವರ ಆದೇಶದ ಮೇರೆಗೆ ನಾವು ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದೇವೆ. ಮೂವತ್ತಕ್ಕೂ ಹೆಚ್ಚು ಮಾಜಿ ಸಂಸದರು, ಸಚಿವರು ಬಂಗಲೆ ಇನ್ನೂ ಖಾಲಿ ಮಾಡಲಿಲ್ಲ. ಹೊಸದಾಗಿ ಆಯ್ಕೆಯಾದವರಿಗೆ ತುರ್ತಾಗಿ ಬಂಗಲೆ ನೀಡಬೇಕಾಗಿದೆ. ನಮ್ಮ ನೋಟೀಸುಗಳಿಗೆ ಬೆಲೆಕೊಡದ ಹಿನ್ನಲೆಯಲ್ಲಿ ನೀರು, ವಿದ್ಯುತ್ ಸ್ಥಗಿತಗೊಳಿಸುತ್ತಿದ್ದೇವೆ, ಇಲಾಖೆಯ ಅಧ್ಯಕ್ಷ ಜಲರಾಜ್ ಶ್ರೀವಾಸ್ತವ್.

ಯಡಿಯೂರಪ್ಪ ಪುತ್ರ ಉವಾಚ
ತಂದೆ ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾದ ನಂತರ, ನಾನು ವಾಸವಾಗಿರುವ ಬಂಗಲೆಯನ್ನು ಯಡಿಯೂರಪ್ಪನವರಿಗೆ ನೀಡಬಹುದೆಂದು ತಿಳಿದಿದ್ದೆ. ಈ ಸಂಬಂಧ ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತಾವನೆಯನ್ನೂ ಸಲ್ಲಿಸಿದ್ದೆ, ಸರಕಾರೀ ಬಂಗಲೆಯಿಂದ ಹೊರಬರುತ್ತೇನೆ - ಬಿ ವೈ ರಾಘವೇಂದ್ರ.

ಮೊಹಮ್ಮದ್ ಅಜರುದ್ದೀನ್
2009ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಮೊರದಾಬಾದ್ ಕ್ಷೇತ್ರದಿಂದ ಜಯಗಳಿಸಿದ್ದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, 2014ರ ಚುನಾವಣೆಯಲ್ಲಿ ಜೌನಾಪುರಿಯಾ ಕ್ಷೇತ್ರದಿಂದ ಸೋಲುಂಡಿದ್ದರು. ಆದರೂ, ಅಜರುದ್ದೀನ್ ಬಂಗಲೆ ಖಾಲಿ ಮಾಡಿರಲಿಲ್ಲ. ಈಗ ಅವರ ಸರಕಾರೀ ಬಂಗಲೆಗೂ ಕರೆಂಟ್, ನೀರು ಕಟ್.

ಮಾಜಿ ವಿಮಾನಯಾನ ಖಾತೆ ಸಚಿವರೂ ಪಟ್ಟಿಯಲ್ಲಿದ್ದಾರೆ
ಮಾಜಿ ಕೇಂದ್ರ ವಿಮಾನಯಾನ ಖಾತೆ ಸಚಿವ ಅಜಿತ್ ಸಿಂಗ್ ಬಂಗಲೆಯ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಂತರ ಕಳೆದ ಭಾನುವಾರದಿಂದ ಬಂಗಲೆ ಖಾಲಿ ಮಾಡುವ ಕೆಲಸಕ್ಕೆ ಅಜಿತ್ ಸಿಂಗ್ ಮುಂದಾಗಿದ್ದಾರೆ.

ರಂಪರಾಮಾಯಣ ಮಾಡಿದ ಅಜಿತ್ ಸಿಂಗ್
ನನ್ನ ತಂದೆ ಚೌಧುರಿ ಚರಣ್ ಸಿಂಗ್ ಕಾಲದಿಂದಲೂ ನಾವು ಸರಕಾರೀ ಬಂಗಲೆಯಲ್ಲಿದ್ದೇವೆ. ಈಗ ಇದ್ದಕ್ಕಿದ್ದಂತೇ ಬಂಗಲೆ ಖಾಲಿ ಮಾಡುವುದೆಂದರೆ ಸಾಧ್ಯವಾಗದ ಮಾತು. ಪಿತೃಪಕ್ಷ ಇರುವುದರಿಂದ ನಮಗೆ ಕಾಲಾವಕಾಶ ಬೇಕಿದೆ. ನವರಾತ್ರಿ ಶುರುವಾದ ನಂತರವಷ್ಟೇ ಬಂಗಲೆ ಖಾಲೆ ಮಾಡಲು ಸಾಧ್ಯ ಎಂದು ಮಾಧ್ಯಮದ ಮುಂದೆ ರಂಪರಾಮಾಯಣ ಮಾಡಿದ್ದ ಅಜಿತ್ ಸಿಂಗ್ ಅವರಿಗೆ ಇಲಾಖೆಯ ಅಧಿಕಾರಿಗಳು ಅದು ಏನು ಹೇಳಿದರೋ ಗೊತ್ತಿಲ್ಲ ಪಿತೃಪಕ್ಷದ ಮಾಸದಲ್ಲೇ ಬಂಗಲೆ ಹೆಚ್ಚುಕಮ್ಮಿ ಖಾಲಿ ಮಾಡಿದ್ದಾರೆ.












Click it and Unblock the Notifications