New Aadhaar App: ಹಳೆಯ mAadhaar ಆ್ಯಪ್ಗೆ ಗುಡ್ಬೈ, ಹೊಸ ಭದ್ರತಾ ವೈಶಿಷ್ಟ್ಯ, ಡೌನ್ಲೋಡ್ ಮಾಡುವುದು ಹೇಗೆ
mAadhaar: ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ನ mAadhaar ಅಪ್ಲಿಕೇಶನ್ನ ಶೀಘ್ರದಲ್ಲೇ ಸ್ಥಗಿತಗೊಳಿಸಲು ನಿರ್ಧರಿಸಿದೆ. UIDAIಯ ಹೊಸ ಆಧಾರ್ ಆ್ಯಪ್ನಲ್ಲಿ ಹೆಚ್ಚುವರಿ ಭದ್ರತಾ ಸೌಲಭ್ಯಗಳು ಮತ್ತು QR ಕೋಡ್ ಆಧಾರಿತ ಪರಿಶೀಲನಾ ವ್ಯವಸ್ಥೆ ಇರಲಿದೆ. ಇದರಿಂದ ಸುರಕ್ಷಿತ ಡಿಜಿಟಲ್ ಗುರುತಿನ ಬಳಕೆ ಇನ್ನಷ್ಟು ಸುಲಭವಾಗಲಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರವು ಹಳೆಯ mAadhaar ಆ್ಯಪ್ನ್ನು ಶೀಘ್ರದಲ್ಲೇ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳಲ್ಲಿ ಆಧಾರ್ ಸೇವೆ ಬಳಸುವ ವಿಧಾನದಲ್ಲಿ ದೊಡ್ಡ ಬದಲಾವಣೆ ಆಗಲಿದೆ.
ಬಳಕೆದಾರರಿಗೆ ಹೆಚ್ಚು ಭದ್ರತೆ, ವೈಯಕ್ತಿಕ ಮಾಹಿತಿಯ ಮೇಲೆ ಉತ್ತಮ ನಿಯಂತ್ರಣ ಹಾಗೂ ಆಧುನಿಕ ಡಿಜಿಟಲ್ ಪರಿಶೀಲನಾ ವ್ಯವಸ್ಥೆ ನೀಡುವ ಉದ್ದೇಶದಿಂದ UIDAI ಈ ಕ್ರಮ ಕೈಗೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಲ್ ಮೀಡಿಯಾ ಎಕ್ಸ್ನಲ್ಲಿ ಆಧಾರ್ನ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, mAadhaar ಅಪ್ಲಿಕೇಶನ್ನ ಬದಲಾವಣೆಯನ್ನು ದೃಢಪಡಿಸಲಾಗಿದೆ. ಹೊಸ ಆಧಾರ್ ಆಪ್ಗೆ ಬದಲಾಯಿಸುವಂತೆ ಬಳಕೆದಾರರಿಗೆ ಮನವಿ ಮಾಡಲಾಗಿದೆ. ಅಧಿಕೃತ ಖಾತೆಯಿಂದ ಹಂಚಿಕೊಂಡಿರುವ ಪೋಸ್ಟ್ನಲ್ಲಿ, mAadhaar ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ. ಹೊಸ ಆಧಾರ್ ಆ್ಯಪ್ ಡೌನ್ಲೋಡ್ ಮಾಡಿ, ವೇಗವಾದ ಪ್ರವೇಶ ಮತ್ತು ಸ್ಮಾರ್ಟ್ ಹೊಸ ವೈಶಿಷ್ಟ್ಯಗಳೊಂದಿಗೆ ಸೇವೆಗಳನ್ನು ಸುಲಭವಾಗಿ ಬಳಸಿ. ನಿಮ್ಮ ಆಧಾರ್ ಸೇವೆಯ ಅನುಭವವನ್ನು ಇನ್ನಷ್ಟು ಸರಳ ಹಾಗೂ ಅನುಕೂಲಕರವಾಗಿಸಲು ಈ ಆ್ಯಪ್ ವಿನ್ಯಾಸಗೊಳಿಸಲಾಗಿದೆ.

ಹೊಸ ಅಪ್ಲಿಕೇಶನ್ ಹಳೆಯ mAadhaar ಪ್ಲಾಟ್ಫಾರ್ಮ್ನ ಮರುವಿನ್ಯಾಸವಲ್ಲ. ಇದು ಆಧಾರ್ ಪರಿಶೀಲನೆ ಮತ್ತು ಗುರುತಿನ ಮಾಹಿತಿಯನ್ನು ಹಂಚಿಕೊಳ್ಳುವ ವಿಧಾನದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ಹಳೆಯ ಆಪ್ನಲ್ಲಿ ಪರಿಶೀಲನೆ ಸಮಯದಲ್ಲಿ ಸಂಪೂರ್ಣ ಆಧಾರ್ ವಿವರಗಳು ಕಾಣಿಸುತ್ತಿದ್ದವು. ಆದರೆ ಹೊಸ ಆಪ್ನಲ್ಲಿ ಅಗತ್ಯವಿರುವ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳುವ ವ್ಯವಸ್ಥೆ ಇರಲಿದೆ. ಜೊತೆಗೆ, ಮಾಹಿತಿಗೆ ಪ್ರವೇಶ ನೀಡುವ ಮೊದಲು ಹೆಚ್ಚು ಸುರಕ್ಷಿತ ಗುರುತಿನ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಇದೀಗ mAadhaar ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಹೊಸ ಆಧಾರ್ ಅಪ್ಲಿಕೇಶನ್ QR ಹಂಚಿಕೆ, ಮುಖ ದೃಢೀಕರಣ ಆಯ್ಕೆ
ಸುರಕ್ಷಿತ QR-ಆಧಾರಿತ ಆಧಾರ್ ಹಂಚಿಕೆಯು ಮಹತ್ವದ ಬದಲಾವಣೆ ಆಗಿದೆ. ಈ ವೈಶಿಷ್ಟ್ಯವು ಹೋಟೆಲ್ಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಮತ್ತು ಇತರ ಸೇವಾ ಕೌಂಟರ್ಗಳಲ್ಲಿ ವೈಯಕ್ತಿಕ ಪರಿಶೀಲನೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಪೂರ್ಣ ಆಧಾರ್ ವಿವರಗಳನ್ನು ಬಹಿರಂಗಪಡಿಸುವ ಬದಲು, ಬಳಕೆದಾರರು ಈಗ QR ಪರಿಶೀಲನೆಯ ಮೂಲಕ ಅಗತ್ಯವಿರುವ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಬಹುದಾಗಿದ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ಆಧಾರ್ ದೃಢೀಕರಣ ವ್ಯವಸ್ಥೆಯಲ್ಲೂ ದೊಡ್ಡ ಬದಲಾವಣೆ ಮಾಡಲಾಗಿದೆ. ಇದುವರೆಗೆ ಆಧಾರ್ ಪ್ರವೇಶಕ್ಕಾಗಿ ಮುಖ್ಯವಾಗಿ SMS ಮೂಲಕ ಬರುವ OTP ಪರಿಶೀಲನೆ ಬಳಸಲಾಗುತ್ತಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಗುರುತಿನ ಪರಿಶೀಲನೆಗೆ ಹೆಚ್ಚುವರಿ ಭದ್ರತಾ ವಿಧಾನಗಳನ್ನು ಸೇರಿಸಲಾಗಿದೆ. OTP ಜೊತೆಗೆ, ಬಳಕೆದಾರರು ಬಳಸುವ ಸೇವೆಯ ಆಧಾರದಲ್ಲಿ ಮುಖ ಗುರುತಿನ ಪರಿಶೀಲನೆ (Face Authentication) ಮತ್ತು QR ಕೋಡ್ ಪರಿಶೀಲನೆಯೂ ಅಗತ್ಯವಾಗಬಹುದು. ಡಿಜಿಟಲ್ ಗುರುತಿನ ದುರುಪಯೋಗ ತಡೆಯಲು ಮತ್ತು ಭದ್ರತೆ ಹೆಚ್ಚಿಸಲು ಈ ವ್ಯವಸ್ಥೆ ಪರಿಚಯಿಸಲಾಗಿದೆ ಕೇಂದ್ರ ಸರ್ಕಾರವು ತಿಳಿಸಿದೆ.
ಹೊಸ ಆಧಾರ್ ಆಪ್ನಲ್ಲಿ ಬಳಕೆದಾರರು ತಮ್ಮ ಫಿಂಗರ್ಪ್ರಿಂಟ್, ಮುಖ ಮತ್ತು ಕಣ್ಣಿನ ಭಾಗದ ಮಾಹಿತಿಯನ್ನು ನೇರವಾಗಿ ಲಾಕ್ ಅಥವಾ ನಿರ್ವಹಿಸಬಹುದು. ಇದರಿಂದ ಅನಧಿಕೃತ ಪ್ರವೇಶದ ಅಪಾಯ ಕಡಿಮೆಯಾಗುತ್ತದೆ ಎಂದು UIDAI ತಿಳಿಸಿದೆ. ಹೊಸ ಆಧಾರ್ ಆ್ಯಪ್ ಬಳಸಲು ಮೊದಲು ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಬೇಕು. ನಂತರ ಮೊಬೈಲ್ ಸಂಖ್ಯೆ ಮತ್ತು OTP ಮೂಲಕ ಪರಿಶೀಲನೆ ಮಾಡಿ, PIN ಅಥವಾ ಬಯೋಮೆಟ್ರಿಕ್ ಲಾಕ್ ಅನ್ನು ಸೆಟ್ ಮಾಡಬಹುದು. ಕೆಲವು ಬಳಕೆದಾರರಿಗೆ Face Authentication ಸಹ ಬೇಕಾಗಬಹುದು. ಇದೇ ವೇಳೆ, myAadhaar ಪೋರ್ಟಲ್ನಲ್ಲಿ ಉಚಿತ ಆಧಾರ್ ದಾಖಲೆ ನವೀಕರಣ ಸೇವೆಯನ್ನು ಜೂನ್ 14, 2027ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.














Click it and Unblock the Notifications