ನೆಲಮಂಗಲ-ತುಮಕೂರು ಹೆದ್ದಾರಿ ಕಾಮಗಾರಿ 2025ಕ್ಕೆ ಮುಕ್ತಾಯ, ನಿತಿನ್ ಗಡ್ಕರಿ
ನವದೆಹಲಿ, ಡಿಸೆಂಬರ್, 23: ನೆಲಮಂಗಲ-ತುಮಕೂರು 6 ಲೇನ್ನ ಹೆದ್ದಾರಿ ಕಾಮಗಾರಿ 2025ರ ಆಗಸ್ಟ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಜಗ್ಗೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 6 ಲೇನ್ ಹೆದ್ದಾರಿ ಕಾಮಗಾರಿಯಲ್ಲಿ ತುಮಕೂರು ಬೈಪಾಸ್ ಕಾಮಗಾರಿಯೂ ಕೂಡ ಒಂದಾಗಿದೆ. ಈ ಕಾಮಗಾರಿಯನ್ನು ಎರಡು ಹಂತಗಳಾಗಿ ವಿಭಜಿಸಲಾಗಿದ್ದು, ಮೊದಲ ಹಂತದಲ್ಲಿ ಸರ್ವಿಸ್ ರಸ್ತೆ ಹಾಗೂ ಎರಡನೇ ಹಂತದ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು. ದೇಶದಲ್ಲಿ 2021ರಲ್ಲಿ ಒಟ್ಟು ಶೇಕಡಾ 54ರಷ್ಟು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿಯೇ ಅಪಘಾತಗಳು ಸಂಭವಿಸಿವೆ ಎಂದರು. ಇನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಶ್ನೆಗೆ ಉತ್ತರಿಸಿದ ಚಿವರು, ಕರ್ನಾಟಕದಲ್ಲಿ ಈ ವರ್ಷದ ಮಳೆಗಾಲದಲ್ಲಿ ಹಾನಿಗೀಡಾದ ರಾಷ್ಟ್ರೀಯ ಹೆದ್ದಾರಿಗಳನ್ನು ಪರಿಶೀಲನೆ ನಡೆಸಲಾಗಿದೆ. ಹಾನಿಗೀಡಾದ ರಸ್ತೆಗಳನ್ನು ಪರಿಶೀಲನೆ ನಡೆಸಿ ದುರಸ್ತಿ ಮಾಡಲಾಗಿದೆ. ದುರಸ್ತಿ ಮಾಡಿದ ಹೆದ್ದಾರಿಗಳು ಈಗ ಸಂಚಾರಕ್ಕೆ ಯೋಗ್ಯವಾಗಿವೆ. ಕರ್ನಾಟಕದಲ್ಲಿ ಹೆದ್ದಾರಿಗಳ ನಿರ್ವಹಣೆಗೆ ಈ ವರ್ಷ 52.51 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಪೈಕಿ 19.08 ಕೋಟಿ ರೂಪಾಯಿಯನ್ನು ಈಗಾಗಲೇ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಮಾಜಿ ಲಾಯರ್ ಸಿದ್ದರಾಮಯ್ಯ; ಟ್ವೀಟ್ ಬಾಣ ಬಿಟ್ಟ ಕರ್ನಾಟಕ ಬಿಜೆಪಿ!
ಅವೈಜ್ಞಾನಿಕ ರಸ್ತೆ ಕಾಮಗಾರಿ, ಜನರಿಗೆ ತೊಂದರೆ
ಇನ್ನು ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿದೆ. ಇದರಿಂದ ರೈತರು ಹಾಗೂ ಜನರಿಗೆ ಸಮಸ್ಯೆಗಳು ಎದುರಾಗುತ್ತಲೇ ಇವೆ ಎಂದು ಸಂಸದೆ ಸುಮಲತಾ ಅಂಬರೀಶ್ ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ತಿಳಿಸಿದ್ದರು. ಸಂಸತ್ನಲ್ಲಿಯೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಕುರಿತು ಮಾತನಾಡಿದ್ದ ಸುಮಲತಾ ಅಂಬರೀಶ್, ಮತ್ತೆ ಖುದ್ದು ನಿತಿನ್ ಗಡ್ಕರಿಯರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.
ತಾಂತ್ರಿಕ ಹಾಗೂ ವಿನ್ಯಾಸ ಲೋಪದೋಷಗಳಾದ ಅವೈಜ್ಞಾನಿಕ ಚರಂಡಿ, ಸರ್ವಿಸ್ ರಸ್ತೆ ವಿನ್ಯಾಸ, ವಿವಿಧ ಭಾಗಗಳಲ್ಲಿ ಹೆದ್ದಾರಿಗೆ ಅಡ್ಡಲಾಗಿ ಕೆಳ ಸೇತುವೆಗಳ ನಿರ್ಮಾಣ ಹಾಗೂ ಇದರಿಂದ ರೈತರಿಗೆ ಆಗುವ ಸಮಸ್ಯೆಗಳನ್ನು ವಿವರಿಸಿದರು. ಅಲ್ಲದೇ ಈಗಾಗಲೇ ನೂತನವಾಗಿ ನಿರ್ಮಾಣವಾಗಿರುವ ಸೇತುವೆಗಳು ಬಿರುಕು ಬಿಟ್ಟಿರುವುದು ಸಹ ಕಂಡುಬಂದಿದೆ. ಈ ಕಳಪೆ ಗುಣಮಟ್ಟದ ಕಾಮಗಾರಿಯನ್ನು ಆದಷ್ಟು ಬೇಗ ಸರಿಪಡಿಸಬೇಕು. ಜೊತೆಗೆ ಈ ಬಾರಿಯ ಮಳೆಯಿಂದ ರೈತರಿಗೆ ಹಾಗೂ ಹೆದ್ದಾರಿ ಬಳಕೆದಾರರಿಗೆ ತೊಂದರೆ ಉಂಟಾಗಿದೆ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಮನವಿ ಮಾಡಿದರು.