ಮುಂಗಾರು ಅಧಿವೇಶನ; ಸಂಸತ್ ಭವನ ಸ್ಯಾನಿಟೈಸ್ಗೆ ವಿಶೇಷ ತಂಡ
ನವದೆಹಲಿ, ಸೆಪ್ಟೆಂಬರ್ 13: ಸೋಮವಾರದಿಂದ ಸಂಸತ್ನ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ. ಕೋವಿಡ್ ಭೀತಿಯ ನಡುವೆ ಅಧಿವೇಶನ ನಡೆಯಲಿದ್ದು, ಎನ್ಡಿಎಂಸಿ ಸಂಸತ್ ಭವನದ ಸ್ವಚ್ಛತೆಗೆ ವಿಶೇಷ ತಂಡವನ್ನು ರಚನೆ ಮಾಡಿದೆ.
23 ಮಹತ್ವದ ಮಸೂದೆಗಳ ಕುರಿತು ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆದು, ಅಂಗೀಕಾರ ಪಡೆಯಬೇಕಿದೆ. ಎಲ್ಲಾ ಸಂಸತ್ ಸದಸ್ಯರಿಗೂ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
ಕೋವಿಡ್ ಭೀತಿ ಹಿನ್ನಲೆಯಲ್ಲಿ ಸಂಸತ್ ಭವನದ ಸ್ಚಚ್ಛತೆಗೆ ನವದೆಹಲಿ ಮುನ್ಸಿಪಲ್ ಕೌನ್ಸಿಲ್ 40 ಸದಸ್ಯರ ವಿಶೇಷ ತಂಡ ರಚನೆ ಮಾಡಿದೆ. ಒಂದು ಹಂತದ ಸ್ಯಾನಿಟೈಸ್ ಪ್ರಕ್ರಿಯೆ ಈಗಾಗಲೇ ಅಂತ್ಯಗೊಂಡಿದೆ.

ಸಂಸತ್ ಭವನದ ಸಿಬ್ಬಂದಿಗೆ 10 ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರ ತನಕ ಅಧಿವೇಶನ ನಡೆಯಲಿದ್ದು, ನಿರಂತರವಾಗಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುತ್ತದೆ.
ಪ್ರತಿ ದಿನ ಬೆಳಗ್ಗೆ ಅಧಿವೇಶನ ಆರಂಭವಾಗುವ ಮುನ್ನ, ಒಂದು ವೇಳೆ ಕಲಾಪ ಮುಂದೂಡಲ್ಪಟ್ಟರೆ, ಕಲಾಪ ಅಂತ್ಯಗೊಂಡ ಬಳಿಕ ಸ್ಯಾನಿಟೈಸ್ ಮಾಡುವ ಕಾರ್ಯ ನಡೆಯಲಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಪ್ರಶೋತ್ತರ ಕಲಾಪ ಇರುವುದಿಲ್ಲ. ಶೂನ್ಯ ವೇಳೆ ಎಂದಿನಂತೆ ಇರಲಿದ್ದು, ಈ ಸಮಯದಲ್ಲಿ ಸಂಸದರು ಬಹುಮುಖ್ಯ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರ ತನಕ ಯಾವುದೇ ರಜೆ ಇಲ್ಲದೆ ಪ್ರತಿ ದಿನ ಕಲಾಪ ನಡೆಯಲಿದೆ. ಸೆ. 14ರಂದು ಬೆಳಗ್ಗೆ 9ರಿಂದ 1ರ ತನಕ ಲೋಕಸಭೆ ಕಲಾಪ, ಮಧ್ಯಾಹ್ನ 3 ರಿಂದ 7 ಗಂಟೆ ತನಕ ರಾಜ್ಯಸಭೆ ಕಲಾಪ ನಡೆಯಲಿದೆ.
ಸೆ.15ರಿಂದ ಬೆಳಗ್ಗೆ 9 ರಿಂದ 1ರ ತನಕ ರಾಜ್ಯಸಭೆ, ಮಧ್ಯಾಹ್ನ 3 ರಿಂದ 7ರ ತನಕ ಲೋಕಸಭೆ ಕಲಾಪ ನಡೆಯಲಿದೆ. ಸಂಸದರು ಕುಳಿತುಕೊಳ್ಳಲು ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications