ಭಾರತದ 30ಕ್ಕೂ ಹೆಚ್ಚು ಕಡೆಗಳಲ್ಲಿ ಪಿಎಫ್ಐ ಸದಸ್ಯರ ಮೇಲೆ ಎನ್ಐಎ ದಾಳಿ
ನವದೆಹಲಿ, ಸೆಪ್ಟೆಂಬರ್ 27: ದೇಶದ 30ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯರ ಮೇಸೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಮಂಗಳವಾರವೂ ರಾಷ್ಟ್ರೀಯ ತನಿಖಾ ಸಂಸ್ಥೆಯು ಪಶ್ಚಿಮ ಉತ್ತರ ಪ್ರದೇಶದ ಹಲವು ಸ್ಥಳಗಳಲ್ಲಿ ಪಿಎಫ್ಐ ಸದಸ್ಯರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತು. ಈ ಸ್ಥಳಗಳಲ್ಲಿ ಮೀರತ್ ಮತ್ತು ಬುಲಂದ್ಶಹರ್ ನಗರಗಳು ಸೇರಿವೆ. ಈ ದಾಳಿಗೆ ಸಂಬಂಧಿಸಿದಂತೆ ಅಜ್ಞಾತ ಸಂಖ್ಯೆಯ ಜನರನ್ನು ಬಂಧಿಸಲಾಗಿದೆ.
ಐಸಿಸ್ಗೆ ಮುಸ್ಲಿಂ ಯುವಕರನ್ನು ಸೇರಿಸುವುದು ಪಿಎಫ್ಐ ಕೆಲಸ: ಎನ್ಐಎ
ಕಳೆದ ಸೆಪ್ಟೆಂಬರ್ 22ರಂದು ಈ ಪಿಎಫ್ಐ ಸದಸ್ಯರ ವಿರುದ್ಧ ಮಾಹಿತಿಯನ್ನು ಸ್ವೀಕರಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ದೇಶದಾದ್ಯಂತ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಪಿಎಫ್ಐ ಗುಂಪಿನ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ.
ಎಟಿಎಸ್ ತಂಡದಿಂದ ಮುಂದುವರಿದ ದಾಳಿ
ಒಂದು ಕಡೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ದಾಳಿ ನಡೆಸುತ್ತಿದ್ದರೆ, ಅದೇ ಪಿಎಫ್ಐ ಸದಸ್ಯರ ಮೇಲೆ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕರ್ನಾಟಕ, ದೆಹಲಿ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶದ ಹಲವು ಕಡೆಗಳಲ್ಲಿ ಎಟಿಎಸ್ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.
ಅಸ್ಸಾಂನಲ್ಲಿ 11 ಆರೋಪಿಗಳು ಅರೆಸ್ಟ್
ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ 11 ಪಿಎಫ್ಐ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ನಾಗರ್ಬೆರಾ ಪ್ರದೇಶದಿಂದ ಪಿಎಫ್ಐ ಜೊತೆ ನಂಟು ಹೊಂದಿರುವ ನಾಲ್ವರನ್ನು ಬಂಧಿಸಲಾಗಿದೆ. ಈ ಜಿಲ್ಲೆಯ ಹಲವೆಡೆ ಪಿಎಫ್ಐ ವಿರುದ್ಧ ನಮ್ಮ ಕಾರ್ಯಾಚರಣೆ ನಡೆಯುತ್ತಿದೆ,'' ಎಂದು ಅಸ್ಸಾಂ ಪೊಲೀಸ್ನ ಎಡಿಜಿಪಿ (ವಿಶೇಷ ಶಾಖೆ) ಹಿರೇನ್ ನಾಥ್ ಹೇಳಿದ್ದಾರೆ. ದೆಹಲಿಯಲ್ಲಿ ಒಬ್ಬ ಪಿಎಫ್ಐ ಸದಸ್ಯನನ್ನು ಅರೆಸ್ಟ್ ಮಾಡಲಾಗಿದೆ.
ನಾಸಿಕ್ ಪೊಲೀಸರಿಂದ 13 ಮಂದಿ ಅರೆಸ್ಟ್
ಮಹಾರಾಷ್ಟ್ರದಲ್ಲಿ ನಾಸಿಕ್ ಪೊಲೀಸರು ಪಿಎಫ್ಐನೊಂದಿಗೆ ಸಂಪರ್ಕ ಹೊಂದಿದ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಈ ಎಲ್ಲಾ ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಇದರ ಜೊತೆಗೆ ಮಾಲೆಗಾಂವ್ ಪಟ್ಟಣದಲ್ಲಿ ಇನ್ನೂ ದಾಳಿಯನ್ನು ಮುಂದುವರಿಸಿದ್ದು, 13 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಎಎನ್ಐಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಎಟಿಎಸ್ ಮತ್ತು ಯುಪಿ ಎಸ್ಟಿಎಫ್ ತಂಡವು ಮಂಗಳವಾರ ರಾಜ್ಯಾದ್ಯಂತ ದಾಳಿ ನಡೆಸಿದ್ದು, 12ಕ್ಕೂ ಹೆಚ್ಚು ಪಿಎಫ್ಐ ಮುಖಂಡರನ್ನು ವಶಕ್ಕೆ ತೆಗೆದುಕೊಂಡಿದೆ. ಪೊಲೀಸ್ ಮೂಲಗಳ ಪ್ರಕಾರ ನಿಜಾಮುದ್ದೀನ್, ಶಾಹೀನ್ ಬಾಗ್ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಕೇಂದ್ರ ಏಜೆನ್ಸಿ ಮತ್ತು ದೆಹಲಿ ಪೊಲೀಸರು ಜಂಟಿ ದಾಳಿಗಳನ್ನು ನಡೆಸಿದ್ದು, ಪಿಎಫ್ಐಗೆ ಸಂಬಂಧಿಸಿದವರನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.
ಕರ್ನಾಟಕದಲ್ಲಿ ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರು ವಶ
ಕರ್ನಾಟಕದಲ್ಲಿ ಎಸ್ಡಿಪಿಐ ಯಾದಗಿರಿ ಜಿಲ್ಲಾಧ್ಯಕ್ಷ ಸೇರಿದಂತೆ 75ಕ್ಕೂ ಹೆಚ್ಚು ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರು ಮತ್ತು ಮುಖಂಡರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಬೆಂಗಳೂರು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ರಾಜ್ಯಾದ್ಯಂತ ಪೊಲೀಸರು ದಾಳಿ ನಡೆಸುತ್ತಿದ್ದು, ಸೆಕ್ಷನ್ 108, 151 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ವಿಭಾಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕರ್ನಾಟಕ ಘಟಕವು ಸೋಮವಾರ ತನ್ನ ಸದಸ್ಯರ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸಿದ ದಾಳಿಯನ್ನು ಖಂಡಿಸಿತ್ತು. "ಕೋಮು ದ್ವೇಷದ ಕೃತ್ಯಗಳಿಗಾಗಿ" ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಅಂಗಸಂಸ್ಥೆಗಳ ಮೇಲೆ ಕೇಂದ್ರೀಯ ಸಂಸ್ಥೆಗಳು ಇನ್ನೂ ಏಕೆ ದಾಳಿ ನಡೆಸಿಲ್ಲ ಎಂದು ಪ್ರಶ್ನೆ ಮಾಡಿತ್ತು.