ನಾನು ಇಂದಿರಾಗಾಂಧಿ ಸೊಸೆ ನಾನೇಕೆ ಹೆದರಲಿ: ಸೋನಿಯಾ
ನವದೆಹಲಿ, ಡಿ.08: ನ್ಯಾಷನಲ್ ಹೆರಾಲ್ಡ್ ಹಗರಣದ ವಿಚಾರಣೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಗೈರು ಹಾಜರಾಗಿದ್ದಾರೆ. ಸಮನ್ಸ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರೂ ಎಲ್ಲಾ ಆರೋಪಿಗಳು ಡಿ.19ರಂದು ಕೋರ್ಟಿಗೆ ಕಟಕಟೆಯಲ್ಲಿ ನಿಲ್ಲಬೇಕು ಎಂದು ಕೋರ್ಟ್ ಆದೇಶಿಸಿದೆ.
ಸುಮಾರು 5,000 ಕೋಟಿ ರು ಮೊತ್ತದ ಅವ್ಯವಹಾರದ ತನಿಖೆಯನ್ನು ಜಾರಿ ನಿರ್ದೇಶನಾಲಯ ಪುನರ್ ಆರಂಭಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸದಂತೆ ಸೋನಿಯಾ ಹಾಗೂ ರಾಹುಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿತ್ತು. ಡಿ.8ರಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರೆ ಆರೋಪಿಗಳು ಕೋರ್ಟಿಗೆ ಹಾಜರಾಗಬೇಕಿತ್ತು. [ನ್ಯಾಷನಲ್ ಹೆರಾಲ್ಡ್ ಕೇಸ್ : ಸೋನಿಯಾ ಹಾಗೂ ರಾಹುಲ್ ಗೆ ಹಿನ್ನಡೆ]
ಆದರೆ, ಖುದ್ದು ಹಾಜರಾತಿಯಿಂದ ವಿನಾಯತಿ ಪಡೆಯುವಲ್ಲಿ ವಿಫಲರಾದರೂ ಡಿ.19ರ ತನಕ ರಿಲೀಫ್ ಪಡೆದುಕೊಂಡಿದ್ದಾರೆ. ಡಿ. 19ರಂದು ಮಧ್ಯಾಹ್ನ 3 ಗಂಟೆಗೆ ಪ್ರಮುಖ ಆರೋಪಿ ಸೋನಿಯಾ ಗಾಂಧಿ ಸೇರಿದಂತೆ ಇತರೆ ಆರೋಪಿಗಳು ಕೋರ್ಟಿಗೆ ಹಾಜರಾಗಿ ವಿಚಾರಣೆ ಎದುರಿಸಬೇಕು ಎಂದು ಆದೇಶಿಸಲಾಗಿದೆ.

ಸೋನಿಯಾ ಪ್ರತಿಕ್ರಿಯೆ: 'ನಾನೇಕೆ ಹೆದರಲಿ ನಾನು ಇಂದಿರಾಗಾಂಧಿ ಅವರ ಸೊಸೆ. ನಾನು ಯಾರಿಗೂ ಹೆದರುವ ಅಗತ್ಯವಿಲ್ಲ. ಕಾನೂನಿನ ಮೇಲೆ ನಮಗೆ ಗೌರವವಿದೆ' ಎಂದಿದ್ದಾರೆ. ಸದ್ಯಕ್ಕೆ ಸಂಸತ್ತಿನ ಉಭಯ ಸದನಗಳಲ್ಲಿ ನ್ಯಾಷನಲ್ ಹೆರಾಲ್ಡ್ ಸುದ್ದಿ ಓಡುತ್ತಿದೆ.
ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ವಿಚಾರಣೆಗೆ ಹಾಜರಾಗುವಂತೆ ದೆಹಲಿ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿ, ವಿಚಾರಣೆಗೆ ಖುದ್ದು ಹಾಜರಾಗುವಂತೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಸುನಿಲ್ ಗೌರ್ ಅವರು ಹೊಸ ದಿನಾಂಕ ನಿಗದಿ ಪಡಿಸಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂ ಅವರು ಸ್ಥಾಪಕ ಸಂಪಾದಕರಾಗಿದ್ದ 1938ರಲ್ಲಿ ಸ್ಥಾಪಿತವಾದ 'ನ್ಯಾಷನಲ್ ಹೆರಾಲ್ಡ್' ಪತ್ರಿಕೆಗೆ ಸೇರಿದ ಸುಮಾರು 5,000 ಕೋಟಿ ರುಪಾಯಿ ಮೌಲ್ಯದ ಆಸ್ತಿ ಕಬಳಿಸಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಾರ್ವಜನಿಕ ಕಂಪನಿಯನ್ನು ಖಾಸಗಿ ಕಂಪನಿಯಾಗಿ ಮಾರ್ಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಅವರು ದೂರು ನೀಡಿದ್ದರು. (ಒನ್ ಇಂಡಿಯಾ ಸುದ್ದಿ)












Click it and Unblock the Notifications