'ಡಿವೈಡರ್ ಇನ್ ಚೀಫ್' ಎಂದು ಜರಿದ ಪತ್ರಕರ್ತನ ವಿಶ್ವಾಸಾರ್ಹತೆ ಪ್ರಶ್ನಿಸಿದ ಮೋದಿ
ನವದೆಹಲಿ, ಮೇ 18: ಅಂತಾರಾಷ್ಟ್ರೀಯ ಪ್ರತಿಷ್ಠಿತ ನಿಯತಕಾಲಿಕೆ 'ಟೈಮ್'ನಲ್ಲಿ ತಮ್ಮನ್ನು 'ಡಿವೈಡರ್-ಇನ್-ಚೀಫ್' ಎಂದು ಟೀಕಿಸಿದ್ದ ಪತ್ರಕರ್ತ ಆತಿಶ್ ತಸೀರ್ ಅವರ ವಿಶ್ವಾಸಾರ್ಹತೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ವಿವಾದಾತ್ಮಕ ಲೇಖನ ಪ್ರಕಟವಾಗಿ ಒಂದು ವಾರದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
'ಟೈಮ್' ಮುಖಪುಟದಲ್ಲಿ ಮೋದಿ 'ಇಂಡಿಯಾಸ್ ಡಿವೈಡರ್ ಇನ್ ಚೀಫ್'
'ಟೈಮ್ ಮ್ಯಾಗಜೀನ್ ವಿದೇಶದ್ದು. ಅದರ ಬರಹಗಾರ ತಾನು ಪಾಕಿಸ್ತಾನದ ರಾಜಕೀಯ ಕುಟುಂಬದಿಂದ ಬಂದಿರುವುದಾಗಿ ಸ್ವತಃ ಹೇಳಿಕೊಂಡಿದ್ದಾನೆ. ಆತನ ವಿಶ್ವಾಸಾರ್ಹತೆಗೆ ಇಷ್ಟೇ ಸಾಕು' ಎಂದು ಮೋದಿ ಹೇಳಿದ್ದಾರೆ.
ಕಾದಂಬರಿಕಾರ, ಪತ್ರಕರ್ತ ಆತಿಶ್ ತಸೀರ್ ಬರೆದ ಮುಖಪುಟದ ಲೇಖನದಲ್ಲಿ, 'ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಹಿಂದೆಂದಿಗಿಂತಲೂ ವಿಭಜನೆಯಾಗಿದೆ. ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು ಉದ್ದೇಶಪೂರ್ವಕವಾಗಿ ಹಿಂದೂ ಮತ್ತು ಮುಸ್ಲಿಮರನ್ನು ವಿಭಜನೆ ಮಾಡುತ್ತಿದೆ. ಮೋದಿಯ ವಿಜಯವು ಅಪನಂಬಿಕೆಯ ಭಾವಾಭಿವ್ಯಕ್ತಿ. ನೆಹರೂ ಅವರ ಜಾತ್ಯತೀತತೆ, ಸಮಾಜವಾದದ ಮೇಲೆ ದಾಳಿ ನಡೆಸಲಾಗಿದೆ. ಮೋದಿ "ಕಾಂಗ್ರೆಸ್ ಮುಕ್ತ" ಭಾರತದ ಬಗ್ಗೆ ಮಾತನಾಡುತ್ತಾರೆ. ಹಿಂದೂ-ಮುಸ್ಲಿಮರ ಮಧ್ಯೆ ಸೋದರತ್ವ ಬೆಳೆಸುವ ಯಾವ ಇಚ್ಛೆಯನ್ನು ಅವರು ವ್ಯಕ್ತಪಡಿಸಿಲ್ಲ ಎಂದು ಟೀಕಿಸಲಾಗಿತ್ತು.
ಪ್ರಧಾನಿಯಾದ ನಂತರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲೂ ಭಾಷಣವೇ ಮಾಡಿದ ಮೋದಿ!
ಈ ಲೇಖನಕ್ಕೆ ಮೋದಿ ಅವರನ್ನು ಧರ್ಮಗಳ ವಿಭಜನೆಯ ನೇತೃತ್ವ ವಹಿಸುವವರು ಎಂಬ ಅರ್ಥ ಬರುವಂತೆ 'ಡಿವೈಡರ್ ಇನ್ ಚೀಫ್' ಎಂಬ ಶೀರ್ಷಿಕೆ ನೀಡಲಾಗಿತ್ತು.
ಗುಂಪು ಹತ್ಯೆಗಳು, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರನ್ನು ನೇಮಿಸಿದ್ದು, ಮಾಲೆಗಾಂವ್ ಬಾಂಬ್ ಸ್ಫೋಟ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಟಿಕೆಟ್ ನೀಡಿದ್ದು, ಮುಂತಾದ ಅಂಶಗಳನ್ನು ಅವರು ಪ್ರಸ್ತಾಪಿಸಿದ್ದರು.
ಬಿಜೆಪಿ 300ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಲಿದೆ: ಮೋದಿ
ಈ ಲೇಖನವನ್ನು ಬಿಜೆಪಿ ಖಂಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನ ಇದು ಎಂದಿದ್ದ ಬಿಜೆಪಿ, ಪತ್ರಕರ್ತ ತವ್ಲೀನ್ ಸಿಂಗ್ ಮತ್ತು ಪಾಕಿಸ್ತಾನಿ ರಾಜಕಾರಣಿ, ಉದ್ಯಮಿ ಸಲ್ಮಾನ್ ತಸೀರ್ ಅವರ ಮಗನಾಗಿರುವ ಆತಿಶ್ ತಸೀರ್ ಪಾಕಿಸ್ತಾನದ ಅಜೆಂಡಾವನ್ನು ಬಿಂಬಿಸಿದ್ದಾರೆ ಎಂದು ಆರೋಪಿಸಿತ್ತು.