NDAಗೆ ಸಶಸ್ತ್ರ ಪಡೆಗಳ ಕೆಡೆಟ್ಗಳಂತೆಯೇ ಮಹಿಳೆಯರನ್ನು ಸ್ವಾಗತಿಸಿ: ನರವಾಣೆ
ನವದೆಹಲಿ, ಅಕ್ಟೋಬರ್ 29: ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಭಾರತೀಯ ಸಶಸ್ತ್ರ ಪಡೆಗಳ ಕೆಡೆಟ್ಗಳಂತೆಯೇ ಮಹಿಳಾ ಕೆಡೆಟ್ಗಳನ್ನು ಸ್ವಾಗತಿಸುವಂತೆ ಸಿಬ್ಬಂದಿ ಬಳಿ ಸಿಬ್ಬಂ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ತಿಳಿಸಿದ್ದಾರೆ.
ಎಲ್ಲಾ ಮೂರು ಪಡೆಗಳು -ವಾಯುಪಡೆ, ನೌಕಾಪಡೆ ಮತ್ತು ಭೂಸೇನೆ ಒಗ್ಗೂಡಿ ಕೆಲಸ ಮಾಡುವ ಮಹತ್ವದ ಬಗ್ಗೆ ಮಾತನಾಡಿದ ನರವನೆ, ಯಾವುದೇ ಒಂದು ಸೇವೆಯು ಆಧುನಿಕ ಯುದ್ಧಗಳಲ್ಲಿ ಹೋರಾಡಲು ಮತ್ತು ಗೆಲ್ಲಲು ಸಾಧ್ಯವಿಲ್ಲ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ನೀವು ಕಂಡುಕೊಂಡ ಬಂಧಗಳು ಸಾಮಾಜಿಕವಾಗಿ ಮಾತ್ರವಲ್ಲದೆ ವೃತ್ತಿಪರ ರಂಗದಲ್ಲಿಯೂ ಕಾರ್ಯ ನಿರ್ವಹಿಸಬೇಕು ಎಂದರು.
ಮಹಿಳೆಯರು ಎನ್ಡಿಎ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಿದ ಸುಪ್ರೀಂ
ಯುದ್ಧಗಳ ಬದಲಾಗುತ್ತಿರುವ ಸ್ವರೂಪವನ್ನು ಎದುರಿಸಲು ಅಕಾಡೆಮಿಯಿಂದ ಹೊರಬಂದ ನಂತರವೂ ವೃತ್ತಿಪರ ಶಿಕ್ಷಣದ ಮೂಲಕ ನಿರಂತರವಾಗಿ ಜ್ಞಾನವನ್ನು ಪಡೆಯುವ ಅಗತ್ಯವನ್ನು ಸೇನಾ ಮುಖ್ಯಸ್ಥರು ಒತ್ತಿ ಹೇಳಿದರು.
ಮಹಾರಾಷ್ಟ್ರದ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ 141ನೇ ಕೋರ್ಸ್ನ ಪಾಸಿಂಗ್ ಔಟ್ ಪರೇಡ್ ಉದ್ದೇಶಿಸಿ ಮಾತನಾಡಿದ ನರವನೆ, "ನಾವು ಮಹಿಳಾ ಕೆಡೆಟ್ಗಳಿಗಾಗಿ ಎನ್ಡಿಎಯ ಗೇಟ್ಗಳನ್ನು ತೆರೆಯುತ್ತಿದ್ದಂತೆ, ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಭಾರತೀಯ ಸಶಸ್ತ್ರ ಪಡೆಗಳ ನೀವೆಲ್ಲರೂ ಅದೇ ನ್ಯಾಯಯುತ ರೀತಿಯಲ್ಲಿ ಅವರನ್ನು ಸ್ವಾಗತಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ಹೇಳಿದರು.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಮಹಿಳೆಯರ ಸೇರ್ಪಡೆಗೆ ಅನುಮತಿ ನೀಡಲಾಗಿದ್ದು, ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ಮೇ 2022 ರೊಳಗೆ ಯುಪಿಎಸ್ಸಿ ಮೂಲಕ ಪ್ರಕಟಿಸುವುದಾಗಿ ಕೇಂದ್ರ ರಕ್ಷಣಾ ಸಚಿವಾಲಯವು ಸುಪ್ರೀಂಕೋರ್ಟ್ಗೆ ಕಳೆದ ತಿಂಗಳು ತಿಳಿಸಿತ್ತು.
ಮಹಿಳೆಯರಿಗೆ ರಕ್ಷಣಾ ಹಾಗೂ ನೌಕಾಪಡೆ ಅಕಾಡೆಮಿ ಪರೀಕ್ಷೆಗೆ ಹಾಜರಾಗಲು ಅನುಮತಿಯಿದೆ. ಎನ್ಡಿಎ ಪರೀಕ್ಷೆ ತರಬೇತಿಯನ್ನು ಅವರು ಪಡೆಯಬಹುದಾಗಿದೆ. ಸಂಬಂಧಿತ ಪ್ರಾಧಿಕಾರಗಳಿಗೆ ಅಧಿಸೂಚನೆ ಹೊರಡಿಸಬೇಕು, ಹಾಗೆಯೇ ಅಗತ್ಯ ಪ್ರಚಾರ ನೀಡಬೇಕು ನ್ಯಾಯಪೀಠ ಕೇಂದ್ರ ಲೋಕಸೇವಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ರಾಷ್ಟ್ರೀಯ ಭದ್ರತಾ ಪಡೆಯಲ್ಲಿ ಲಿಂಗಸಮಾನತೆ ಸಾಧಿಸಲು ಇದು ಮಹತ್ವದ ಹೆಜ್ಜೆ ಎನ್ನಲಾಗಿದೆ. ಈ ಪರೀಕ್ಷೆಯ ಫಲಿತಾಂಶ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಮಹಿಳಾ ಅಭ್ಯರ್ಥಿಗಳು ನ್ಯಾಯಾಲಯದ ಮುಂದಿನ ಆದೇಶಗಳಿಗೆ ಒಳಪಟ್ಟು ಪರೀಕ್ಷೆ ಬರೆಯಬಹುದು ಎಂದು ಸ್ಪಷ್ಟನೆ ನೀಡಿತ್ತು.
ಎನ್ಡಿಎ ಹಾಗೂ ನೌಕಾದಳ ಅಕಾಡೆಮಿ ಪರೀಕ್ಷೆಗಳಿಗೆ ಹಾಜರಾಗಲು ಮಹಿಳಾ ಅಭ್ಯರ್ಥಿಗಳಿಗೆ ಅನುಮತಿ ನೀಡದ ಕೇಂದ್ರದ ನೀತಿಯನ್ನು ಪ್ರಶ್ನಿಸಿ ಈ ಮುನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಈ ಅರ್ಜಿ ಉಲ್ಲೇಖಿಸಿ ಮಾತನಾಡಿದ ನ್ಯಾಯಪೀಠ, "ಭೂಸೇನೆ ಹಾಗೂ ನೌಕಾಪಡೆಯಲ್ಲ ಮಹಿಳೆಯರನ್ನು ಕಾಯಂ ಸೇವೆಗೆ ನಿಯೋಜಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹೀಗಿದ್ದರೂ ಸರ್ಕಾರ ಈ ನೀತಿ ಅನುಸರಿಸಲು ಕಾರಣವೇನು" ಎಂದು ಪ್ರಶ್ನಿಸಿತ್ತು.
ಪರೀಕ್ಷೆಯಲ್ಲಿ ಹೆಣ್ಣು-ಗಂಡೆಂಬ ತಾರತಮ್ಯ ನೀತಿಯನ್ನು ಏಕೆ ಅನುಸರಿಸಲಾಗುತ್ತಿದೆ ಎಂದು ಕೇಂದ್ರವನ್ನು ನ್ಯಾಯಾಲಯ ಪ್ರಶ್ನೆ ಮಾಡಿದೆ. ಇದು ಲಿಂಗತಾರತಮ್ಯ ಎಂದು ಉಲ್ಲೇಖಿಸಿದ್ದು, ಸಹ ಶಿಕ್ಷಣ ಅಷ್ಟೊಂದು ಸಮಸ್ಯಾತ್ಮಕವೇ ಎಂದಿದೆ. ಸೇನೆಯಲ್ಲಿ ಮಹಿಳೆಗೆ ಅವಕಾಶ ಇದ್ದಾಗ, ಎನ್ಡಿಎ ಪರೀಕ್ಷೆ ಬರೆಯಲು ಏಕೆ ತಡೆಯಲಾಗುತ್ತಿದೆ ಎಂದು ಕೇಳಿದ್ದು, ಸರ್ಕಾರ ಯಾವಾಗಲೂ ನ್ಯಾಯಾಂಗದ ಮಧ್ಯಸ್ಥಿಕೆ ಬಯಸಬಾರದು ಎಂದು ಹೇಳಿತ್ತು.