ಆಹಾ, ಎಂಥ ಸುದ್ದಿ! ಉರ್ದುವಿನಲ್ಲಿ ರಾಮಾಯಣ ಬರೆದ ಮುಸ್ಲಿಂ ಮಹಿಳೆ
ಕಾನ್ಪುರ, ಜೂನ್ 30: 'ಕೋಮು ಸೌಹಾರ್ದಕ್ಕೆ ಸಾಕ್ಷಿ ಎಂಬಂತೆ ಮುಸ್ಲಿಂ ಮಹಿಳೆಯೊಬ್ಬರು ಉರ್ದುವಿನಲ್ಲಿ ರಾಮಾಯಣ ಬರೆದಿದ್ದಾರೆ!' ಉತ್ತರ ಪ್ರದೇಶದ ಕಾನ್ಪುರದ ಮುಸ್ಲಿಂ ಮಹಿಳೆಯೊಬ್ಬರು ಹಿಂದುಗಳ ಮಹಾಗ್ರಂಥವಾದ 'ರಾಮಾಯಣ'ದ ಉನ್ನತ ನೀತಿಯನ್ನು ಮುಸ್ಲಿಮರಿಗೆ ಅರ್ಥಮಾಡಿಸುವ ಸಲುವಾಗಿ ಉರ್ದುವಿನಲ್ಲಿ ರಾಮಾಯಣ ಬರೆದಿದ್ದಾರೆ.
ಡಾ. ಮಹಿ ತಲಾತ್ ಸಿದ್ದಿಖಿ ಎಂಬುವವರು ಇಲ್ಲಿನ ಪ್ರೇಮನಗರದ ನಿವಾಸಿ. ಎರಡು ವರ್ಷಗಳ ಹಿಂದೆ ಅವರಿಗೆ ಬದ್ರಿ ನಾಥ್ ತಿವಾರಿ ಎಮಂಬುವವರು ರಾಮಾಯಣದ ಪುಸ್ತಕ ನೀಡಿದ್ದರು. ಇದನ್ನು ಓದಿ ಪ್ರಭಾವಿತರಾದ ಮಹಿ, ಅದನ್ನು ಉರ್ದುವಿನಲ್ಲಿ ಬರೆಯಲು ನಿರ್ಧರಿಸಿದರು.
'ಎಲ್ಲಾ ಮತಗಳ ಧರ್ಮಗ್ರಂಥದಂತೆ ರಾಮಾಯಣ ಸಹ ನಮಗೆ ಶಾಂತಿ ಮತ್ತು ಭ್ರಾತೃತ್ವದ ಸಂದೇಶ ನೀಡುತ್ತದೆ. ಇದನ್ನು ಬಹಳ ಸುಂದರವಾಗಿ ಬರೆಯಲಾಗಿದೆ. ಈ ಮಹಾಗ್ರಂಥವನ್ನು ಉರ್ದುವಿನಲ್ಲಿ ಬರೆದ ನಂತರ ನಾನು ನಿರಾಳವಾಗಿದ್ದೇನೆ, ಮನಸ್ಸು ಶಾಂತವಾಗಿದೆ' ಎಂದು ಮಹಿ ಹೇಳಿದ್ದಾರೆ.

ಈ ಕೃತಿ ಬರೆಯುವುದಕ್ಕೆ ಮಹಿ ಅವರು ಒಂದೂವರೆ ವರ್ಷ ತೆಗೆದುಕೊಂಡಿದ್ದಾರೆ. ಈ ಅನುವಾದದಿಂದ ಮೂಲ ಕೃತಿಗೆ ಯಾವುದೇ ದಕ್ಕೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
'ಸಮಾಜದಲ್ಲಿ ಕೆಲವು ಜನರು ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಹರಡುತ್ತಿದ್ದಾರೆ. ಆದರೆ ಯಾವುದೇ ಧರ್ಮವೂ ಪರಸ್ಪರ ದ್ವೇಷಿಸುವ ಅಥವಾ ಹಿಂಸಿಸುವ ಸಂದೇಶ ನೀಡುವುದಿಲ್ಲ. ಎಲ್ಲಾ ಧರ್ಮದ ಜನರೂ ಒಟ್ಟಿಗೇ ಸೌಹಾರ್ದಯುತವಾಗಿ ಬದುಕಬೇಕು. ಪರಸ್ಪರ ಎಲ್ಲಾ ಧರ್ಮಗಳನ್ನೂ ಗೌರವಿಸುವುದೂ ಅಷ್ಟೇ ಮುಖ್ಯ ಎಂದು ಅವರು ಹೇಳಿದ್ದಾರೆ.'
ಹಿಮದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಹಿ, ತಾವು ತಮ್ಮ ಬರಹದ ಮೂಲಕ ಕೋಮು ಸೌಹಾರ್ದಕ್ಕೆ ನಿರಂತರ ಶ್ರಮಿಸುವುದಾಗಿ ಹೇಳಿದ್ದಾರೆ.












Click it and Unblock the Notifications