ಆರೆಸ್ಸೆಸ್ ಮುಖಂಡನ ಹತ್ಯೆ ಖಂಡಿಸಿ ಕೇರಳ ಬಂದ್
ತಿರುವನಂತಪುರಂ, ಸೆ. 2: ಕಣ್ಣೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನ ಹತ್ಯೆ ಖಂಡಿಸಿ ಮಂಗಳವಾರ ನಡೆದಿರುವ ಕೇರಳ ಬಂದ್ ಹಿಂಸಾಚಾರಕ್ಕೆ ತಿರುಗಿದೆ. ಅಲ್ಲಲ್ಲಿ ಕಲ್ಲು ತೂರಾಟಗಳ ವರದಿ ಬಂದಿದ್ದು, ರಾಜ್ಯದ ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬೆಳಗ್ಗೆಯಿಂದಲೇ ಅಂಗಡಿ-ಮುಂಗಟ್ಟುಗಳು ಮುಚ್ಚಲಾಗಿತ್ತು. ಸಾರ್ವಜನಿಕ ಸೇವೆ ಒದಗಿಸುವ ಬಸ್, ಟ್ಯಾಕ್ಸಿ, ಆಟೋರಿಕ್ಷಾಗಳು ರಸ್ತೆಗಿಳಿದಿಲ್ಲ. ಮುನ್ನಚ್ಚರಿಕೆಯಿಂದ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ರಾಜ್ಯದ ವಿವಿಧೆಡೆ ನಡೆಯಬೇಕಿದ್ದ ವಿವಿಧ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ.
ಆದರೆ, ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿರುವ ಪೊಲೀಸರು ಪರಿಸ್ಥಿತಿ ಎಲ್ಲೆಡೆ ನಿಯಂತ್ರಣದಲ್ಲಿದೆ. ಒಂದೆರಡು ಜಿಲ್ಲೆಗಳಲ್ಲಿ ಕಲ್ಲು ತೂರಾಟ, ಹಿಂಸಾಚಾರ ಘಟನೆ ಸಂಭವಿಸಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.

ಕಣ್ಣೂರು ಜಿಲ್ಲೆಯ ಆರೆಸ್ಸೆಸ್ ಘಟಕದ ಮುಖ್ಯಸ್ಥ 42 ವರ್ಷ ವಯಸ್ಸಿನ ಮನೋಜ್ ಎಂಬುವವರನ್ನು ದುಷ್ಕರ್ಮಿಗಳು ಸೋಮವಾರ ಹತ್ಯೆ ಮಾಡಿದ್ದರು. ಮನೋಜ್ ಹಾಗೂ ಸಹಚರರರು ಹೋಗುತ್ತಿದ್ದ ಕಾರಿನ ಮೇಲೆ ನಾಡಬಾಂಬ್ ಎಸೆಯಲಾಗಿದೆ. ಗಾಬರಿಯಿಂದ ಕಾರಿನಿಂದ ಹೊರ ಬಿದ್ದ ಮನೋಜ್ ರನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲ್ಲಲಾಗಿತ್ತು. ಘಟನೆಯನ್ನು ಖಂಡಿಸಿ ಕೇರಳದಾದ್ಯಂತ ಮುಂಜಾನೆಯಿಂದ ಮುಸ್ಸಂಜೆ ತನಕದ ಬಂದ್ ಗೆ ಆರೆಸ್ಸೆಸ್ ಕರೆ ನೀಡಿತ್ತು. [ಕಣ್ಣೂರಿನಲ್ಲಿ ಆರ್ಎಸ್ಎಸ್ ಮುಖಂಡನ ಹತ್ಯೆ ]
ಮನೋಜ್ ಅವರ ಹತ್ಯೆ ಹಿಂದೆ ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷದ ಕೈವಾಡ ಇದೆ ಎಂದು ಆರೆಸ್ಸೆಸ್-ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಈ ಸಂಬಂಧ ನಾಲ್ವರು ಸಿಪಿಐಎಂ ಕಾರ್ಯಕರ್ತರನ್ನ ಕಸ್ಟಡಿಗೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೇರಳ ಪ್ರವಾಸ ಮುಗಿಸಿ ಹಿಂತಿರುಗಿದ ಮೇಲೆ ಈ ಘಟನೆ ನೀಡಿರುವುದು ಆತಂಕಕಾರಿ ಎಂದು ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ.
ಆರೆಸ್ಸೆಸ್ ಹಾಗೂ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರ ನಡುವೆ ಹಲವಾರು ವರ್ಷಗಳಿಂದ ಹರತಾಳ ನಡೆಯುತ್ತಲೇ ಬಂದಿದೆ. ಆದರೆ, ಹತ್ಯೆ ಮಾಡುವ ಹಂತಕ್ಕೆ ಇಳಿದಿರುವುದು ದುರಂತ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಬಂದ್ ಕರೆ ನೀಡಿರುವುದನ್ನು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಖಂಡಿಸಿದ್ದಾರೆ. (ಪಿಟಿಐ)












Click it and Unblock the Notifications